ಶಿವಮೊಗ್ಗ: ಲೋಡಿಂಗ್ ಮತ್ತು ಅನ್ಲೋಡಿಂಗ್ ದರವನ್ನು ಹೆಚ್ಚಳ ಮಾಡುವಂತೆ ಆಗ್ರಹಿಸಿ ಕೆಎಫ್ಸಿಎಸ್ಸಿ ಗೋದಾಮು ಹಮಾಲಿ ಕಾರ್ಮಿಕರ ಸಂಘದ ಪದಾಧಿಕಾರಿಗಳು ಸೋಮವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಹಮಾಲಿ ಕಾರ್ಮಿಕರಿಗೆ ಈಗ ನೀಡುತ್ತಿರುವ ಲೋಡಿಂಗ್ ಮತ್ತು ಅನ್ಲೋಡಿಂಗ್ ದರ ತುಂಬ ಕಡಿಮೆಯಿದೆ. ಅನ್ನಭಾಗ್ಯ ಕಾರ್ಮಿಕರಿಗೆ ಗೋದಾಮುಗಳಲ್ಲಿ ಪ್ರತಿ ಕ್ವಿಂಟಾಲ್ಗೆ 15 ರೂ. ನಿಗದಿ ಮಾಡಬೇಕು. ಮತ್ತು ಕೆಎಫ್ಸಿಎಸ್ಸಿ ಗೋದಾಮುಗಳಿಂದ ಪಡಿತರ ಅಂಗಡಿಗಳಿಗೆ ಕೊಂಡೊಯ್ದು ಅನ್ಲೋಡಿಂಗ್ ಮಾಡಲು ಪ್ರತಿ ಕ್ವಿಂಟಾಲ್ಗೆ 30 ರೂ. ನಿಗದಿಮಾಡಬೇಕು ಎಂದು ಒತ್ತಾಯಿಸಿದರು.
ದೂರವನ್ನು ನಿಗದಿ ಮಾಡುವಾಗ 10 ಕಿ.ಮೀ.ನಿಂದ 60 ಕಿ.ಮೀ.ವರೆಗೂ ಒಂದೇ ದರವಿದೆ. ಇದು ಅವೈಜ್ಞಾನಿಕ ಕ್ರಮ. ಕಿ.ಮೀ.ಗೆ ತಕ್ಕಂತೆ ನಿಗದಿ ಮಾಡಬೇಕು. ಟೆಂಡರ್ಗಳಲ್ಲಿ ಕೂಲಿ ದರ ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸಿದರು.
ಸಂಘದ ಅಧ್ಯಕ್ಷ ಬೋರೇಗೌಡ, ಉಪಾಧ್ಯಕ್ಷ ಸಿದ್ದಪ್ಪ, ಪದಾಧಿಕಾರಿಗಳಾದ ಹನುಮಂತ, ಜಗದೀಶ್, ಗುರುಸ್ವಾಮಿ, ಇನಾಯತುಲ್ಲಾ, ಲೋಕೇಶ್, ಎಸ್.ಕುಮಾರ್, ರೇವಣ್ಣಸಿದ್ದಪ್ಪ, ಮಂಜುನಾಥ್ ಇತರರಿದ್ದರು.