ಹುಬ್ಬಳ್ಳಿ : ಇಲ್ಲಿನ ವಿಶ್ವೇಶ್ವರ ನಗರದ ಉದ್ಯಾನ ಬಳಿ ಇರುವ ಎನ್ಸಿಸಿ ಚಟುವಟಿಕೆಗಳಿಗಾಗಿ ಮೀಸಲಿಟ್ಟಿದ್ದ ರಕ್ಷಣಾ ಇಲಾಖೆಗೆ ಸೇರಿದ ಜಾಗವನ್ನು ಮೂಲಸೌಲಭ್ಯ ಒದಗಿಸುವುದಕ್ಕಾಗಿ ತಕ್ಷಣದಿಂದ ಮಹಾನಗರ ಪಾಲಿಕೆಗೆ ಲೀಸ್ ಪಡೆಯಲಾಗುತ್ತಿದೆ.
ಇದರೊಂದಿಗೆ ಕಳೆದ 40-50 ವರ್ಷಗಳಿಂದ ವಾರ್ಡ್ ನಂ. 39ರ ವಿಶ್ವೇಶ್ವರನಗರದಲ್ಲಿರುವ ಭೂಸೇನೆಗೆ ಸೇರಿರುವ ಅಂದಾಜು 17 ಎಕರೆ ಜಾಗದ ಸಮಸ್ಯೆ ಇದೀಗ ನಿವಾರಣೆಗೊಳ್ಳುವ ಹಂತಕ್ಕೆ ಬಂದಂತಾಗಿದೆ.
ಶಾಸಕ ಮಹೇಶ ಟೆಂಗಿನಕಾಯಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ, ಪಾಲಿಕೆ ಸದಸ್ಯರು ಹಾಗೂ ಭೂಸೇನೆಯ ಅಧಿಕಾರಿಗಳೊಂದಿಗೆ ಸೋಮವಾರದಂದು ಇಲ್ಲಿನ ಪ್ರವಾಸಿ ಮಂದಿರದಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಈ ಕುರಿತು ಸಮಗ್ರವಾಗಿ ರ್ಚಚಿಸಿ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಯಿತು.
ಈ 17 ಎಕರೆ ಜಾಗದಲ್ಲಿ 2.5 ಎಕರೆ ಜಾಗವನ್ನು ಎನ್ಸಿಸಿ ಕಾರ್ಯಚಟುವಟಿಕೆಗಳಿಗಾಗಿ ಬಿಟ್ಟುಕೊಡಲಾಗಿತ್ತು. ಆದರೆ, ಈ ಜಾಗದಲ್ಲಿ ಎನ್ಸಿಸಿ ಯಾವುದೇ ಚಟುವಟಿಕೆ ನಡೆಸುತ್ತಿರಲಿಲ್ಲ. ಈ ಜಾಗದಲ್ಲಿ ಗಿಡ, ಗಂಟೆಗಳು ಬೆಳೆದಿದ್ದು, ಸ್ವಚ್ಛತೆಯನ್ನೂ ಕಾಯ್ದುಕೊಂಡಿರಲಿಲ್ಲ. ಸುತ್ತಲಿನ ಜನವಸತಿ ಪ್ರದೇಶದಲ್ಲಿ ಕುಡಿಯುವ ನೀರು, ಯುಜಿಡಿ ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸಲು ಈ ಜಾಗೆ ಅಡ್ಡಿಯಾಗಿತ್ತು.
ಇದೀಗ, ಈ ಜಾಗವನ್ನು ತಕ್ಷಣದಿಂದ ಲೀಸ್ಗೆ ಪಡೆಯುವ ಮೂಲಕ ಅಗತ್ಯ ಸೌಲಭ್ಯವನ್ನು ಕಲ್ಪಿಸಲು ಅನುಕೂಲವಾದಂತಾಗಿದೆ.
ಇದರೊಂದಿಗೆ ಇಲ್ಲಿನ 17 ಎಕರೆ ಜಾಗದ ಬದಲಾಗಿ ನಗರದ ಹೊರಗಡೆ 17 ಎಕರೆ ಜಾಗವನ್ನು ಪರ್ಯಾಯವಾಗಿ ನೀಡುವ ಪ್ರಸ್ತಾವನೆಯನ್ನು ಶಾಸಕ ಮಹೇಶ ಟೆಂಗಿನಕಾಯಿ ಭೂಸೇನೆಯ ಅಧಿಕಾರಿಗಳ ಮುಂದಿಟ್ಟಿದ್ದಾರೆ. ಪ್ರತ್ಯೇಕ ಮೂರು ಕಡೆ ಇರುವ 17 ಎಕರೆ ಜಾಗವನ್ನೂ ಭೂಸೇನೆಯ ಅಧಿಕಾರಿಗಳಿಗೆ ತೋರಿಸಲಾಯಿತು. ಜಾಗ ನೋಡಿದ ಅಧಿಕಾರಿಗಳು, ವಿಶ್ವೇಶ್ವರ ನಗರದಲ್ಲಿರುವ ಜಾಗದ ಈಗಿನ ಬೆಲೆಯಷ್ಟು ಜಾಗವನ್ನು ನೀಡುವಂತೆ ಮನವಿ ಮಾಡಿದರು. ಈ ಕುರಿತು ಮತ್ತೊಮ್ಮೆ ಹಿರಿಯ ಅಧಿಕಾರಿಗಳೊಂದಿಗೆ ರ್ಚಚಿಸಿ, ಸೂಕ್ತ ನಿರ್ಧಾರ ಕೈಗೊಂಡು, 15 ದಿನಗಳಲ್ಲಿ ಎಲ್ಲ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ದಿವ್ಯ ಪ್ರಭು, ಭೂಸೇನೆಯ ಅಧಿಕಾರಿ ಕನಸವ ಬೋಧರ್, ಸಹಾಯಕ ಅಧಿಕಾರಿ ಲೋಕೇಶ್ ಗೌಡ, ಪಾಲಿಕೆ ಸದಸ್ಯರಾದ ವೀರಣ್ಣ ಸವಡಿ, ಸೀಮಾ ಮೊಗಲಿಶೆಟ್ಟರ, ಸಂತೋಷ ಚವ್ಹಾಣ, ಜಿಲ್ಲಾ ನೊಂದಣಿ ಅಧಿಕಾರಿ ಶಾಲಟ ಮುಸ್ಸೇನ್, ತಹಸಿಲ್ದಾರ್ ಕಲ್ಲನಗೌಡರ, ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ, ನೋಡಲ್ ಅಧಿಕಾರಿ ವಿಠ್ಠಲ ತುಬಾಕಿ, ಮುಖಂಡರಾದ ಸಿದ್ದು ಮುಗಲಿಶೆಟ್ಟರ, ರವಿ ನಾಯಕ, ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಪಾಲಿಕೆ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.