ಗೃಹ ಆರೋಗ್ಯ ಜಾರಿಗೆ ಸಿದ್ಧತೆ; ಎಂಟು ರಾಜ್ಯಗಳಲ್ಲಿ ಅನುಷ್ಠಾನ
ಬೆಂಗಳೂರು: ಮನೆಬಾಗಿಲಿಗೆ ಔಷಧ ಪೆಟ್ಟಿಗೆ ವಿತರಿಸುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ‘ಗೃಹ ಯೋಜನೆ’ ವಿಳಂಬವಾಗಿದ್ದು, 8 ಜಿಲ್ಲೆಗಳಲ್ಲಿ ಜಾರಿಗೆ ಆರೋಗ್ಯ ಇಲಾಖೆ ಸಿದ್ಧತೆ ನಡೆಸಿದೆ. ಅಸಾಂಕ್ರಾಮಿಕ ರೋಗಗಳ ತಡೆ ಮತ್ತು ನಿಯಂತ್ರಣ ಕಾರ್ಯಕ್ರಮದಡಿ ಸುಮಾರು 96 ಕೋಟಿ ರೂ. ವೆಚ್ಚದಲ್ಲಿ ಯೋಜನೆ ಜಾರಿಯಾಗುತ್ತಿದ್ದು, ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಸಮಸ್ಯೆ ಎದುರಿಸುತ್ತಿರುವವರಿಗೆ ಮೂರು ತಿಂಗಳಿಗೆ ಆಗುವಷ್ಟು ಮಾತ್ರೆಗಳನ್ನು ವಿತರಿಸಲಾಗುವುದು. ಈ ಸಂಬಂಧ 64 ಕೋಟಿ ರೂ. ವೆಚ್ಚದಲ್ಲಿ ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮದಿಂದ ಔಷಧ ಖರೀದಿಸಲಾಗುವುದು. ಮನೆ ಮನೆ ಆರೋಗ್ಯ ತಪಾಸಣೆ ವೇಳೆ ಸಮಸ್ಯೆ ದೃಢಪಟ್ಟವರಿಗೆ ಹಾಗೂ ಈಗಾಗಲೇ ಸಮಸ್ಯೆ ಇರುವವರಿಗೆ 90 ಮಾತ್ರೆಗಳನ್ನು ಒಳಗೊಂಡ ಔಷಧ ಪೆಟ್ಟಿಗೆಗಳನ್ನು ಉಚಿತವಾಗಿ ನೀಡಲಾಗುವುದು. ಲೋಕಸಭಾ ಚುನಾವಣೆ ಹಿನ್ನೆಲೆ ವಿಳಂಬವಾಗಿದ್ದ ಯೋಜನೆ ಅಂತೂ ಇಂತೂ ಅನುಷ್ಠಾನವಾಗುತ್ತಿದೆ.
30 ವರ್ಷ ಮೇಲ್ಪಟ್ಟವರು ಅರ್ಹರು: ಮೊದಲ ಬಾರಿಗೆ ನೀಡಿದ ಮಾತ್ರೆಗಳು ಖಾಲಿಯಾದ ಬಳಿಕ ಮತ್ತೆ ಮೂರು ತಿಂಗಳಿಗೆ ಆಗುವಷ್ಟು ಮಾತ್ರೆಗಳನ್ನು ತಲುಪಿಸಲಾಗುತ್ತದೆ. 30 ವರ್ಷ ಮೇಲ್ಪಟ್ಟವರು ಮಾತ್ರೆಗಳನ್ನು ಪಡೆಯಲು ಅರ್ಹರು. ಮಧುಮೇಹ ಹಾಗೂ ಅಧಿಕ ರಕ್ತದೊತ್ತಡಕ್ಕೆ ತಲಾ ಮೂರು ಮಾದರಿ ಮಾತ್ರೆಗಳನ್ನು ಸರ್ಕಾರ ಗುರುತಿಸಿದೆ. ಅವುಗಳನ್ನು ಮಾತ್ರವೇ ನೀಡಲಾಗುವುದು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಯಾವ್ಯಾವ ಮಾತ್ರೆಗಳು ಲಭ್ಯ?
ರಕ್ತದ ಒತ್ತಡಕ್ಕೆ ಅಮ್ಲೋಡಿಪೈನ್ 5 ಎಂಜಿ, ಟೆಲ್ಮಿಸಾರ್ಟನ್ 40 ಮತ್ತು 80 ಎಂಜಿ, ಹೈಡ್ರೋ ಕ್ಲೋರೋಥಿಯಾಜೈಡ್ 12.5 ಎಂಜಿ, ಮಧುಮೇಹಕ್ಕೆ ಮೆಟ್ಫಾರ್ವಿುನ್ ಎಸ್ಆರ್ 500 ಎಂಜಿ, ಮೆಟ್ಫಾರ್ವಿುನ್ ಎಸ್ಆರ್ 1000 ಎಂಜಿ ಮತ್ತು ಗ್ಲಿಮೆಪಿರೈಡ್ 1 ಎಂಜಿ ಮಾತ್ರೆಗಳನ್ನು ಗುರುತಿಸಲಾಗಿದೆ. ಔಷಧ ಪಡೆದ ವ್ಯಕ್ತಿಯ ಹೆಸರು ಹಾಗೂ ವಿವರಗಳನ್ನು ಆರೋಗ್ಯ ಇಲಾಖೆ ದಾಖಲಿಸಿಕೊಳ್ಳಲಿದೆ.
ತರಬೇತಿ ಕಾರ್ಯಕ್ರಮ
ಜಿಲ್ಲಾ ಆರೋಗ್ಯಾಧಿಕಾರಿ ಹಾಗೂ ಜಿಲ್ಲಾ ಕಣ್ಗಾವಲು ಅಧಿಕಾರಿಗಳಿಗೆ ರಾಷ್ಟ್ರೀಯ ಆರೋಗ್ಯ ಅಭಿಯಾನದ ವ್ಯವಸ್ಥಾಪಕ ನಿರ್ದೇಶಕರ ನೇತೃತ್ವದಲ್ಲಿ ತರಬೇತಿ ನೀಡಲಾಗುತ್ತಿದೆ. ಇವರು ಜಿಲ್ಲೆಗಳಲ್ಲಿ ಸಭೆ ನಡೆಸಿ, ವೈದ್ಯಾಧಿಕಾರಿಗಳಿಗೆ ಹಾಗೂ ಅವರು ಪ್ರಾಥಮಿಕ ಆರೋಗ್ಯ ಕೇಂದ್ರಗಳಡಿ ಮುಖ್ಯ ಆರೋಗ್ಯಾಧಿಕಾರಿ, ಸಮುದಾಯ ಆರೋಗ್ಯಾಧಿಕಾರಿ, ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಸಹಾಯಕರಿಗೆ ತರಬೇತಿ ನೀಡಲಿದ್ದಾರೆ.
ಎಷ್ಟು ಮನೆಗಳಿಗೆ ಭೇಟಿ?
ತಪಾಸಣಾ ತಂಡವು ಪ್ರತಿ ಸೋಮವಾರ, ಬುಧವಾರ ಹಾಗೂ ಶುಕ್ರವಾರ ತಲಾ 20 ಮನೆಗಳಿಗೆ ಭೇಟಿ ನೀಡಲಿದೆ. ಈ ವೇಳೆ ಬಾಯಿ, ಸ್ತನ ಹಾಗೂ ಗರ್ಭಕಂಠದ ಕ್ಯಾನ್ಸರ್ ಪತ್ತೆಗೂ ತಪಾಸಣೆ ನಡೆಸಲಿದೆ. ಕ್ಯಾನ್ಸರ್ ದೃಢಪಟ್ಟಲ್ಲಿ ಚಿಕಿತ್ಸೆಗೆ ಆಸ್ಪತ್ರೆಗಳಿಗೆ ಶಿಫಾರಸು ಮಾಡಲಾಗುತ್ತದೆ. ಮನೆ ಮನೆ ಭೇಟಿ ದೃಢಪಡಿಸಲು ಮನೆಗಳಿಗೆ ಸ್ಟಿಕರ್ಗಳನ್ನು ಅಂಟಿಸಲಾಗುವುದು.
ಗೃಹ ಆರೋಗ್ಯ ಯೋಜನೆ ಸಂಬಂಧ ಮಾರ್ಚ್ನಲ್ಲಿಯೇ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಾರಿಗೊಳಿಸಲು ಆಗಲಿಲ್ಲ. ನೀತಿಸಂಹಿತೆ ತೆರವಾದ ಕೂಡಲೇ ಚಾಲನೆ ನೀಡಲಾಗುವುದು.
| ಡಾ. ಶ್ರೀನಿವಾಸ್ ರಾಜ್ಯ ಎನ್ಸಿಡಿ ವಿಭಾಗ, ಆರೋಗ್ಯ ಇಲಾಖೆ ಉಪನಿರ್ದೇಶಕಿ
ಅಂದು ಅವಮಾನ ಇಂದು ಸನ್ಮಾನ: ಇದಕ್ಕೆ ಹೇಳೋದು… ಹಾರ್ದಿಕ್ಗೆ ಫ್ಯಾನ್ಸ್ ಕೊಟ್ಟ ಸಂದೇಶವಿದು!