ಉಪ್ಪಿನಬೆಟಗೇರಿ: ಕಾರಹುಣ್ಣಿಮೆ ಅಂಗವಾಗಿ ಹನುಮನಕೊಪ್ಪ ಗ್ರಾಮದಲ್ಲಿ ರೈತರು ಶುಕ್ರವಾರ ಎತ್ತುಗಳನ್ನು ವಿಶೇಷವಾ ಸಿಂಗರಿಸಿ ಹಬ್ಬ ಆಚರಿಸಿ ಸಂಭ್ರಮಿಸಿದರು.
ಎತ್ತುಗಳಿಗೆ ಅಲಂಕಾರಿಕ ಬಣ್ಣಗಳನ್ನು ಹಚ್ಚಿ, ಕೋಡಣಸು, ಜೂಲುಗಳನ್ನು ಹಾಕಿ ಸಿಂಗರಿಸಲಾಗಿತ್ತು. ಸಂಜೆ ಅಗಸಿಯಲ್ಲಿ ಎಲ್ಲ ಎತ್ತುಗಳನ್ನು ಒಟ್ಟುಗೂಡಿಸಿ ಎತ್ತಿನ ಕೋಡು ಮತ್ತು ಕೊರಳಿಗೆ ಕಡುಬು, ಕೋಡುಬಳೆ, ವಡೆ, ಕರಚಿಕಾಯಿ, ಶೇಂಗಾಕಾಯಿ ಮಾಲೆ, ಗಾರಿಗೆ, ಕೊಬ್ಬರಿ ಬಟ್ಟಲು ಸೇರಿದಂತೆ ವಿವಿಧ ಖಾದ್ಯ ಪದಾರ್ಥಗಳನ್ನು ಕಟ್ಟಿ ಸಾಲಾಗಿ ನಿಲ್ಲಿಸಲಾಗಿತ್ತು. ಎತ್ತುಗಳಿಗೆ ಸ್ವಾಮೀಜಿಯಿಂದ ಪೂಜೆ ಸಲ್ಲಿಸಿದ ನಂತರ ಎರಡು ಎತ್ತುಗಳಿಗೆ ಮುಂಗಾರು ಮತ್ತು ಹಿಂಗಾರು ಎಂದು ನಾಮಕರಣ ಮಾಡಿ ಓಡಿಸಲಾಯಿತು. ಎತ್ತುಗಳ ಹಿಂದೆ ಜನರು ಓಡುತ್ತ ಅವುಗಳಿಗೆ ಕಟ್ಟಿದ್ದ ಖಾದ್ಯಗಳನ್ನು ಹರಿದು ತಿನ್ನುವುದು ಕಂಡು ಬಂದಿತು.
ನಮ್ಮೂರಲ್ಲಿ ಹಲವಾರು ವರ್ಷಗಳಿಂದಲೂ ಈ ಸಂಪ್ರದಾಯ ನಡೆಯುತ್ತಿದ್ದು ಇಂದಿಗೂ ಮುಂದುವರಿಸಿಕೊಂಡು ಹೋಗುತ್ತಿದ್ದೇವೆ ಎಂದು ರೈತ ಹನುಮಂತಪ್ಪ ಜಾಕೋಜಿ ತಿಳಿಸಿದರು.
ಧರೆಪ್ಪ ಬೊಬ್ಬಿ, ಧರಣೇಂದ್ರ ದಿಂಡಲಕೊಪ್ಪ, ಶೇಖಪ್ಪ ಜಾಧವ, ನಾಗಪ್ಪ ಹುಗ್ಗಿ, ಶೇಖಪ್ಪ ಛಬ್ಬಿ, ವಿನೋದ ಕಾಗಿ, ನ್ಯಾಮಣ್ಣ ಛಬ್ಬಿ, ಹನುಮಂತ ಜಾಕೋಜಿ, ಭೀಮಸಿ ಛಬ್ಬಿ, ಧರಣೇಂದ್ರ ಅಷ್ಟಗಿ, ಶಂಕರ ಅರಳಿಕಟ್ಟಿ, ಆನಂದ ಬಡಿಗೇರ, ಅಶೋಕ ಹೊಸಮನಿ, ಶಿವಪ್ಪ ದೊಡಮನಿ ಇತರರಿದ್ದರು.