ಬೆಂಗಳೂರು: ಮಾನ್ಯತೆ ಪಡೆದಿರುವ ಕೊಳಚೆ ಪ್ರದೇಶಗಳನ್ನು “ಕೊಳಗೇರಿ ಪ್ರದೇಶ’ಗಳೆಂದು ಅಧಿಕೃತವಾಗಿ ಘೋಷಿಸಲಾಗುವುದು. ಜತೆಗೆ ಈಗಾಗಲೇ ಘೋಷಿತವಾಗಿರುವ ಪ್ರದೇಶಗಳಲ್ಲಿನ ಎಲ್ಲ ನಿವಾಸಿಗರಿಗೆ ಹಕ್ಕುಪತ್ರ ವಿತರಿಸಲಾಗುತ್ತಿದೆ ಎಂದು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಪ್ರಸಾದ್ ಅಬ್ಬಯ್ಯ ಹೇಳಿದ್ದಾರೆ.
ಹಸಿರು ದಳ ಸಂಸ್ಥೆ ಬುಧವಾರ ಸ್ವಾತಂತ್ರ ಉದ್ಯಾನದಲ್ಲಿ ಆಯೋಜಿಸಿದ್ದ ಹಸಿರು ಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೊಳಗೇರಿ ಬಡಾವಣೆಗಳಲ್ಲಿ ವಸತಿ ಜತೆಗೆ ನೀರು, ವಿದ್ಯುತ್ ಸಂಪರ್ಕ ಸೇರಿ ಇತರ ಮೂಲಸೌಕರ್ಯ ಒದಗಿಸಲಾಗುವುದು. ಸಮಾಜದ ಸ್ವಾಸ್ಥ ಕಾಪಾಡುತ್ತಿರುವ ಹಸಿರು ದಳ ಸಂಸ್ಥೆ, ಒಳ್ಳೆಯ ಕೆಲಸ ಮಾಡುತ್ತಿದ್ದು, 10 ವರ್ಷಗಳಿಂದ ಯಾವುದೇ ಪ್ರಚಾರವಿಲ್ಲದೆ ಸಮಾಜದ ಒಳಿತಿಗೆ, ಸ್ವಚ್ಛತೆಗೆ ದುಡಿಯುತ್ತಿದೆ. ಪರಿಸರ ದಿನಾಚರಣೆ ಒಂದು ದಿನಕ್ಕೆ ಅಥವಾ ಪ್ರಚಾರಕ್ಕೆ ಸೀಮಿತವಾಗದೆ ನಿರಂತರವಾಗಿ ನಡೆಯಬೇಕು ಎಂದು ಆಶಿಸಿದರು.
ಬಿಪಿಎಲ್ ಕಾರ್ಡ್ ನೀಡಲು ಮನೆ ಬಳಿ ಆಹಾರ ಇಲಾಖೆ ಅಧಿಕಾರಿಗಳು: ದಾಖಲೆ ಪರಿಶೀಲನೆ
ಕಾರ್ಮಿಕ ಇಲಾಖೆಯ ಸಹಾಯಕ ಆಯುಕ್ತ ಸಂತೋಷ್ ಹಿಪ್ಪರಗಿ ಮಾತನಾಡಿ, ಕಸ ಆಯುವವರು ಪರಿಸರ ಶುದ್ಧೀಕರಣದ ಜತೆಗೆ ಆರ್ಥಿಕ ಕೊಡುಗೆ ನೀಡುತ್ತಿದ್ದಾರೆ. ಅಧಿಕೃತವಾಗಿ ಸಮೀಕ್ಷೆ ನಡೆಸಿ ತ್ಯಾಜ್ಯ ಶ್ರಮಿಕರಿಗೆ ಗುರುತಿನ ಚೀಟಿ ನೀಡಲಾಗುವುದು. ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿಯ ಮಾದರಿಯಂತೆ ತ್ಯಾಜ್ಯ ಶ್ರಮಿಕರ ಕಲ್ಯಾಣ ನಿಧಿ ಹಾಗೂ ಕೆಲಸಗಾರರ ಸೌಲಭ್ಯದ ಕೇಂದ್ರ ಸ್ಥಾಪಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದರು.ಮಾಜಿ ಶಾಸಕಿ ಸೌಮ್ಯಾ ರೆಡ್ಡಿ, ಸೆಂಟರ್ ಫಾರ್ ಲೇಬರ್ ಸ್ಟಡಿಸ್ನ ಸಹ ನಿರ್ದೇಶಕ ಪ್ರೊ. ಬಾಬು ಮ್ಯಾಥ್ಯೂ, ಸಹ ಸಂಸ್ಥಾಪಕಿ ನಳಿನಿ ಶೇಖರ್ ಮತ್ತಿತರರಿದ್ದರು.