More

    ಮೇ 18ರಂದು ಸರ್ಕಾರಿ ಅಧಿಕಾರಿಗಳಿಂದ ದೈವಕ್ಕೆ ಕೋಲ ಸೇವೆ, ಗುಡ್ಡೆ ಗುಳಿಗ ನೇಮೋತ್ಸವ ತಾಲೂಕು ಕಚೇರಿಯಲ್ಲೇ ಕಾಣಿಕೆ ಡಬ್ಬಿ

    ವಿಜಯವಾಣಿ ಸುದ್ದಿಜಾಲ ಕಾರ್ಕಳ

    ಊರಿನ ದೈವಸ್ಥಾನ ಅಥವಾ ಕುಟುಂಬದ ದೈವಗಳಿಗೆ ಭಕ್ತರಿಂದ ಕೋಲ, ನೇಮೋತ್ಸವ ನಡೆಯುವುದು ಸಾಮಾನ್ಯ. ಆದರೆ ಅಧಿಕಾರಿಗಳೇ ಮುಂದೆ ನಿಂತು ದೈವಕ್ಕೆ ಕೋಲ ಸೇವೆ ನೀಡುವ ಅಪೂರ್ವ ಸಂಗತಿ ಕಾರ್ಕಳದಲ್ಲಿ ಪ್ರತಿ ವರ್ಷವೂ ನಡೆಯುತ್ತಿದೆ.

    ತುಳುನಾಡಿನ ಅದೆಷ್ಟೋ ಜನ ಇಂದಿಗೂ ವಸ್ತುಗಳು ಕಾಣೆಯಾದರೆ, ತೊಂದರೆಗಳು ಎದುರಾದರೇ ಮೊದಲು ಭಕ್ತಿಯಿಂದ ನೆನೆದು ಪ್ರಾರ್ಥಿಸಿಕೊಳ್ಳುವುದು ತಮ್ಮ ಇಷ್ಟದ ದೈವ ದೇವರನ್ನು. ಅದರಂತೆ ಕಾರ್ಕಳದ ಕಂದಾಯ ಅಧಿಕಾರಿಗಳು, ಪೊಲೀಸರು ತೊಂದರೆ ಎದುರಾದಾಗ ಹಾಗೂ ಖಡತಗಳು ನಾಪತ್ತೆಯಾದಾಗ ಮೊದಲು ನೆನಪಿಸಿಕೊಳ್ಳುವುದೇ ಕಾರ್ಕಳದ ತಾಲೂಕು ಗುಡ್ಡೆ ಗುಳಿಗ ದೈವವನ್ನು. ಹೀಗಾಗಿ ಪ್ರತಿ ವರ್ಷವೂ ದೈವಕ್ಕೆ ಹರಕೆ ನೀಡುವ ಪದ್ಧತಿ ಹಾಗೂ ಕೋಲ ಸೇವೆ ನೀಡುವ ಸಂಪ್ರದಾಯವಿದೆ. ತಾಲೂಕು ಆಡಳಿತದ ಮರ್ಯಾದೆ ಪಡೆದು ತಾಲೂಕು ಗುಡ್ಡೆ ಗುಳಿಗ ದೈವವೆಂದೇ ಜನಜನಿತವಾಗಿದೆ.

    ಕಾರ್ಕಳ ನಗರದಂಚಿನ ಕುಕ್ಕುಂದೂರು ಗ್ರಾಪಂ ವ್ಯಾಪ್ತಿಯ ಹುಡ್ಕೋ ಕಾಲನಿಯಲ್ಲಿ ತಾಲೂಕು ಗುಡ್ಡೆ ಗುಳಿಗ ದೈವದ ಸ್ಥಾನವಿದೆ. 90 ವರ್ಷಗಳಿಗೂ ಹೆಚ್ಚಿನ ಇತಿಹಾಸವಿರುವ ದೈವಸ್ಥಾನವಿದು. ಬ್ರಿಟಿಷ್ ಕಾಲದಿಂದಲೂ ಈ ದೈವವನ್ನು ಅಧಿಕಾರಿಗಳು ಆರಾಧಿಸಿಕೊಂಡು ಬಂದಿದ್ದು, ಇಂದಿಗೂ ತಾಲೂಕು ಆಡಳಿತಕ್ಕೆ ಯಾವುದೇ ಜಾತಿ ಧರ್ಮದ ಅಧಿಕಾರಿಗಳು ಬಂದರೂ ಇಲ್ಲಿನ ಗುಳಿಗ ದೈವಕ್ಕೆ ಕೋಲ ಸೇವೆ ಮಾತ್ರ ನಡೆಯುತ್ತದೆ. ಪ್ರಸ್ತುತ ಜೈನ ಕುಟುಂಬಕ್ಕೆ ಸೇರಿದ ಆಡಳಿತದಲ್ಲಿದೆ. ಆದರೆ ಪ್ರತಿ ವರ್ಷವೂ ತಾಲೂಕು ಆಡಳಿತ ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆಯಿಂದಲೂ ಕೋಲ ಸೇವೆ ನಡೆಯುವ ಜತೆಗೆ ವರ್ಷಕ್ಕೆ 30ಕ್ಕೂ ಹೆಚ್ಚು ಹರಕೆ ರೂಪದಲ್ಲಿ ಕೋಲ ಸೇವೆ ನಡೆಯುತ್ತದೆ.

    ಕಾರಣಿಕ ದೈವದ ಮಹಿಮೆ ಕುರಿತು ಅನೇಕ ಕಥೆಗಳು ಸ್ಥಳಿಯವಾಗಿ ಪ್ರಚಲಿತದಲ್ಲಿವೆ. ದೈವಕ್ಕೆ ಕೋಲ ನೀಡದೆ ಇದ್ದಲ್ಲಿ ನಾನಾ ರೂಪದಲ್ಲಿ ಸಮಸ್ಯೆ ಕಾಣಿಸಿಕೊಂಡು ಮಹಿಮೆ ತೋರಿಸಿಕೊಡುವಷ್ಟು ಪ್ರಭಾವಶಾಲಿ ದೈವವೆಂಬ ನಂಬಿಕೆ ಸ್ಥಳೀಯರಲ್ಲಿ, ಅಧಿಕಾರಿ ವಲಯದಲ್ಲಿದೆ.


    ಕಚೇರಿಯಲ್ಲಿ ಕಾಣಿಕೆ ಡಬ್ಬಿ

    ತಾಲೂಕು ಕಚೇರಿಯಲ್ಲೇ ತಾಲೂಕು ಗುಡ್ಡೆ ಗುಳಿಗ ದೈವದ ಕಾಣಿಕೆ ಡಬ್ಬಿ ಇರಿಸಲಾಗಿದೆ. ಇಲ್ಲಿನ ಸಿಬ್ಬಂದಿ ನಿತ್ಯ ಇಲ್ಲಿನ ಗಂಧ ಪ್ರಸಾದ ಪಡೆದು ತಮ್ಮ ಕರ್ತವ್ಯದಲ್ಲಿ ಹಾಜರಾಗುತ್ತಾರೆ. ಅಲ್ಲದೆ ಅಧಿಕಾರಿಗಳು, ಸಿಬ್ಬಂದಿ ಹಾಗೂ ಜನರು ಕಡತಗಳು ನಾಪತ್ತೆಯಾದ ಸಂದರ್ಭ ಕಡತಗಳಿಗೆ ಸಂಬಂಧಪಟ್ಟ ಸಮಸ್ಯೆ ಬಂದಾಗ ಇದೇ ಕಾಣಿಕೆ ಡಬ್ಬಿಗೆ ತಮ್ಮಿಂದ ಸಾಧ್ಯವಾದಷ್ಟು ಕಾಣಿಕೆ ಹಾಕಿ ಪ್ರಾರ್ಥಿಸಿಕೊಂಡ ಬಳಿಕ ಅದೆಷ್ಟೋ ಸಮಸ್ಯೆ ಮುಕ್ತಿ ಕಂಡಿವೆ.


    ಮೇ 18ರಂದು ಗಗ್ಗರ ಸೇವೆ

    ಗುಡ್ಡೆ ಶ್ರೀ ಗುಳಿಗ ದೈವಸ್ಥಾನದಲ್ಲಿ ತಾಲೂಕು ಆಡಳಿತ ಕಂದಾಯ ಇಲಾಖೆ ವತಿಯಿಂದ ಗುಳಿಗ ದೈವದ ನೇಮೋತ್ಸವ ಮೇ 18ರಂದು ನಡೆಯಲಿದೆ. ರಾತ್ರಿ 8.30ಕ್ಕೆ ಗುಳಿಗ ದೈವದ ಗಗ್ಗರ ಸೇವೆ ಹಾಗೂ ರಾತ್ರಿ 9.30ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆಯೂ ನಡೆಯಲಿದೆ.

    ದೈವದ ಭಯ ಭಕ್ತಿಯಿದ್ದಾಗ ಎಚ್ಚರಿಕೆಯಿಂದ ಕೆಲಸ ಮಾಡಲು ಸಾಧ್ಯ. ತಾಲೂಕು ಗುಳಿಗ ದೈವಕ್ಕೆ ತಾಲೂಕಾಡಳಿತದಿಂದ ಕೋಲ ಸೇವೆ ಕೊಡುವ ಸಂಪ್ರದಾಯ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ದೈವದ ಕಾರ್ಯದಲ್ಲಿ ಭಾಗಿಯಾವುದು ಪುಣ್ಯದ ಕೆಲಸವಾಗಿದೆ. ತುಂಬಾನೇ ಖುಷಿ ನೀಡಿದೆ.
    -ನರಸಪ್ಪ, ಕಾರ್ಕಳ ತಹಸೀಲ್ದಾರ್


    ಇಲ್ಲಿನ ಗುಳಿಗ ದೈವದ ಕಾರಣಿಕ ಶಕ್ತಿ ನಂಬಿ ತಾಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆ ವತಿಯಿಂದ ಪ್ರತಿ ವರ್ಷವೂ ಕೋಲ ಸೇವೆ ಜರುಗುತ್ತದೆ. ಜತೆಗೆ ವರ್ಷಕ್ಕೆ 30ಕ್ಕೂ ಅಧಿಕ ಹರಕೆ ಕೋಲ ನಡೆಯುತ್ತದೆ.
    -ಭಾವಗುತ್ತು ಸುಕುಮಾರ ಜೈನ್, ಆಡಳಿತ ಮೊಕ್ತೇಸರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts