ಮಡಿಕೇರಿ:
ಕೊಡಗಿನಲ್ಲಿ ಭಾನುವಾರ ರಾತ್ರಿಯಿಂದ ಈಚೆಗೆ ಮತ್ತೆ ಮಳೆಯ ವಾತಾವರಣ ಕಾಣಿಸಿಕೊಂಡಿದೆ. ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಸೋಮವಾರ ಉತ್ತಮ ಮಳೆಯಾಗಿದೆ. ವಿರಾಜಪೇಟೆಯಲ್ಲಿ ರಾತ್ರಿ ಸುರಿದ ಮಳೆಗೆ ಸಣ್ಣ ಪ್ರಮಾಣದಲ್ಲಿ ಮಣ್ಣು ಕುಸಿದು ವ್ಯಕ್ತಿಯೊಬ್ಬರಿಗೆ ಸೇರಿದ ಕಾರೊಂದಕ್ಕೆ ಹಾನಿಯಾಗಿದೆ.
ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಸೋಮವಾರ ಮಧ್ಯಾಹ್ನ ತನಕ ಮೋಡ ಕವಿದಿತ್ತು. ಮಧ್ಯಾಹ್ನ ನಂತರ ಮಳೆ ಆರಂಭವಾಯಿತು. ಜೀವ ನದಿ ಕಾವೇರಿ ಉಗಮಸ್ಥಾನ ತಲಕಾವೇರಿ, ತ್ರಿವೇಣಿ ಸಂಗಮ ಕ್ಷೇತ್ರ ಭಾಗಮಂಡಲ, ನಾಪೋಕ್ಲು ಮತ್ತಿತರ ಭಾಗಗಳಲ್ಲಿ ಜೋರು ಮಳೆಯಾಗಿದೆ. ತ್ರಿವೇಣಿ ಸಂಗಮಕ್ಕೆ ಮತ್ತೆ ನೀರು ಹೆಚ್ಚಿನ ಪ್ರಮಾಣದಲ್ಲಿ ಹರಿದು ಬರುತ್ತಿದೆ.
ಸಿದ್ದಾಪುರ, ಸುಂಟಿಕೊಪ್ಪ, ಶನಿವಾರಸಂತೆ ಭಾಗದಲ್ಲೂ ಮಳೆ ಬಿರುಸಾಗಿದೆ. ಗೋಣಿಕೊಪ್ಪದಲ್ಲಿ ಬಿಟ್ಟು ಬಿಟ್ಟು ಮಳೆಯಾಗುತ್ತಿತ್ತು. ಕುಶಾಲನಗರ ಭಾಗದಲ್ಲಿ ಸಾಧಾರಣ ಮಳೆಯಾಗಿದೆ.
ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ ೮.೩೦ಕ್ಕೆ ಕೊನೆಗೊಂಡAತೆ ಕಳೆದ ೨೪ ಗಂಟೆ ಅವಧಿಯಲ್ಲಿ ಸರಾಸರಿ ೬೧.೦೯ ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ ೧೧.೪೯ ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗೆ ೮೪೮.೧೪ ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ೨೭೮.೩೯ ಮಿ.ಮೀ. ಮಳೆಯಾಗಿತ್ತು.
ಮಡಿಕೇರಿ ತಾಲೂಕಿನಲ್ಲಿ ೬೬.೫೫ ಮಿ.ಮೀ., ವಿರಾಜಪೇಟೆ ತಾಲೂಕಿನಲ್ಲಿ ೧೦೬.೯೫ ಮಿ.ಮೀ., ಪೊನ್ನಂಪೇಟೆ ತಾಲೂಕಿನಲ್ಲಿ ೪೩.೬೦ ಮಿ.ಮೀ., ಸೋಮವಾರಪೇಟೆ ತಾಲೂಕಿನಲ್ಲಿ ೪೮.೮೫ ಮಿ.ಮೀ. ಹಾಗೂ ಕುಶಾಲನಗರ ತಾಲೂಕಿನಲ್ಲಿ ೩೯.೫೦ ಮಿ.ಮೀ. ಸರಾಸರಿ ಮಳೆಯಾಗಿದೆ.
ಮಡಿಕೇರಿ ಕಸಬಾ ೬೪.೨೦, ನಾಪೋಕ್ಲು ೪೮.೪೦, ಸಂಪಾಜೆ ೪೮, ಭಾಗಮಂಡಲ ೧೦೫.೬೦, ವಿರಾಜಪೇಟೆ ೧೨೪.೪೦, ಅಮ್ಮತ್ತಿ ೮೯.೫೦, ಹುದಿಕೇರಿ ೪೪.೪೦, ಶ್ರೀಮಂಗಲ ೩೨, ಪೊನ್ನಂಪೇಟೆ ೪೮, ಬಾಳೆಲೆ ೫೦, ಸೋಮವಾರಪೇಟೆ ಕಸಬಾ ೫೫.೬೦, ಶನಿವಾರಸಂತೆ ೩೦, ಶಾಂತಳ್ಳಿ ೮೫, ಕೊಡ್ಲಿಪೇಟೆ ೨೪, ಕುಶಾಲನಗರ ೩೧ ಹಾಗೂ ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯಲ್ಲಿ ೪೮ ಮಿ.ಮೀ. ಮಳೆಯಾಗಿದೆ.
ಹಾರಂಗಿ ಜಲಾಶಯಕ್ಕೆ ೧೬೩೭ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಹಾರಂಗಿ ಜಲಾಶಯದ ಗರಿಷ್ಠ ಮಟ್ಟ ೨,೮೫೯ ಅಡಿಗಳಾಗಿದ್ದು, ಸೋಮವಾರ ೨೮೩೮.೪೨ ಅಡಿಗಳಷ್ಟು ನೀರಿತ್ತು. ಕಳೆದ ವರ್ಷ ಇದೇ ದಿನ ೨೮೨೦.೬೯ ಅಡಿ ನೀರಿನ ಸಂಗ್ರಹ ಇತ್ತು. ಕಳೆದ ವರ್ಷ ಇದೇ ದಿನ ೩೫೭ ಕ್ಯುಸೆಕ್ ಒಳಹರಿವು ಇತ್ತು. ಪ್ರಸ್ತುತ ಹೊರ ಹರಿವು ನದಿಗೆ ೨೦೦ ಕ್ಯೂಸೆಕ್ ಇದೆ. ಕಳೆದ ವರ್ಷ ಇದೇ ದಿನ ನೀರಿನ ಹೊರ ಹರಿವು ನದಿಗೆ ೩೦ ಕ್ಯೂಸೆಕ್, ನಾಲೆಗೆ ೨೦ ಕ್ಯೂಸೆಕ್ ಇತ್ತು.