More

    ಅಂಬೇಡ್ಕರ್ ಭವನ ಅಪೂರ್ಣ: ಜನತಾ ದರ್ಶನ ಸಭೆಗೆ ಕಪ್ಪು ಪಟ್ಟಿ ಧರಿಸಿ ಹಾಜರಾಗುವ ಎಚ್ಚರಿಕೆ

    ವಿಜಯವಾಣಿ ಸುದ್ದಿಜಾಲ ಸುಳ್ಯ

    ಸುಳ್ಯದ ಅಂಬೇಡ್ಕರ್ ಭವನ ಕಾಮಗಾರಿ ಆರಂಭಿಸಿ ಹದಿನೈದು ವರ್ಷಗಳೇ ಕಳೆದರೂ ಪೂರ್ತಿಯಾಗದ ಹಿನ್ನೆಲೆಯಲ್ಲಿ ಜುಲೈ 9ರಂದು ನಡೆಯುವ ಜನತಾ ದರ್ಶನ ಸಭೆಗೆ ಕಪ್ಪು ಪಟ್ಟಿ ಧರಿಸಿ ಹಾಜರಾಗುವುದಾಗಿ ಪ.ಜಾತಿ ಪ.ಪಂಗಡ ಸಮುದಾಯದ ಮುಖಂಡರು ಎಚ್ಚರಿಕೆ ನೀಡಿದ್ದಾರೆ.

    ಶುಕ್ರವಾರ ಸುಳ್ಯ ತಾಲೂಕು ಪ.ಜಾತಿ, ಪ.ಪಂಗಡದವರ ಕುಂದು ಕೊರತೆ ನಿವಾರಣಾ ಸಮಿತಿ ಸಭೆಯಲ್ಲಿ ಮುಖಂಡರು ಈ ಎಚ್ಚರಿಕೆ ನೀಡಿದರು.

    ಸುಳ್ಯ ತಹಸೀಲ್ದಾರ್ ಜಿ.ಮಂಜುನಾಥ್ ಅಧ್ಯಕ್ಷತೆಯಲ್ಲಿ ತಾಪಂ ಸಭಾಂಗಣದಲ್ಲಿ ನಡೆದ ಸುಳ್ಯ ತಾಲೂಕು ಮಟ್ಟದ ಪ.ಜಾತಿ, ಪ.ಪಂಗಡದವರ ಕುಂದು ಕೊರತೆ ನಿವಾರಣಾ ಸಮಿತಿ ಸಭೆಯಲ್ಲಿ ಸುಳ್ಯದ ಅಂಬೇಡ್ಕರ್ ಭವನ ಕಾಮಗಾರಿ ವಿಳಂಬ ಕುರಿತು ನಂದರಾಜ ಸಂಕೇಶ್ ಪ್ರಸ್ತಾಪಿಸಿದರು. 15 ವರ್ಷಗಳ ಹಿಂದೆ ಸುಳ್ಯದ ಅಂಬೇಡ್ಕರ್ ಭವನ ಕಾಮಗಾರಿ ಆರಂಭಗೊಂಡಿದ್ದರೂ ಇಂದಿಗೂ ಪೂರ್ತಿ ಆಗಿಲ್ಲ. ಇದು ದುರದೃಷ್ಟಕರ ಎಂದರು. ಇದಕ್ಕೆ ಧ್ವನಿಗೂಡಿಸಿದ ಇನ್ನೋರ್ವ ಮುಖಂಡ ಆನಂದ ಬೆಳ್ಳಾರೆ, ಪ್ರತೀ ಸಭೆಯಲ್ಲಿಯೂ ಅಂಬೇಡ್ಕರ್ ಭವನ ಪೂರ್ತಿಗೊಳಿಸಲು ಒತ್ತಾಯಿಸಿದರೂ ಆಗುತ್ತಿಲ್ಲ. ಆದ್ದರಿಂದ ಜುಲೈ 9ರಂದು ಜನತಾದರ್ಶನ ಸಭೆಯ ಒಳಗೆ ಈ ಕುರಿತು ಸ್ಪಷ್ಟ ಚಿತ್ರಣ ನಮಗೆ ನೀಡದಿದ್ದರೆ, ನಾವು ಕಪ್ಪು ಪಟ್ಟಿ ಧರಿಸಿ ಭಾಗವಹಿಸುತ್ತೇವೆ ಎಂದು ಹೇಳಿದರು.

    ಉತ್ತರಿಸಿದ ತಾ.ಪಂ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಅಂಬೇಡ್ಕರ್ ಭವನ ಕಾಮಗಾರಿ ಕುರಿತು ಚರ್ಚಿಸಲು ಶಾಸಕರ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ಶೀಘ್ರ ನಡೆಸಲಾಗುವುದು ಎಂದರು.

    ತಹಸೀಲ್ದಾರ್ ಜಿ.ಮಂಜುನಾಥ್, ತಾ.ಪಂ ಇಒ ರಾಜಣ್ಣ, ಸಮಾಜ ಕಲ್ಯಾಣ ಇಲಾಖೆಯ ಸಮಾಜ ಸಹಾಯಕ ನಿರ್ದೇಶಕಿ ಉಮಾ ದೇವಿ, ಎಸ್‌ಐ ಸರಸ್ವತಿ, ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ಬಿ.ಇ., ಪ್ರೊಬೇಷನರಿ ಎಸಿಎಫ್ ಶಿವಾನಂದ್ ಉಪಸ್ಥಿತರಿದ್ದರು.

    ಸಮುದಾಯದ ಮುಖಂಡರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts