ಸಿದ್ದಾಪುರ: ವಿದ್ಯಾರ್ಥಿಗಳು ಮೌಲ್ಯಯುತವಾದ ಶಿಕ್ಷಣ ಪಡೆದು ಜೀವನದಲ್ಲಿ ಯಶಸ್ಸು ಸಾಧಿಸಬೇಕೆಂದು ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಸಿ.ಇ.ತೀರ್ಥಕುಮಾರ್ (ಮೂಡಳ್ಳಿ ರವಿ) ಹೇಳಿದರು.
ಗಾಂಧಿ ಯುವಕ ಸಂಘದ ವತಿಯಿಂದ ಇತ್ತೀಚೆಗೆ ಕಂಡಕರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಪುಸ್ತಕ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರಸ್ತುತ ಬಹುತೇಕರಿಗೆ ಇಂಗ್ಲಿಷ್ ವ್ಯಾಮೋಹದಿಂದ ಸರ್ಕಾರಿ ಶಾಲೆಗಳ ಬಗ್ಗೆ ಕೀಳರಿಮೆ ಉಂಟಾಗಿದೆ. ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಲು ಹಿಂದೇಟು ಹಾಕುತ್ತಿದ್ದಾರೆ. ಆದರೆ ಕಂಡಕರೆಯ ಗಾಂಧಿ ಯುವಕ ಸಂಘವು ಸಾಮಾಜಿಕ ಚಟುವಟಿಕೆ ಮೂಲಕ ಸ್ಥಳೀಯ ಸರ್ಕಾರಿ ಶಾಲೆಗಳನ್ನು ಪ್ರೋತ್ಸಾಹಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಕಳೆದ ವರ್ಷ ಗಾಂಧಿ ಯುವಕ ಸಂಘದ ಪದಾಧಿಕಾರಿಗಳು ಕಂಡಕರೆ ಶಾಲೆಗೆ ಉಚಿತವಾಗಿ 25 ಕುರ್ಚಿಗಳನ್ನು ನೀಡಿ ಎಲ್ಲರಿಗೂ ಮಾದರಿಯಾಗಿದ್ದರು. ಇದೀಗ ಎಲ್ಲ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಪುಸ್ತಕ ನೀಡಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಕಲಿಕೆಗೆ ಪ್ರೋತ್ಸಾಹ ನೀಡುತ್ತಿರುವುದು ಸಂತಸದ ವಿಚಾರ ಎಂದರು.
ಗ್ರಾಮ ಪಂಚಾಯಿತಿ ಹಾಗೂ ಸರ್ಕಾರದ ಮಟ್ಟದಿಂದ ಶಾಲಾ ಅಭಿವೃದ್ಧಿ ಕೆಲಸಗಳಿಗೆ ಬೇಕಾದ ಅನುದಾನವನ್ನು ಒದಗಿಸಲು ಶಾಸಕರ ಗಮನ ಸೆಳೆಯುವುದಾಗಿ ಗ್ರಾಮ ಪಂಚಾಯಿತಿ ಸದಸ್ಯ ಸಿ.ಇ.ತೀರ್ಥಕುಮಾರ್ ಭರವಸೆ ನೀಡಿದರು.
ಗಾಂಧಿ ಯುವಕ ಸಂಘದ ಸ್ಥಾಪಕ ಇಸ್ಮಾಯಿಲ್ ಕಂಡಕರೆ ಮಾತಾನಾಡಿ, ಕಂಡಕರೆ ಸರ್ಕಾರಿ ಶಾಲೆಯನ್ನು ಅಭಿವೃದ್ಧಿಪಡಿಸಲು ಸಂಘದಿಂದ ಹಲವಾರು ಯೋಜನೆಗಳನ್ನು ನಾವು ಕೈಗೊಂಡಿದ್ದೇವೆ. ಶಿಕ್ಷಕರು ಶಾಲೆಯ ಅಭಿವೃದ್ಧಿಗೆ ಶ್ರಮಿಸುತ್ತಿರುವುದು ಹೆಮ್ಮೆಯ ವಿಷಯವಾಗಿದ್ದು, ಮುಂದಿನ ದಿನಗಳಲ್ಲಿ ಶಾಲೆಯ ಯೋಜನೆಗಳಿಗೆ ಗಾಂಧಿ ಯುವಕ ಸಂಘದ ವತಿಯಿಂದ ಎಲ್ಲ ರೀತಿಯ ಆರ್ಥಿಕ ಸಹಕಾರ ನೀಡುವುದಾಗಿ ಇಸ್ಮಾಯಿಲ್ ಹೇಳಿದರು.
ಶಾಲಾ ಮುಖ್ಯಶಿಕ್ಷಕ ಧನುಪ್ರಕಾಶ್, ಸಹಶಿಕ್ಷಕ ರತೀಶ್ ಟಿ.ಎನ್.ಗಾಂಧಿ, ಯುವಕ ಸಂಘದ ಹಿರಿಯ ಉಪಾಧ್ಯಕ್ಷ ಸವಾದ್ ಉಸ್ಮಾನ್, ಕಾರ್ಯದರ್ಶಿ ಕೆ.ಜೆ.ಶಿಬಿಲ್, ಶಿಕ್ಷಕರಾದ ಸುಜಿತ್, ವಿನೋದ ಇದ್ದರು.