ನವದೆಹಲಿ: ಯುಎಸ್ಎ ಹಾಗೂ ವೆಸ್ಟ್ ಇಂಡೀಸ್ ಆತಿಥ್ಯದಲ್ಲಿ ನಡೆದ ಚುಟುಕು ವಿಶ್ವಸಮರವು ಮುಕ್ತಾಯದ ಹಂತಕ್ಕೆ ಬಂದಿದ್ದು, ಶನಿವಾರ (ಜೂನ್ 29) ವರ್ಣರಂಜಿತ ತೆರೆ ಬೀಳಲಿದೆ. ಇನ್ನೂ ಈ ಬಾರಿಯ ಚುಟುಕು ವಿಶ್ವ ಸಮರದಲ್ಲಿ ಗೆಲ್ಲುವ ವಿಶ್ವಾಸದೊಂದಿಗೆ ಕಣಕ್ಕಿಳಿದ ಪಾಕಿಸ್ತಾನ ಕ್ರಿಕೆಟ್ ತಂಡವು ಹೀನಾಯ ಪ್ರದರ್ಶನದಿಂದಾಗಿ ಸೂಪರ್ 08 ಹಂತ ಪ್ರವೇಶಿಸುವಲ್ಲಿ ವಿಫಲವಾಗಿ ತೀವ್ರವಾಗಿ ಟೀಕೆಗೆ ಗುರಿಯಾಗಿತ್ತು. ಇಷ್ಟಾದರೂ ಸುಮ್ಮನಾಗದ ಪಾಕಿಸ್ತಾನ ಭಾರತದ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ಪಾಕ್ ಕ್ರಿಕೆಟ್ ತಂಡದ ಮಾಜಿ ನಾಯಕ ಇಂಜಮಾಮ್ ಉಲ್ ಹಕ್ ಬಿಸಿಸಿಐ ಹಾಗೂ ಐಸಿಸಿ ವಿರುದ್ಧ ಹೊಸ ಆರೋಪ ಒಂದನ್ನು ಮಾಡಿದ್ದಾರೆ.
ಜೂನ್ 27ರಂದು ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ ಸೋತ ಬಳಿಕ ಇಂಜಮಾಮ್ ಈ ಆರೋಪವನ್ನು ಮಾಡಿದ್ದು, ಭಾರತದ ಅಭಿಮಾನಿಗಳು ಕಿಡಿಕಾರಿದ್ದಾರೆ. ಭಾರತ ಐಸಿಸಿಯಿಂದ ಪಡೆದಷ್ಟು ಲಾಭ ಪಾಕಿಸ್ತಾನ ಎಂದಿಗೂ ಪಡೆದಿಲ್ಲ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಹಾವೇರಿ ಭೀಕರ ಅಪಘಾತ; ಮೃತರ ಕುಟುಂಬಕ್ಕೆ ಪರಿಹಾರ ಘೋಷಿಸಿದ ಸಿಎಂ, ಸಂತಾಪ ಸೂಚಿಸಿದ ಗಣ್ಯರು
ನೀವು ನಿನ್ನೆ (ಜೂನ್ 27) ನಡೆದ ಎರಡು ಸೆಮಿಫೈನಲ್ ಪಂದ್ಯಗಳನ್ನು ನೋಡುವುದಾದರೆ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಪಂದ್ಯಕ್ಕೆ ಮೀಸಲು ದಿನವನ್ನು ನಿಗದಿಪಡಿಸಿರಲಿಲ್ಲ. ಭಾರತ ತಾನಾಡಿದ ಎಲ್ಲಾ ಪಂದ್ಯಗಳನ್ನು ಗೆದ್ದಿದ್ದು, ಒಂದು ವೇಳೆ ಪಂದ್ಯ ಮಳೆಯಿಂದಾಗಿ ರದ್ದುಗೊಂಡಿದ್ದರೆ ಭಾರತ ಸುಲಭವಾಗಿ ಫೈನಲ್ ಪ್ರವೇಶಿಸುತ್ತಿತ್ತು.
ಐಸಿಸಿ ನಡೆಸುದ ಟೂರ್ನಮೆಂಟ್ಗಳಲ್ಲಿ ಭಾರತಕ್ಕಾಗಿ ಪ್ರತ್ಯೇಕ ನಿಯಮಗಳಿರುತ್ತವೆ. ಏಷ್ಯಾಕಪ್ನಲ್ಲಿ ಪಾಕಿಸ್ತಾನ ಗೆಲ್ಲುತ್ತದೆ ಎಂಬ ವಿಚಾರ ತಿಳಿದಾಗ ದಿಢೀರ್ ಎಂದು ಮೀಸಲು ದಿನವನ್ನು ಘೋಷಿಸಲಾಯಿತು. ಭಾರತವು ಪ್ರತಿಬಾರಿಯೂ ತನಗೆ ಬೇಕಾದಂತೆ ಅನುಕೂಲಗಳನ್ನು ಪಡೆಯುತ್ತದೆ. ಭಾರತ ಮಾತಿಗೆ ಸಿಗುವಷ್ಟು ಮನ್ನಣೆ ಐಸಿಸಿ ಯಾಕೆ ಬೇರೆ ತಂಡಗಳಿಗೆ ಕೊಡುವುದಿಲ್ಲ. ಇಂಗ್ಲೆಂಡ್ನಂತಹ ತಂಡವು ಏನು ಮಾಡದ ಸ್ಥಿತಿಯಲ್ಲಿ ಭಾರತ ಶಕ್ತಿಶಾಲಿಯಾಗಿದೆ. ಕ್ರಿಕೆಟ್ ಕೇವಲ ಒಂದು ಶಕ್ತಿಯಿಂದ ನಡೆಯುತ್ತಿದೆ ಎಂದು ಪಾಕ್ ಕ್ರಿಕೆಟ್ ತಂಡದ ಮಾಜಿ ನಾಯಕ ಇಂಜಮಾಮ್ ಉಲ್ ಹಕ್ ಆರೋಪಿಸಿದ್ದಾರೆ.