ಬೆಂಗಳೂರು: ಬೆಂಗಳೂರು ನಗರವನ್ನು ನಿರ್ಮಿಸಿದ ನಾಡಪ್ರಭು ಕೆಂಪೇಗೌಡರು ಕೆರೆಗಳು ಮತ್ತು ಸಾಲುಮರಗಳಿಂದ ತಂಪಾದ ಹವೆ ಉಂಟಾಗುವಂತೆ ಮಾದರಿಯಾಗಿ ನಗರವನ್ನು ನಿರ್ಮಿಸಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ಅಭಿಪ್ರಾಯಪಟ್ಟರು.
ಕಸಾಪ ಕಚೇರಿಯಲ್ಲಿ ಗುರುವಾರ ಆಯೋಜಿತವಾಗಿದ್ದ ಕೆಂಪೇಗೌಡ ಜಯಂತಿ ವೇಳೆ ನಾಡಪ್ರಭುಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಸಾಮಂತ ದೊರೆಗಳಾಗಿದ್ದರೂ ವಿಜಯನಗರದ ರಾಜಧಾನಿ ಹಂಪಿಯ ಮಾದರಿಯನ್ನಾಧರಿಸಿ 1537ರಲ್ಲಿ ಬೆಂಗಳೂರು ನಗರವನ್ನು ಕೆಂಪೇಗೌಡರು ನಿರ್ಮಿಸಿದರು. ಅವರು ರೂಪಿಸಿದ ಕಾವಲು ಗೋಪುರಗಳು ನಗರಕ್ಕೆ ಇರಬೇಕಾದ ಮಿತಿಯನ್ನು ಸೂಚಿಸುತ್ತಿದ್ದವು. ಈ ಮಿತಿಯೊಳಗಿದ್ದರೆ ನಗರಕ್ಕೆ ಬೇಕಾದ ನೀರು, ಆಹಾರದ ವ್ಯವಸ್ಥೆಯನ್ನು ಒದಗಿಸಲು ಸಾಧ್ಯವೆಂದು ಅರಿತಿದ್ದರು. ಈ ಮಿತಿಯನ್ನು ಮೀರಿದ ಪರಿಣಾಮವನ್ನು ನಾವಿಂದು ಸಮಸ್ಯೆಯನ್ನು ಎದುರಿಸುತ್ತಿದ್ದೇವೆ ಎಂದರು.
ಕೆಂಪೇಗೌಡರು ಕಲೆ, ಸಾಹಿತ್ಯದ ಪೋಷಕರಾಗದ್ದರು. ಮುಖ್ಯವಾಗಿ ಕನ್ನಡ ಭಾಷೆಯ ಪ್ರೇಮಿಗಳಾಗಿದ್ದರು. ಈ ಕಾರಣದಿಂದಲೇ ಮುಂದೆ ಬೆಂಗಳೂರಿನಲ್ಲಿ ಕಲೆ, ಸಂಸ್ಕೃತಿ, ಶಿಕ್ಷಣ ಸಂಸ್ಥೆಗಳು ಬೆಳೆಯಲು ಸಾಧ್ಯವಾಯಿತು. ಇಂದಿಗೂ ಹೊಸ ನಗರವನ್ನು ನಿರ್ಮಿಸುವಾಗ ಬೆಂಗಳೂರನ್ನು ಮಾದರಿಯಾಗಿ ನೋಡುತ್ತಾರೆ ಎನ್ನುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯ ಎಂದು ಡಾ. ಮಹೇಶ ಜೋಶಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಕಸಾಪ ಪದಾಧಿಕಾರಿಗಳಾದ ಬಿ.ಎಂ.ಪಟೇಲ್ ಪಾಂಡು, ಡಾ.ಪದ್ಮಿನಿ ನಾಗರಾಜು ಹಾಗೂ ಇತರರಿದ್ದರು.