ಬೆಂಗಳೂರು: ಮಾಸ್ಕ್ ಹಾಕದೆ ಹೊರ ಬಂದವರಿಗೆ ದಂಡದ ಬಿಸಿ ಮುಟ್ಟಿಸಲು ಮಾರ್ಷಲ್ಗಳ ಜೊತೆ ಪೊಲೀಸರೂ ಫೀಲ್ಡ್ಗೆ ಇಳಿದಿದ್ದಾರೆ. ಕೋವಿಡ್ ನಿಯಮ ಉಲ್ಲಂಘಿಸಿ ದಂಡ ಕಟ್ಟದವರನ್ನು ಪೊಲೀಸ್ ಠಾಣೆಗೆ ಕರೆದೊಯ್ಯಲಾಗುತ್ತಿದೆ. ಈ ನಡುವೆ ಹಲವರು ಒಂದು ಸಾವಿರ ರೂ. ದಂಡ ಕಟ್ಟಲು ಆಗಲ್ಲ, ದಂಡ ವಸೂಲಿ ಮಾಡಿದವರು ಅದಕ್ಕೆ ಪ್ರತಿಯಾಗಿ ಮಾಸ್ಕ್ ಅನ್ನೂ ಕೊಡಿ, ನಾವು ದುಡಿಯೋದೆ ದಿನಕ್ಕೆ 300ರಿಂದ 600 ರೂಪಾಯಿ, ಅಂತಹದ್ದರಲ್ಲಿ ಅಷ್ಟೊಂದು ಹಣ ತರೋದು ಎಲ್ಲಿಂದಾ? ಎಂದು ಪೊಲೀಸರೊಂದಿಗೆ ವಾಗ್ವಾದಕ್ಕಿಳಿದಿದ್ದರು. ಈ ನಡುವೆ ಕೂಲಿಕಾರನೊಬ್ಬ ‘ದಂಡ ಕಟ್ಟಿದೀನಿ, ಇನ್ನು 24 ಗಂಟೆ ಕಾಲ ಮಾಸ್ಕ್ ಹಾಕಲ್ಲ’ ಎಂದು ಹೈಡ್ರಾಮ ಮಾಡಿದ್ದು, ಮಾರ್ಷಲ್ಗಳೇ ಬೆಸ್ತುಬಿದ್ದಿದ್ದಾರೆ.
ಇಂತಹ ರಂಪಾಟ ಮೆಜೆಸ್ಟಿಕ್ನಲ್ಲಿ ಬುಧವಾರ ಬೆಳಗ್ಗೆ ಸಂಭವಿಸಿದೆ. ಕೂಲಿಕಾರನೊಬ್ಬ ಮಾಸ್ಕ್ ಧರಿಸದೆ ಮೆಜೆಸ್ಟಿಕ್ಗೆ ಬಂದಿದ್ದ. ಅಲ್ಲಿದ್ದ ಮಾರ್ಷಲ್ಸ್ ಆತನಿಂದ 1,000 ಸಾವಿರ ರೂ. ದಂಡ ಕಟ್ಟಿಸಿಕೊಂಡರು. ಇದಾಗುತ್ತಿದ್ದಂತೆ ಹೈಡ್ರಾಮ ಶುರುಮಾಡಿದ ಆತ, ‘ನಾನು ಕೂಲಿ ಮಾಡಿ ದಿನಕ್ಕೆ 300 ರೂ. ಸಂಪಾದನೆ ಮಾಡ್ತಿದ್ದೆ. ಇದೀಗ ಮಾಸ್ಕ್ ಇಲ್ಲ ಎಂದು ಸಾವಿರ ರೂ. ದಂಡ ಕಟ್ಟಿಸಿಕೊಂಡಿದ್ದಾರೆ. ನಾನು ಕಟ್ಟಿರುವ ದಂಡದ ವ್ಯಾಲಿಡಿಟಿ 24 ಗಂಟೆ. ನಾಳೆ ಬೆಳಗ್ಗೆ 11 ಗಂಟೆ ವರೆಗೂ ನಾನು ಮಾಸ್ಕ್ ಧರಿಸಲ್ಲ’ ಎಂದು ಜೋರಾಗಿಯೇ ಕೂಗಾಡಿದ.
‘ಮಾಸ್ಕ್ ಹಾಕಿದ್ರೆ ಉಸಿರಾಟ ಮಾಡೋಕೆ ಕಷ್ಟ ಆಗುತ್ತೆ. ಉಸಿರಾಟ ಇಲ್ಲಾಂದ್ರೆ ಸಾಯುತ್ತೀನಿ. ನಾನು ಬದುಕಬೇಕು ಅಂದ್ರೆ ಮಾಸ್ಕ್ ಹಾಕೋದಿಲ್ಲ’ ಎಂದು ಸಬೂಬು ಹೇಳಿದ ಆತ, ‘ದಂಡ ಕಟ್ಟಿದೀನಿ, ಸೋ 24 ಗಂಟೆ ಕಾಲ ಮಾಸ್ಕ್ ಹಾಕಲ್ಲ’ ಎಂದು ವಾದಿಸುತ್ತಿದ್ದ. ವ್ಯಕ್ತಿಯ ರಂಪಾಟಕ್ಕೆ ಸುಸ್ತಾದ ಮಾರ್ಷಲ್ಸ್, ಎಷ್ಟೇ ಮನವೊಲಿಸಿದರೂ ಫಲಿಸಲಿಲ್ಲ. ‘ನೋ.. ನೋ.. ಮಾಸ್ಕ್ ಹಾಕಲ್ಲ’ ಎಂದ. ಸಾರ್ವಜನಿಕರು ಮೂಕ ಪ್ರೇಕ್ಷಕರಂತೆ ಈ ಹೈಡ್ರಾಮ ನೋಡುತ್ತಿದ್ದರು.
ಇಷ್ಟೆಲ್ಲ ಬೆಳವಣಿಗೆ ಬಳಿಕ ಸಾರ್ವಜನಿಕರ ಒತ್ತಡಕ್ಕೆ ಮಣಿದ ಸಿಎಂ ಬಿ.ಎಸ್.ಯಡಿಯೂರಪ್ಪ, ದಂಡದ ಪ್ರಮಾಣ ಇಳಿಕೆ ಮಾಡಿದ್ದಾರೆ.