ಬಾರ್ಬಡೋಸ್: ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ತನ್ನ ಯಶಸ್ಸಿನ ವೇಗವನ್ನು ಮುಂದುವರಿಸಿದೆ. ಗ್ರೂಪ್ ಹಂತದಲ್ಲಿ ಸತತ ಮೂರು ಗೆಲುವಿನ ನಂತರ ಭಾರತ ಸೂಪರ್ 8 ಪ್ರವೇಶಿಸಿದ್ದು, ಅದೇ ಪ್ರದರ್ಶನವನ್ನು ಮುಂದುವರೆಸಿದೆ. ನಿನ್ನೆ (ಜೂನ್ 20) ನಡೆದ ಸೂಪರ್ 8 ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ 47 ರನ್ಗಳ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲುವಿಗೆ ಮೂರು ಪ್ರಮುಖ ಕಾರಣಗಳಿವೆ. ಅವುಗಳ ಬಗ್ಗೆ ನಾವೀಗ ತಿಳಿಯೋಣ.
1. ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್
ಟಿ20ಯಲ್ಲಿ ನಂ. 1ನೇ ಬ್ಯಾಟ್ಸ್ಮನ್ ಆಗಿ ಮುಂದುವರಿದಿರುವ ಟೀಮ್ ಇಂಡಿಯಾದ ಸ್ಟಾರ್ ಆಟಗಾರ ತಮ್ಮ ಶ್ರೇಯಾಂಕಕ್ಕೆ ನ್ಯಾಯ ಒದಗಿಸಿದರು. ಈ ಪಂದ್ಯದಲ್ಲಿ ಅಕ್ಷರಶಃ ಅಬ್ಬರಿಸಿದರು. ಲೀಗ್ ಹಂತದಲ್ಲಿ ಅಮೆರಿಕ ವಿರುದ್ಧದ ಪಂದ್ಯದಲ್ಲಿ ಅರ್ಧಶತಕ ಬಾರಿಸಿ ಫಾರ್ಮ್ಗೆ ಮರಳಿರುವ ಸೂರ್ಯಕುಮಾರ್ ಯಾದವ್, ಅಫ್ಘಾನಿಸ್ತಾನ ವಿರುದ್ಧವೂ ಅದೇ ಫಾರ್ಮ್ ಮುಂದುವರಿಸಿದರು. ಟೀಮ್ ಇಂಡಿಯಾ 181 ರನ್ ಗಳಿಸಲು ಸೂರ್ಯ ಅವರ ಬ್ಯಾಟಿಂಗ್ ಪ್ರಮುಖ ಕಾರಣವಾಗಿದೆ. ರೋಹಿತ್ (8), ಕೊಹ್ಲಿ(24) ಹಾಗೂ ಪಂತ್(20) ಔಟಾಗುವುದರೊಂದಿಗೆ ಟೀಮ್ ಇಂಡಿಯಾ ಕಡಿಮೆ ಸ್ಕೋರ್ಗೆ ಸೀಮಿತವಾಗಲಿದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಅನಿರೀಕ್ಷಿತವಾಗಿ ಸಿಡಿದೆದ್ದ ಸೂರ್ಯಕುಮಾರ್ 28 ಎಸೆತಗಳಲ್ಲಿ 5 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 53 ರನ್ ಗಳಿಸಿ ಅದ್ಭುತ ಇನ್ನಿಂಗ್ಸ್ ಕಟ್ಟಿದರು. ಟೀಮ್ ಇಂಡಿಯಾದ ಯಶಸ್ಸಿಗೆ ಸೂರ್ಯ ಅವರ ಸೂಪರ್ ಇನ್ನಿಂಗ್ಸ್ ಪ್ರಮುಖ ಕಾರಣವಾಗಿದೆ.
2. ಬುಮ್ರಾ ಸೂಪರ್ ಬೌಲಿಂಗ್
ಟೀಮ್ ಇಂಡಿಯಾ ನೀಡಿದ್ದ 182 ರನ್ಗಳ ಗುರಿ ಬೆನ್ನತ್ತಲು ಅಫ್ಘಾನಿಸ್ತಾನ ತಂಡ ಕಣಕ್ಕೆ ಇಳಿಯಿತು. ಆದರೆ, ಯಾರ್ಕರ್ಗಳ ರಾಜ ಜಸ್ಪ್ರೀತ್ ಬುಮ್ರಾ ಆಫ್ಘಾನ್ ಬ್ಯಾಟ್ಸ್ಮನ್ಗಳಿಗೆ ಆಘಾತ ನೀಡಿದರು. ಆರಂಭಿಕ ಆಟಗಾರ ರಹಮಾನುಲ್ಲಾ ಗುರ್ಬಾಜ್ (11) ಅವರನ್ನು ಬುಮ್ರಾ ಪೆವಿಲಿಯನ್ಗೆ ಕಳುಹಿಸಿದರು. ಬಳಿಕ ವಿಕೆಟ್ಗಳ ಪತನ ಸತತವಾಗಿ ಮುಂದುವರಿಯಿತು. ಬುಮ್ರಾ ಮಿಂಚಿನ ಎಸೆತಗಳಿಂದ ಅಫ್ಘಾನ್ ಬ್ಯಾಟ್ಸ್ಮನ್ಗಳನ್ನು ಬೆದರಿಸಿದರು. ಹಜರತುಲ್ಲಾ ಝಜೈ (2) ಮತ್ತು ನಜೀಬುಲ್ಲಾ ಝದ್ರಾನ್ (19) ವಿಕೆಟ್ ಉರುಳಿಸುವ ಮೂಲಕ ತೀವ್ರ ದಾಳಿ ನಡೆಸಿದರು. ತಮ್ಮ ನಾಲ್ಕು ಓವರ್ಗಳ ಕೋಟಾದಲ್ಲಿ 1 ಮೇಡನ್ ಸೇರಿಸಿ, ಕೇವಲ 7 ರನ್ ನೀಡಿ 3 ವಿಕೆಟ್ ಪಡೆದರು. ಇವರೊಂದಿಗೆ ಅರ್ಷದೀಪ್ ಸಿಂಗ್ ಕೂಡ 3 ವಿಕೆಟ್ ಪಡೆದು ಮಿಂಚಿದರು.
3. ಸಾಮೂಹಿಕ ಪ್ರದರ್ಶನ
ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಸಾಮೂಹಿಕ ಪ್ರದರ್ಶನ ತೋರಿದೆ. ಬ್ಯಾಟಿಂಗ್ನಲ್ಲಿ ವಿರಾಟ್ ಕೊಹ್ಲಿ (24), ಪಂತ್ (20), ಸೂರ್ಯಕುಮಾರ್ (53) ಹಾಗೂ ಹಾರ್ದಿಕ್ ಪಾಂಡ್ಯ (32) ರನ್ಗಳ ಕಾಣಿಕೆ ನೀಡಿ ಗೆಲುವಿಗೆ ಕಾರಣರಾದರು. 182 ರನ್ಗಳ ಗುರಿಯನ್ನು ಉಳಿಸಿಕೊಳ್ಳಲು ಬೌಲರ್ಗಳು ಯಶಸ್ಸು ಸಾಧಿಸಿದರು. ಪ್ರಮುಖವಾಗಿ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ 7 ರನ್ ನೀಡಿ 3 ವಿಕೆಟ್ ಕಬಳಿಸಿ ಅಫ್ಘಾನಿಸ್ತಾನ ಪತನಕ್ಕೆ ಕಾರಣರಾದರು. ಉಳಿದಂತೆ ಅರ್ಷದೀಪ್ 3, ಕುಲದೀಪ್ ಯಾದವ್ 2, ಜಡೇಜಾ ಒಂದು ವಿಕೆಟ್ ಪಡೆದು ಗೆಲುವಿನಲ್ಲಿ ತಮ್ಮ ಪಾತ್ರವನ್ನು ನಿರ್ವಹಿಸಿದರು. (ಏಜೆನ್ಸೀಸ್)
17 ಮಂದಿಗೆ 60 ರೂಮ್ಸ್, ಪಕ್ಕದಲ್ಲಿ ಹೆಂಡತಿಯರು! ಪಾಕಿಸ್ತಾನದ ಹೀನಾಯ ಸೋಲಿನ ರಹಸ್ಯ ಬಿಚ್ಚಿಟ್ಟ ಮಾಜಿ ಕ್ರಿಕೆಟಿಗ
ಸ್ವಯಂ ಮತ್ತು ಸಮಾಜಕ್ಕಾಗಿ ಯೋಗ: ಕಣಿವೆ ರಾಜ್ಯದಿಂದ ಯೋಗ ಸಂದೇಶ ಸಾರಿದ ಪ್ರಧಾನಿ ಮೋದಿ