ನವದೆಹಲಿ: ಟಿ20 ವಿಶ್ವಕಪ್ ಪ್ರಾರಂಭವಾಗುವ ಮೊದಲು ಅಂದರೆ ಐಪಿಎಲ್ 2024 ಮುಗಿಯುವ ಹಂತದಲ್ಲಿ, ಬಿಸಿಸಿಐ ಟಿ20 ವಿಶ್ವಕಪ್ ತಂಡವನ್ನು ಘೋಷಿಸಿತು. 15 ಜನರ ತಂಡದಲ್ಲಿದ್ದ ಆ ಓರ್ವ ಆಟಗಾರನ ಹೆಸರು ನೋಡಿ ಭಾರತೀಯ ಕ್ರೀಡಾಭಿಮಾನಿಗಳು ಕೆರಳಿದ್ದರು. ಆತನನ್ನು ಏಕೆ ಆಯ್ಕೆ ಮಾಡಿದರು? ಎಂದು ಬಿಸಿಸಿಐ ಆಯ್ಕೆ ಸಮಿತಿಯನ್ನು ಕಟುವಾಗಿ ನಿಂದಿಸಿದರು. ಆತನಿಗಿಂತ ಹೊಸ ಆಟಗಾರನಿಗೆ ಅವಕಾಶ ನೀಡುವುದೇ ಉತ್ತಮ, ಆತ ತಂಡದಲ್ಲಿದ್ದರೆ ಕಪ್ ಗೆಲ್ಲುವುದು ಕನಸು ಎಂದು ಟೀಕಿಸಿದರು. ಆದರೆ, ಇಂದು ಟೀಮ್ ಇಂಡಿಯಾ ಪಾಲಿಗೆ ಆತನೇ ಹೀರೋ. ಲೆಜೆಂಡರಿ ಕ್ರಿಕೆಟಿಗರು ವಿಫಲರಾದಾಗಲೆಲ್ಲ ಆತ ಬ್ಯಾಟ್ ಮತ್ತು ಬಾಲ್ನಲ್ಲಿ ಮಿಂಚಿದರು. ಟೀಮ್ ಇಂಡಿಯಾಕ್ಕೆ ಅಕ್ಷರಶಃ ವಜ್ರಾಯುಧವಾದರು. ಅಂತಿಮವಾಗಿ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ದಕ್ಷಿಣ ಆಫ್ರಿಕಾ ಗೆಲುವಿಗೆ 24 ಎಸೆತಗಳಲ್ಲಿ 26 ರನ್ಗಳ ಅಗತ್ಯವಿದ್ದಾಗ ಬೌಲಿಂಗ್ಗೆ ಬಂದ ಆತ ಮೊದಲ ಎಸೆತದಲ್ಲಿ ಡೇಂಜರಸ್ ಕ್ಲಾಸೆನ್ ಅವರನ್ನು ಔಟ್ ಮಾಡಿ ಕೇವಲ 4 ರನ್ ನೀಡಿದರು. ನಂತರ ಕೊನೆಯ ಓವರ್ನಲ್ಲಿ 16 ರನ್ಗಳನ್ನು ಡಿಫೆಂಡ್ ಮಾಡಬೇಕಾದಾಗ, ಮೊದಲ ಎಸೆತದಲ್ಲಿ ಅಪಾಯಕಾರಿ ಡೇವಿಡ್ ಮಿಲ್ಲರ್ ಅವರನ್ನು ಔಟ್ ಮಾಡಿ ಪಂದ್ಯವನ್ನು ಭಾರತದ ಕೈಗೆ ನೀಡಿದರು. ಕೊನೆಯ ಓವರ್ನಲ್ಲಿ ಕೇವಲ 8 ರನ್ ನೀಡಿ ಟೀಮ್ ಇಂಡಿಯಾಗೆ ಗೆಲುವು ತಂದುಕೊಟ್ಟರು. ಈಗಾಗಲೇ ಆತ ಯಾರೆಂದು ನಿಮಗೆ ಗೊತ್ತಾಗಿರುತ್ತದೆ. ಹೌದು, ಅವರೇ ಹಾರ್ದಿಕ್ ಪಾಂಡ್ಯ.
ಐಪಿಎಲ್ 2024ರ ಮೊದಲು ಹಾರ್ದಿಕ್ ಪಾಂಡ್ಯ ಅವರನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಯಿತು. ಗುಜರಾತ್ ಟೈಟಾನ್ಸ್ನಿಂದ ಮುಂಬೈ ಇಂಡಿಯನ್ಸ್ಗೆ ತೆರಳಿದ ಬಳಿಕ ರೋಹಿತ್ ಶರ್ಮ ಅವರನ್ನು ಮುಂಬೈ ತಂಡದ ನಾಯಕತ್ವದಿಂದ ತೆಗೆದುಹಾಕಲಾಯಿತು. ಬಳಿಕ ಪಾಂಡ್ಯ ಅವರಿಗೆ ಆ ಜವಾಬ್ದಾರಿಯನ್ನು ನೀಡಲಾಯಿತು. ಇದಾದ ಬಳಿಕ ಹಾರ್ದಿಕ್ ಪಾಂಡ್ಯ ವಿರುದ್ಧ ಸಾಕಷ್ಟು ಟೀಕೆಗಳು ವ್ಯಕ್ತವಾದವು. ಅಲ್ಲದೆ, ಐಪಿಎಲ್ 2024ರ ಆರಂಭದ ನಂತರ ಮುಂಬೈನ ಮೊದಲ ಪಂದ್ಯದಲ್ಲಿ ರೋಹಿತ್ ಶರ್ಮ ಅವರನ್ನು ಬೌಂಡರಿ ಲೈನ್ನಲ್ಲಿ ಫೀಲ್ಡಿಂಗ್ ಮಾಡಲು ಕಳುಹಿಸಿದ್ದು, ಪಾಂಡ್ಯ ವಿರುದ್ಧ ಕ್ರಿಕೆಟ್ ಅಭಿಮಾನಿಗಳ ಕೋಪವನ್ನು ಮತ್ತಷ್ಟು ಹೆಚ್ಚಿಸಿತು.
ಇದಿಷ್ಟೇ ಅಲ್ಲದೆ, ಮೈದಾನದಲ್ಲಿ ಪಾಂಡ್ಯ ಕಂಡ ಕೂಡಲೇ ಅಲ್ಲಿದ್ದವರೆಲ್ಲ ಬೂ ಎಂದು ಕೂಗಿ ಪಾಂಡ್ಯರನ್ನು ಹೀಯಾಳಿಸಿದರು. ವಿದೇಶಿ ಕ್ರಿಕೆಟಿಗರು ಕೂಡ ಭಾರತದ ಕ್ರಿಕೆಟಿಗನೊಬ್ಬ ತನ್ನ ಅಭಿಮಾನಿಗಳಿಂದಲೇ ಇಷ್ಟೊಂದು ತೀವ್ರ ವಿರೋಧ ಎದುರಿಸುತ್ತಿರುವುದನ್ನು ಹಿಂದೆಂದು ನೋಡಿಲ್ಲ ಎಂದು ಅಚ್ಚರಿ ವ್ಯಕ್ತಪಡಿಸಿದರು. ಇದರ ನಡುವೆ ಪಾಂಡ್ಯ ಅವರನ್ನು ಹಾಗೆ ಟ್ರೋಲ್ ಮಾಡಬೇಡಿ ಎಂದು ವಿರಾಟ್ ಕೊಹ್ಲಿ ಪ್ರೇಕ್ಷಕರಲ್ಲಿ ಕೇಳಿಕೊಂಡಿದ್ದನ್ನು ಮರೆಯುವಂತಿಲ್ಲ. ಒಂದು ಹಂತದಲ್ಲಿ ರೋಹಿತ್ ಶರ್ಮ ಕೂಡ ಕ್ರೀಡಾಭಿಮಾನಿಗಳ ಬಳಿ ಕೈಮುಗಿದು ಇದನ್ನು ಇಲ್ಲಿಗೆ ನಿಲ್ಲಿಸಿ ಎಂದು ಮನವಿ ಮಾಡಿದರು. ಆದರೂ ಪಾಂಡ್ಯ ಮೇಲಿನ ಅಭಿಮಾನಿಗಳ ಸಿಟ್ಟು ಮಾತ್ರ ಕಡಿಮೆಯಾಗಲಿಲ್ಲ.
ಪಾಂಡ್ಯ ವಿರುದ್ಧ ಕೆಟ್ಟದಾಗಿ ಟ್ರೋಲ್ ಮಾಡಲಾಯಿತು. ನಾಯಿಯೊಂದು ಮೈದಾನಕ್ಕೆ ಪ್ರವೇಶಿಸಿದಾಗ, ಕ್ರೀಡಾಂಗಣದಲ್ಲಿದ್ದವರು ಹಾರ್ದಿಕ್ ಹಾರ್ದಿಕ್ ಎಂದು ಕೂಗಿದ್ದು ಇಂದಿಗೂ ಪಾಂಡ್ಯರನ್ನು ಕಾಡುತ್ತಲೇ ಇದೆ. ಇದರ ಜೊತೆಗೆ ಐಪಿಎಲ್ 2024 ರಲ್ಲಿ ಪಾಂಡ್ಯ ಫಾರ್ಮ್ ಕೊರತೆ ಟೀಕೆಗಳನ್ನು ಮತ್ತಷ್ಟು ಹೆಚ್ಚಿಸಿತು. ಆ ನಂತರ ಅವರ ವೈಯಕ್ತಿಕ ಜೀವನದ ಹಲವು ವಿಷಯಗಳು ಹೊರಬಿದ್ದವು. ಡಿವೋರ್ಸ್ ವದಂತಿ ತೀವ್ರ ಚರ್ಚೆಗೆ ಗ್ರಾಸವಾಯಿತು. ತನ್ನ ವಿರುದ್ಧದ ಟ್ರೋಲ್ಗಳನ್ನು ಡೈವರ್ಟ್ ಮಾಡಲು ಡಿವೋರ್ಸ್ ಸುದ್ದಿ ತೇಲಿ ಬಿಟ್ಟಿದ್ದಾರೆ ಎಂಬ ಅಪವಾದವೂ ಕೂಡ ವ್ಯಕ್ತವಾಯಿತು. ಇದೆಲ್ಲವನ್ನೂ ಮೌನವಾಗಿ ನಗುತ್ತಲೇ ಸಹಿಸಿಕೊಂಡ ಪಾಂಡ್ಯ ಇದೀಗ ದೇಶಕ್ಕಾಗಿ ವಿಶ್ವಕಪ್ ಗೆದ್ದುಕೊಟ್ಟು ಟೀಕೆ ಮಾಡಿದವರಿಗೆ ತಿರುಗೇಟು ನೀಡಿದ್ದಾರೆ. ಅಲ್ಲದೆ, ಶಾಪ ಹಾಕಿದವರಿಂದ ಪ್ರಶಂಸೆ ಪಡೆಯುತ್ತಿದ್ದಾರೆ.
ಪಾಂಡ್ಯ ಅವರ ಸಾಧನೆಯನ್ನು ನೋಡಿದ ಕ್ರಿಕೆಟ್ ತಜ್ಞರು ಇದು ನಿಜವಾದ ಕಮ್ ಬ್ಯಾಕ್ ಎಂದು ಹೊಗಳುತ್ತಿದ್ದಾರೆ. ಕೆಲವು ತಿಂಗಳ ಹಿಂದೆ ಫೈನಲ್ ಪಂದ್ಯದ ನಂತರ ತನಗೆ ಆಗಿದ್ದ ಟ್ರೋಲಿಂಗ್ ಅನ್ನು ನೆನಪಿಸಿಕೊಂಡು ಪಾಂಡ್ಯ ಸಹ ಮೈದಾನದಲ್ಲಿ ಕಣ್ಣೀರಿಟ್ಟರು. ಈ ಕ್ಷಣವನ್ನು ನೋಡಿದ ಕೋಟ್ಯಂತರ ಭಾರತೀಯರು ಪಾಂಡ್ಯಗಾಗಿ ಮಿಡಿದವರು. ಟೀಕೆಗಳು ಸಾಯುತ್ತವೆ ಸಾಧನೆ ಶಾಶ್ವತವಾಗಿ ಉಳಿಯುತ್ತವೆ ಎಂದು ಧೈರ್ಯ ತುಂಬಿದರು. ಅಂದು ಆಡಿಕೊಂಡವರಿಂದಲೇ ಇಂದು ಪಾಂಡ್ಯ ಶಹಬ್ಬಾಸ್ ಗಿರಿ ಪಡೆದಿದ್ದಾರೆ. ಯಶಸ್ಸು ಅಂದರೆ ಹೀಗಿರಬೇಕು ಅನ್ನುವುದಕ್ಕೆ ಪಾಂಡ್ಯ ತಾಜಾ ಉದಾಹರಣೆಯಾಗಿದ್ದಾರೆ. (ಏಜೆನ್ಸೀಸ್)
HARDIK PANDYA – YOU CHAMPION!
An emotional speech by Hardik about his tough times, he redeemed himself like a true hero. 🫡🇮🇳pic.twitter.com/l8mwdyqqIs
— Mufaddal Vohra (@mufaddal_vohra) June 30, 2024
ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಕೊಹ್ಲಿ ನಿವೃತ್ತಿ ಘೋಷಣೆ ಹಿಂದಿರುವ ಅಸಲಿ ಕಾರಣ ಇದು! ಬಿಸಿಸಿಐ ವಿರುದ್ಧ ಆಕ್ರೋಶ
ಮೂರು ದಿನದಲ್ಲಿ 60 ಮಂದಿಯನ್ನು ಮದ್ವೆಯಾದ ಮಹಿಳೆ! ಕಾರಣ ಕೇಳಿದ್ರೆ ನಿಮ್ಮ ಹುಬ್ಬೇರೋದು ಖಚಿತ