ಹನೂರು: ತಾಲೂಕಿನ ನಾಗನತ್ತ ಗ್ರಾಮದಲ್ಲಿ ಸೋಮವಾರ ಕರಡಿ ದಾಳಿಯಿಂದ ಯುವಕನೊಬ್ಬ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಗ್ರಾಮದ ಚೇತನ್ ಎಂಬಾತ ಬೆಳಗ್ಗೆ 7ಗಂಟೆ ಸಮಯಯಲ್ಲಿ ಗ್ರಾಮದ ಹೊರವಲಯದಲ್ಲಿನ ಜಮೀನೊಂದರ ಸಮೀಪ ಬಹಿರ್ದೆಸೆಗೆ ತೆರಳಿದ್ದನು. ಈ ವೇಳೆ ಪೊದೆಯೊಳಗೆ ಅಡಗಿ ಕುಳಿತಿದ್ದ ಕರಡಿ ಈತನ ಮೇಲೆ ದಾಳಿ ನಡೆಸಲು ಮುಂದಾಗಿದೆ. ಈ ವೇಳೆ ತಪ್ಪಿಸಿಕೊಂಡ ಚೇತನ್ ತುಸು ದೂರ ತೆರಳಿ ಗದರಿಸಿದಾಗ ಕರಡಿ ಅಲ್ಲಿಂದ ಓಟ ಕಿತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಒಂದು ವಾರದಿಂದ ಈ ಭಾಗದಲ್ಲಿ ಕರಡಿ ಕಾಣಿಸಿಕೊಳ್ಳುತ್ತಿದ್ದು, ಜನರನ್ನು ಭಯ ಭೀತಿಗೊಳಿಸುತ್ತಿದೆ. ಇದರಿಂದ ಒಬ್ಬಂಟಿಯಾಗಿ ತೆರಳಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಅರಣ್ಯ ಇಲಾಖೆ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಅನಾಹುತ ಸಂಭವಿಸುವ ಮುನ್ನಾ ಕರಡಿಯನ್ನು ಸೆರೆ ಹಿಡಿಯುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.