ನವದೆಹಲಿ: ನಿನ್ನೆ (ಜೂ.29) ಬಾರ್ಬಡೋಸ್ನ ಕೆನ್ಸಿಂಗ್ಟನ್ ಓವಲ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಐಸಿಸಿ ಟಿ20 ವಿಶ್ವಕಪ್ ಫೈನಲ್ ಗೆದ್ದ ಭಾರತ, 17 ವರ್ಷಗಳ ಬಳಿಕ ರೋಹಿತ್ ಶರ್ಮಾ ನಾಯಕತ್ವದಲ್ಲಿ ವಿಶ್ವಕಪ್ ಟ್ರೋಫಿಗೆ ಮುತ್ತಿಟ್ಟಿತು. ಈ ಖುಷಿಯಲ್ಲಿದ್ದ ಭಾರತೀಯರಿಗೆ ಕ್ಯಾಪ್ಟನ್ ರೋಹಿತ್ ಮತ್ತು ರನ್ ಮಷಿನ್ ವಿರಾಟ್ ಕೊಹ್ಲಿ ಟಿ20 ಮಾದರಿಗೆ ನಿವೃತ್ತಿ ಘೋಷಿಸಿದ್ದು, ಅತೀವ ನೋವನ್ನು ಉಂಟುಮಾಡಿತು. ಇದೀಗ ಇವರಿಬ್ಬರ ಬೆನ್ನಲ್ಲೇ ಟೀಮ್ ಇಂಡಿಯಾದ ಸ್ಟಾರ್ ಆಲ್ರೌಂಡರ್ ಕೂಡ ನಿವೃತ್ತಿ ಘೋಷಿಸಿದ್ದಾರೆ.
ರೋಹಿತ್, ಕೊಹ್ಲಿ ನಂತರ ಇದೀಗ ಟಿ20 ಕ್ರಿಕೆಟ್ಗೆ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ ನಿವೃತ್ತಿ ಘೋಷಿಸಿದ್ದಾರೆ. ಈ ಸುದ್ದಿ ತಿಳಿದ ಕ್ರಿಕೆಟ್ ಅಭಿಮಾನಿಗಳು ಭಾರೀ ಅಚ್ಚರಿಗೆ ಒಳಗಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ತಮ್ಮ ನೆಚ್ಚಿನ ಕ್ರಿಕೆಟಿಗನಿಗೆ ಧನ್ಯವಾದಗಳ ಸುರಿಮಳೆಯನ್ನೇ ಹರಿಸುತ್ತಿದ್ದಾರೆ. ಮೊದಲೇ ‘ಹಿಟ್ಮ್ಯಾನ್’ ಮತ್ತು ‘ರನ್ ಮಷಿನ್’ ನಿವೃತ್ತಿಯಿಂದ ಅಘಾತಕ್ಕೊಳಗಾಗಿದ್ದ ನೆಟ್ಟಿಗರು, ಇದೀಗ ಜಡೇಜಾ ನಿರ್ಗಮನ ಕಂಡು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಶನಿವಾರ (ಜೂನ್ 29) ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಪ್ರಶಸ್ತಿ ಹೋರಾಟದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ 7 ರನ್ಗಳ ರೋಚಕ ಜಯವನ್ನು ದಾಖಲಿಸಿತು. ಐದು ಓವರ್ ಅಂತ್ಯಕ್ಕೆ ರೋಹಿತ್, ಪಂತ್ ಮತ್ತು ಸೂರ್ಯಕುಮಾರ್ ಯಾದವ್ ವಿಕೆಟ್ ಕಳೆದುಕೊಂಡು ಟೀಮ್ ಇಂಡಿಯಾ ಸಂಕಷ್ಟದಲ್ಲಿದ್ದಾಗ ಅಕ್ಷರ್ ಪಟೇಲ್ ಜತೆಗೂಡಿ ಕೊಹ್ಲಿ ಉತ್ತಮ ಜತೆಯಾಟ ನೀಡಿದರು. ಈ ಪಂದ್ಯದಲ್ಲಿ 59 ಎಸೆತಗಳನ್ನು ಎದುರಿಸಿದ ಕೊಹ್ಲಿ 6 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 76 ರನ್ ಗಳಿಸಿ, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಅಂದು ಈ ವ್ಯಕ್ತಿ ಬಗ್ಗೆ ರೋಹಿತ್, ದ್ರಾವಿಡ್ ಆಡಿದ ಮಾತು ಇಂದು ನಿಜವಾಯ್ತು! ಟೀಕಾಕಾರಿಗೆ ಭಾರೀ ಮುಖಭಂಗ