ಬೆಂಗಳೂರು: ಕರೊನಾ ವೈರಸ್ Covid 19 ಸೋಂಕು ತೀವ್ರಗೊಳ್ಳುತ್ತಿರುವ ಕಾರಣ ಮುಂಜಾಗ್ರತಾ ಕ್ರಮವಾಗಿ ಒಂದು ವಾರ ಕಾಲ ಕರ್ನಾಟಕ ಬಂದ್ ಘೋಷಣೆಯನ್ನು ಇನ್ನಷ್ಟು ದಿನಗಳವರೆಗೆ ವಿಸ್ತರಿಸುವತ್ತ ಸರ್ಕಾರ ಒಲವು ವ್ಯಕ್ತಪಡಿಸಿದೆ. ಕಳೆದ ವಾರ ಘೋಷಿಸಿದ ಬಂದ್ ಅವಧಿ ಶನಿವಾರ ಮುಕ್ತಾಯ ಗೊಳ್ಳುತ್ತಿದ್ದು, ಸೋಂಕು ಹರಡದಂತೆ ತಡೆಯಲು ಹೆಚ್ಚಿನ ಮುತುವರ್ಜಿ ತೆಗೆದುಕೊಳ್ಳಬೇಕು ಎಂಬ ಕಾರಣಕ್ಕೆ ಈ ಬಗ್ಗೆ ನಿರ್ಣಯ ತೆಗೆದುಕೊಳ್ಳಲು ಸರ್ಕಾರ ತೀರ್ಮಾನಿಸಿದೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಈ ಬಗ್ಗೆ ಬುಧವಾರ ಸುದ್ದಿಗಾರರ ಜತೆಗೆ ಮಾತನಾಡಿ, ಮಧ್ಯಾಹ್ನ ಸಚಿವ ಸಂಪುಟ ಸಭೆಯಲ್ಲಿ ಕರೊನಾ ಸೋಂಕು ಕುರಿತು ವಿಸ್ತೃತ ಚರ್ಚೆ ನಡೆಯಲಿದೆ. ಬಳಿಕ ಒಂದು ತೀರ್ಮಾನಕ್ಕೆ ಬಂದು ಇನ್ನಷ್ಟು ಕ್ರಮಗಳ ವಿವರಗಳನ್ನು ಸಂಜೆ ವೇಳೆಗೆ ತಿಳಿಸುವುದಾಗಿ ಘೋಷಿಸಿದ್ದಾರೆ.
ಕರೊನಾ ವೈರಸ್ ಸೋಂಕು ತಡೆಗೆ ಸಾಕಷ್ಟು ಕ್ರಮಗಳನ್ನು ಈಗಾಗಲೇ ತೆಗೆದುಕೊಳ್ಳಲಾಗಿದೆ. ಪರಿಣಾಮ ಒಂದಷ್ಟು ಸುಧಾರಣೆಗಳನ್ನು ನಾವು ಕಂಡಿದ್ದೇವೆ. ಆದಾಗ್ಯೂ, ಸೋಂಕು ಹರಡುವ ಕಾರಣ ಇನ್ನಷ್ಟು ದಿನಗಳ ಅವಧಿಗೆ ರಾಜ್ಯದಲ್ಲಿ ಸಾರ್ವಜನಿಕ ಕಾರ್ಯಕ್ರಮ, ಚಟುವಟಿಕೆಗಳನ್ನು ಸ್ಥಗಿತಗೊಳಿಸುವುದು ಅನಿವಾರ್ಯ. ಅಮೆರಿಕದಂತಹ ಮುಂದುವರಿದ ರಾಷ್ಟ್ರಗಳಲ್ಲೇ ಅಷ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತಿರುವಾಗ ನಾವು ಇನ್ನೂ ಹೆಚ್ಚಿನ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಬೇಕಾಗುತ್ತದೆ ಎಂದು ಸಿಎಂ ಹೇಳಿದರು.