ನವದೆಹಲಿ: ಮಳೆಗಾಲ ಬಂತೆಂದರೆ ಸಾಕು ಹಾವುಗಳು ಬೆಚ್ಚನೆಯ ಪ್ರದೇಶವನ್ನು ಹುಡುಕಿಕೊಂಡು ಬರುತ್ತವೆ. ಈ ವೇಳೆ ಶೂ, ಹೆಲ್ಮೆಟ್, ಬೈಕ್ಗಳಲ್ಲಿ ಅಷ್ಟೇ ಯಾಕೆ ಮನೆಗಳಲ್ಲಿನ ಇಕ್ಕಾಟದ ಪ್ರದೇಶಗಳಲ್ಲಿ ಹಾವುಗಳು ಅಡಗಿಕೊಳ್ಳುವುದನ್ನು ನಾವು ನೋಡಿದ್ದೇವೆ. ಸ್ವಲ್ಪ ಯಾಮಾರಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಹೀಗಾಗಿ ತುಂಬಾ ಎಚ್ಚರಿಕೆ ವಹಿಸುವುದು ತುಂಬಾ ಅಗತ್ಯ. ಅದೇ ರೀತಿ ಸ್ಕೂಟರ್ನ ಡಿಕ್ಕಿಯ ಒಳಗೆ ದೈತ್ಯಾಕಾರದ ಹೆಬ್ಬಾವು ಪ್ರತ್ಯಕ್ಷವಾಗಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸದ್ಯ ವೈರಲ್ ಆಗುತ್ತಿದೆ.
ಸ್ಕೂಟರ್ನ ಡಿಕ್ಕಿಯೊಳಗೆ ಬುಸ್… ಬುಸ್… ಎಂಬ ಶಬ್ದವನ್ನು ಕೇಳಿ ಭಯಗೊಂಡ ವಾಹನದ ಮಾಲೀಕ ಕೋಲಿನ ಸಹಾಯದಿಂದ ಡಿಕ್ಕಿಯನ್ನು ಓಪನ್ ಮಾಡಿದಾಗ ಅದರೊಳಗೆ ಹೆಬ್ಬಾವು ಬೆಚ್ಚನೆ ಮಲಗಿರುವ ದೃಶ್ಯ ವಿಡಿಯೋದಲ್ಲಿದೆ. ಹೆಬ್ಬಾವನ್ನು ನೋಡಿ ಒಂದು ಕ್ಷಣ ಸ್ಕೂಟರ್ ಮಾಲೀಕನೇ ಶಾಕ್ ಆಗಿದ್ದಾರೆ.
ಅಂದಹಾಗೆ ಸರೀಸೃಪಗಳಲ್ಲಿ ಹೆಬ್ಬಾವುಗಳು ತುಂಬಾ ಅಪರೂಪ. ಮಳೆಗಾಲದಲ್ಲಿ ಬೆಚ್ಚಗಿನ ಪ್ರದೇಶದಲ್ಲಿ ಆಶ್ರಯ ಪಡೆಯಲು ಹೆಬ್ಬಾವು ದ್ವಿಚಕ್ರ ವಾಹನದ ಡಿಕ್ಕಿಯನ್ನು ಆರಿಸಿದೆ. ಈ ವಿಡಿಯೋವನ್ನು ವ್ಯಕ್ತಿಯೊಬ್ಬರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸ್ಕೂಟರ್ ಡಿಕ್ಕಿ ತೆರೆದಾಗ ಪೆಟ್ರೋಲ್ ಕ್ಯಾಪ್ ಜಾಗದಲ್ಲಿ ಅಪಾಯಕಾರಿ ಹೆಬ್ಬಾವು ಕಂಡುಬಂದಿದೆ.
ಸದ್ಯ ಈ ವಿಡಿಯೋ ವೈರಲ್ ಆಗಿದೆ. ಇದು ಮರಿ ಹೆಬ್ಬಾವು ಎಂದು ವ್ಯಕ್ತಿಯೊಬ್ಬರು ಕಾಮೆಂಟ್ ಮಾಡಿದ್ದಾರೆ, ಇದನ್ನು ಇಂಡಿಯನ್ ರಾಕ್ ಪೈಥಾನ್ ಎಂದು ಕರೆಯಲಾಗುತ್ತದೆ. ಆದರೆ ಈ ವಿಡಿಯೋ ಎಲ್ಲಿಯದ್ದು ಎಂಬ ಮಾಹಿತಿ ಇಲ್ಲ. ಈ ಮಳೆಗಾಲದಲ್ಲಿ ವಾಹನ ಸವಾರರು ತುಂಬಾ ಎಚ್ಚರಿಕೆ ವಹಿಸಬೇಕು. ಬೈಕನ್ನು ಹೊರತೆಗೆಯುವ ಮೊದಲು ಎರಡು ಬಾರಿ ಪರಿಶೀಲಿಸುವುದು ಒಳ್ಳೆಯದು.
View this post on Instagram
ಸಾರ್ವಜನಿಕರು ಗಮನಿಸಬೇಕಾದ ಸಂಗತಿ ಏನೆಂದರೆ, ಹಾವುಗಳು ಬೇಸಿಗೆಯಲ್ಲಿ ತಣ್ಣನೆ ಮತ್ತು ಮಳೆಗಾಲದಲ್ಲಿ ಬೆಚ್ಚನೆಯ ಪ್ರದೇಶಗಳನ್ನು ಹುಡುಕಿ ಬರುವುದು ಹೆಚ್ಚು. ಹೀಗಾಗಿ ಹಾವು ಕಡಿತದ ಘಟನೆಗಳೂ ಹೆಚ್ಚುತ್ತವೆ. ಮನೆಗಳಲ್ಲಿ ಹೊಂಡ ಮತ್ತು ರಂಧ್ರಗಳಿದ್ದರೆ ಅವುಗಳನ್ನು ಸಾಧ್ಯವಾದಷ್ಟು ಬೇಗ ಮುಚ್ಚಬೇಕು. ಹೆಲ್ಮೆಟ್ ಮತ್ತು ಬೂಟುಗಳನ್ನು ಧರಿಸುವ ಮೊದಲು, ಏನಾದರೂ ಇದೆಯಾ ಎಂಬುದನ್ನು ಪರಿಶೀಲಿಸಬೇಕು.
ಮನೆ ಮತ್ತು ಸುತ್ತಮುತ್ತಲಿನ ಪರಿಸರವನ್ನು ಯಾವಾಗಲೂ ಸ್ವಚ್ಛವಾಗಿಟ್ಟುಕೊಳ್ಳುವುದು ಅತ್ಯಗತ್ಯ. ಹಾವುಗಳು ಸಾಮಾನ್ಯವಾಗಿ ಇದ್ದಿಲಿನ ಒಲೆಗಳು, ಮರದ ದಿಮ್ಮಿಗಳು, ಹುಲ್ಲು, ಕಲ್ಲುಗಳು ಮತ್ತು ಪ್ಲಾಸ್ಟಿಕ್ ವಸ್ತುಗಳ ನಡುವೆ ಇರುತ್ತವೆ. ಆದ್ದರಿಂದ, ಅವುಗಳನ್ನು ಮನೆಯ ಸುತ್ತಲೂ ಅಥವಾ ಕಿಟಕಿಗಳ ಬಳಿ ಸಂಗ್ರಹಿಸದಂತೆ ಎಚ್ಚರಿಕೆ ವಹಿಸಬೇಕು. ಮನೆ ಆವರಣದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಿ. ನೀರಿದ್ದರೆ ಹಾವುಗಳನ್ನು ವಿಶೇಷವಾಗಿ ಜಲಚರ ಹಾವುಗಳನ್ನು ಆಕರ್ಷಿಸುತ್ತದೆ. ತೋಟಗಳಲ್ಲಿ ನೀರು ನಿಲ್ಲಲು ಬಿಡಬೇಡಿ. ಮನೆಯ ಆವರಣದಲ್ಲಿ ದನದ ಕೊಟ್ಟಿಗೆ ಅಥವಾ ಕೋಳಿ ಗೂಡು ಇದ್ದರೆ ಎಚ್ಚರಿಕೆ ವಹಿಸಬೇಕು. ಕೋಳಿ ಗೂಡುಗಳಲ್ಲಿ ಹಾವುಗಳ ಉಪಸ್ಥಿತಿ ಸಾಮಾನ್ಯವಾಗಿರುತ್ತವೆ.
ಬೆಳ್ಳುಳ್ಳಿಯನ್ನು ಪುಡಿಮಾಡುವುದು ಮತ್ತು ಸುಗಂಧ ದ್ರವ್ಯವನ್ನು ಸಿಂಪಡಿಸುವುದರಿಂದ ಸ್ವಲ್ಪ ಮಟ್ಟಿಗೆ ಹಾವುಗಳನ್ನು ದೂರವಿಡಬಹುದು. ಬೆಳ್ಳುಳ್ಳಿಯನ್ನು ನುಜ್ಜುಗುಜ್ಜು ಮಾಡಿ ಮತ್ತು ನೀರಿನಲ್ಲಿ ಮಿಶ್ರಣ ಮಾಡಿ ಮತ್ತು ಈ ನೀರನ್ನು ಮನೆಯ ಸುತ್ತಲೂ ಸಿಂಪಡಿಸಿ. ಪುಡಿಮಾಡಿದ ಈರುಳ್ಳಿ ಅಥವಾ ರಸವನ್ನು ಮನೆಯ ಸುತ್ತಲೂ ಸಿಂಪಡಿಸಬಹುದು. ಇದರಲ್ಲಿರುವ ಗಂಧಕದ ವಾಸನೆ ಹಾವುಗಳು ಬರದಂತೆ ತಡೆಯುತ್ತದೆ. (ಏಜೆನ್ಸೀಸ್)
ಬಡವರನ್ನು ಬಳಸಿಕೊಳ್ಳುವ ಖ್ಯಾತ ಯೂಟ್ಯೂಬರ್ ಹಿಂದಿದೆ ಈ ಮಾಫಿಯಾ! ಹರ್ಷ ಸಾಯಿ ವಿರುದ್ಧ ಗಂಭೀರ ಆರೋಪ
ರಿಮ್ಯಾಂಡ್ ಹೋಮ್ ಹೌಸ್ಫುಲ್| ಬಾಲಾಪರಾಧಿಗಳು ವರ್ಷಾನುಗಟ್ಟಲೆ ಪರಿವೀಕ್ಷಣಾಲಯಗಳಲ್ಲಿ ಬಂಧಿ