ವಿಜಯವಾಣಿ ಸುದ್ದಿಜಾಲ ಕೋಟ
ಯಕ್ಷಗಾನದ ಸರ್ವಾಂಗವನ್ನೂ ಬಲ್ಲ ಅನೇಕರ ಪರಂಪರೆ ಕೊಂಡಿ ಬಡಗುತಿಟ್ಟಿನ ಹಿರಿಯ ಭಾಗವತ ಹೆರೆಂಜಾಲು ಗೋಪಾಲ ಗಾಣಿಗರು. ಯಕ್ಷರಂಗದಲ್ಲಿ ಹಂತ ಹಂತವಾಗಿ ಮೇಲೆ ಬಂದು ಭಾಗವತಿಗೆ ಕಲಿತು ಮೇಳ ಸೇರಿದವರು. ಸಾಮಾಜಿಕ, ಪೌರಾಣಿಕ, ಐತಿಹಾಸಿಕ ಪ್ರಸಂಗಗಳ ಮೂರು ಘಟಕದಲ್ಲಿಯೂ ಛಾಪು ಮೂಡಿಸಿದವರು ಎಂದು ಪ್ರಸಂಗಕರ್ತ ಪ್ರಸಾದ್ ಕುಮಾರ್ ಮೊಗೆಬೆಟ್ಟು ಹೇಳಿದರು.
ತೆಕ್ಕಟ್ಟೆ ಹಯಗ್ರೀವದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಯಶಸ್ವೀ ಕಲಾವೃಂದದ ಸಹಕಾರದೊಂದಿಗೆ ಯಕ್ಷಾಂತರಂಗ-ವ್ಯವಸಾಯೀ ಯಕ್ಷ ತಂಡದ ‘ಯಕ್ಷ ದುಂದುಭಿ-2024’ರಲ್ಲಿ ಕಾರಂತ ಯಕ್ಷಾಂತರಂಗ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹೆರೆಂಜಾಲು ಗೋಪಾಲ ಗಾಣಿಗರಿಗೆ ಪ್ರಶಸ್ತಿ ಪ್ರದಾನಿಸಿ ಮಾತನಾಡಿದರು.
ಶಾಸಕ ಕಿರಣ್ ಕುಮಾರ್ ಕೊಡ್ಗಿ ಕಾರ್ಯಕ್ರಮ ಉದ್ಘಾಟಿಸಿದರು. ಯಕ್ಷಗಾನ ಅಕಾಡೆಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿಯವರನ್ನು ಗೌರವಿಸಲಾಯಿತು. ವಿಜಯ ಬ್ಯಾಂಕ್ನ ನಿವೃತ್ತ ಪ್ರಬಂಧಕ ಭುವನಪ್ರಸಾದ್ ಹೆಗ್ಡೆ, ಪ್ರೊ.ಸಿ.ಉಪೇಂದ್ರ ಸೋಮಯಾಜಿ, ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ ಸ್ಥಾಪಕ ವಿಶ್ವನಾಥ ಶೆಣೈ ಉಡುಪಿ, ಮಣೂರು ಸುಬ್ರಾಯ ಆಚಾರ್ ಉಪಸ್ಥಿತರಿದ್ದರು. ಕಾರ್ಯದರ್ಶಿ ಕೃಷ್ಣಮೂರ್ತಿ ಉರಾಳ ಸ್ವಾಗತಿಸಿ, ಕೃಷ್ಣಮೂರ್ತಿ ಬ್ರಹ್ಮಾವರ ವಂದಿಸಿದರು. ಬಳಿಕ ಯಕ್ಷಾಂತರಂಗದ ಕಲಾವಿದರಿಂದ ‘ಶರಸೇತುಬಂಧ’ ಮತ್ತು ‘ಸುಭದ್ರಾ ಕಲ್ಯಾಣ’ ಪ್ರಸಂಗ ಪ್ರದರ್ಶನಗೊಂಡಿತು.