ಅಂಕ ಗಳಿಸುವ ಜತೆಗೆ ಬೆಳೆಸಿಕೊಳ್ಳಿ ವಿನಯ : ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ
ಶಿಶು ಮಂದಿರ ಮತ್ತು ವಸತಿ ನಿಲಯದ ಉದ್ಘಾಟನಾ ಸಮಾರಂಭದಲ್ಲಿ ಮೋಕ್ಷಿತ್ ಪಿ.ಎಸ್ ಹಾಗೂ ವಿಶಿಷ್ಟ ಶ್ರೇಣಿ ಮತ್ತು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುವ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ವಿಜಯವಾಣಿ ಸುದ್ದಿಜಾಲ ಪುತ್ತೂರು ಗ್ರಾಮಾಂತರ ಧಾರ್ಮಿಕ ಅರಿವು ಮೂಡಿಸುವ ದೇವಾಲಯ ಮತ್ತು ಶೈಕ್ಷಣಿಕ ಜ್ಞಾನ ನೀಡುವ ವಿದ್ಯಾಲಯಗಳು ಸಂಸ್ಕೃತಿ-ಸಂಸ್ಕಾರ ನೀಡುವ ಕೇಂದ್ರಗಳಾಗಿವೆ. ದೇವಾಲಯ ಮತ್ತು ವಿದ್ಯಾಲಯದಲ್ಲಿ ಯಾವುದೇ ಭೇದಭಾವವಿಲ್ಲದೆ ಎಲ್ಲರೂ ಎಲ್ಲರೂ ಒಟ್ಟಾಗಿ ಸೇರುತ್ತಾರೆ. ವಿದ್ಯಾಲಯಗಳಲ್ಲಿರುವ ವಾತಾವರಣ ಸಮಾಜದಲ್ಲಿಯೂ ಇದ್ದಾಗ ಸ್ವಸ್ಥ ಸಮಾಜ ನಿರ್ಮಾಣವಾಗಲು ಸಾಧ್ಯ. ವಿದ್ಯಾರ್ಥಿಗಳು ಶಾಲೆಯಲ್ಲಿ ಶೇ.100 ಅಂಕಗಳಿಸುವ ಜತೆಗೆ ವಿನಯವನ್ನೂ ಬೆಳೆಸಿಕೊಳ್ಳಬೇಕು ಎಂದು ಎಡನೀರು ಮಠದ ಸಚ್ಚಿದಾನಂದ ಭಾರತೀ ಸ್ವಾಮೀಜಿ ಹೇಳಿದರು.
ನರಿಮೊಗರಿನ ಸರಸ್ವತಿ ವಿದ್ಯಾಮಂದಿರದಲ್ಲಿ ಶನಿವಾರ ನಡೆದ ಶಿಶು ಮಂದಿರ ಮತ್ತು ವಸತಿ ನಿಲಯದ ಉದ್ಘಾಟನಾ ಸಮಾರಂಭದಲ್ಲಿ ಶಾಲಾ ನೂತನ ವಿಭಾಗವನ್ನು ಉದ್ಘಾಟಿಸಿ ಮಾತನಾಡಿದರು.
ಶಾಸಕ ಅಶೋಕ್ಕುಮಾರ್ ರೈ ಅಧ್ಯಕ್ಷತೆ ವಹಿಸಿ ತರಗತಿ ಕೊಠಡಿ ಮತ್ತು ವಸತಿ ನಿಲಯ ಉದ್ಘಾಟಿಸಿದರು.
ಶಿಶುಮಂದಿರವನ್ನು ಪ್ರಗತಿಪರ ಕೃಷಿಕ ವೆಂಕಟ್ರಮಣ ಭಟ್ ಮಾಡತ್ತಾರು ಉದ್ಘಾಟಿಸಿದರು. ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಶಿವನಾಥ ರೈ ಮೇಗಿನಗುತ್ತು, ಕೊಡಂಕಿರಿ ಫೌಂಡೇಷನ್ ಟ್ರಸ್ಟಿ ವರದಕುಮಾರಿ ಮೀಯಾಳ, ಆಡಳಿತಾಧಿಕಾರಿ ಶುಭ ಅವಿನಾಶ್, ಶಾಲಾ ವಿದ್ಯಾರ್ಥಿ ನಾಯಕ ಯಶ್ವಿನ್ ಉಪಸ್ಥಿತರಿದ್ದರು.
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 614 ಅಂಕಗಳನ್ನು ಪಡೆದು ಶಾಲೆಗೆ ಪ್ರಥಮ ಸ್ಥಾನಿಯಾಗಿದ್ದ ಮೋಕ್ಷಿತ್ ಪಿ.ಎಸ್.ಹಾಗೂ ವಿಶಿಷ್ಟ ಶ್ರೇಣಿ ಮತ್ತು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುವ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಪುರುಷರಕಟ್ಟೆಯಿಂದ ಸರಸ್ವತಿ ವಿದ್ಯಾಮಂದಿರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಪೂರ್ಣವಾಗಿ ಕಾಂಕ್ರೀಟ್ ಕಾಮಗಾರಿ ಮಾಡುವಂತೆ ಶಾಲಾ ಆಡಳಿತ ಮಂಡಳಿಯ ವತಿಯಿಂದ ಶಾಸಕರಿಗೆ ಮನವಿ ಸಲ್ಲಿಸಲಾಯಿತು.
ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಬಹಳ ಅಗತ್ಯ. ಭಾಷಣ ಮಾಡುವುದರಿಂದ ವಿಶ್ವಗುರುವಾಗಲು, ಅಧಿಕಾರಿಗಳು ಎಸಿ ರೂಮ್ನಲ್ಲಿ ಕುಳಿತರೆ ಅಭಿವೃದ್ಧಿಯಾಗಲು ಸಾಧ್ಯವಿಲ್ಲ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದರೆ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಈ ನಿಟ್ಟಿನಲ್ಲಿ ಪಾಲಕರು ಮಕ್ಕಳ ಕಲಿಕೆಗೆ ಮನೆಯಲ್ಲಿ ಪೂರಕ ವಾತಾವರಣ ಕಲ್ಪಿಸಿಕೊಡಬೇಕು. ಅಶೋಕ್ ಕುಮಾರ್ ರೈ, ಶಾಸಕ