ಬೆಂಗಳೂರು:ಹೊಸ ಬಿಪಿಎಲ್ ಕೋರಿ ಈಗಾಗಲೆ ಅರ್ಜಿ ಸಲ್ಲಿಸಿರುವ ಅರ್ಜಿದಾರರ ಮನೆಗೆ ಖುದ್ದಾಗಿ ಭೇಟಿ ನೀಡಿ ದಾಖಲೆ ಪರಿಶೀಲಿಸಲು ಆಹಾರ ಇಲಾಖೆ ಮುಂದಾಗಿದೆ.
ಕಾರ್ಡ್ ಪಡೆಯಲು ಅರ್ಹತೆ ಹೊಂದಿದ್ದಾರೋ ಅಥವಾ ಇಲ್ಲವೋ ಎಂಬುದನ್ನು ಇಲಾಖೆ ಅಧಿಕಾರಿಗಳು, ಮನೆಗಳಿಗೆ ತೆರಳಿ ಅರ್ಜಿದಾರರ ನೈಜ ದಾಖಲೆಗಳನ್ನು ಪರಿಶೀಲಿಸಲಿದ್ದಾರೆ. ಈ ವೇಳೆ ದಾಖಲೆ ಸರಿಯಾಗಿ ಇಲ್ಲದಿದ್ದರೆ ಅಥವಾ ತಪ್ಪಾಗಿ ಮಾಹಿತಿ ನೀಡಿದ್ದರೆ ಅಂತಹ ಅರ್ಜಿ ರದ್ದುಪಡಿಸಲು ಇಲಾಖೆ ತೀರ್ಮಾನಿಸಿದೆ. ಆಯಾ ಜಿಲ್ಲೆಗಳ ಉಪ ನಿರ್ದೇಶಕರಿಗೆ ಈ ಜವಾಬ್ದಾರಿ ನೀಡಿರುವ ಇಲಾಖೆ, ಅದಷ್ಟೂ ಬೇಗ ಈ ಕ್ರಮ ತೆಗೆದುಕೊಂಡು ವರದಿ ನೀಡುವಂತೆ ಸೂಚಿಸಿದೆ.
2017ರಿಂದ 2021ರವರೆಗೆ ರಾಜ್ಯಾದ್ಯಂತ ಹೊಸ ಬಿಪಿಎಲ್ ಕೋರಿ, ಕುಟುಂಬ ಸದಸ್ಯರ ಸೇರ್ಪಡೆ, ತಿದ್ದುಪಡಿ ಸಂಬಂಧಪಟ್ಟಂತೆ ಇಲಾಖೆಗೆ ಸಲ್ಲಿಕೆಯಾದ 39,04,798 ಅರ್ಜಿಗಳ ಪೈಕಿ 26,48,171 ಅರ್ಜಿ ಅನುಮೋದನೆಯಾಗಿದ್ದರೆ 9,60,641 ತಿರಸತಗೊಂಡಿವೆ. ಇದರಲ್ಲಿ 36,08,812 ಅರ್ಜಿಗಳು ವಿಲೇವಾರಿಯಾದರೆ 2,95,986 ಬಾಕಿ ಉಳಿದಿವೆ. 2023ರ ಮೇನಲ್ಲಿ ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿತ್ತು. ಇದರಿಂದಾಗಿ ಹೊಸ ಪಡಿತರ ಚೀಟಿ ಮಂಜೂರಾತಿಗೆ, ಸೇರ್ಪಡೆ, ತಿದ್ದುಪಡಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು. ಅಂದಿನಿಂದ ಈವರೆಗೆ ಬಾಕಿ ಅರ್ಜಿಗಳ ವಿಲೇವಾರಿಗೆ ಸರ್ಕಾರ ಅನುಮತಿ ಕೊಟ್ಟಿಲ್ಲ. ಅರ್ಜಿಗಳ ವಿಲೇವಾರಿಗೆ ಅನುಮತಿ ಕೋರಿ ಸರ್ಕಾರಕ್ಕೆ ಇಲಾಖೆ ಪತ್ರ ಬರೆದಿತ್ತು. ಆದರೆ, ಇದಕ್ಕೆ ಅನುಮತಿ ಸಿಕ್ಕಿಲ್ಲ. ನಿಗದಿಗಿಂತ ಹೆಚ್ಚುವರಿ ಕಾರ್ಡ್ ಮಂಜೂರು ಮಾಡಬಾರದು, 3 ತಿಂಗಳಿಂದ ರೇಷನ್ ಪಡೆಯದ ಕಾರ್ಡ್ ರದ್ದು ಮಾಡಬೇಕು ಹಾಗೂ ಆರ್ಥಿಕ ಸಬಲರು ಪಡೆದಿರುವ ಕಾರ್ಡ್ಗಳನ್ನು ರದ್ದು ಮಾಡಿದ ಆಧಾರದ ಮೇರೆಗೆ ಹಂತ ಹಂತವಾಗಿ ಅರ್ಜಿ ವಿಲೇ ಮಾಡಿ ಬಿಪಿಎಲ್ ನೀಡಬೇಕೆಂದು ಸರ್ಕಾರ, ಈಗಾಗಲೆ ಇಲಾಖೆಗೆ ಸೂಚಿಸಿದೆ.
ರಾಕೇಶ್ ಶೆಟ್ಟಿ ವಿರುದ್ಧ 21 ಕ್ರಿಮಿನಲ್ ಕೇಸ್: ಗೂಂಡಾ ಕಾಯ್ದೆಯಡಿ ಬಂಧಿಸಲು ಗಿರೀಶ ಮಟ್ಟಣ್ಣವರ್ ಆಗ್ರಹ
ಆರೋಗ್ಯ ಸಮಸ್ಯೆಗೂ ಸಿಗುತ್ತೆ ಬಿಪಿಎಲ್ ಕಾರ್ಡ್: ಕ್ಯಾನ್ಸರ್, ಕಿಡ್ನಿ, ಹೃದಯ ಸೇರಿ ಇತರ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಹೊಸದಾಗಿ ಬಿಪಿಎಲ್ ಕಾರ್ಡ್ ಸಿಗುತ್ತದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಉದ್ದೇಶದಿಂದ 3 ವರ್ಷದ ಹಿಂದೆ ಸಲ್ಲಿಕೆಯಾದ ಅರ್ಜಿಗಳನ್ನು ವಿಶೇಷ “ವೈದ್ಯಕಿಯ ಕೇಸ್’ ಎಂದು ಪರಿಗಣಿಸಿ ವಿಲೇ ಮಾಡಲಾಗುತ್ತಿದೆ. ಗಂಭೀರ ಕಾಯಿಲೆಯಿಂದ ಬಳಲುತ್ತಿರುವವರು ಆಧಾರ್ ಕಾರ್ಡ್, ಆದಾಯ ದೃಢೀಕರಣ ಪತ್ರ, ಮನೆ ಬಾಡಿಗೆ ದಾಖಲೆ ಜತೆಗೆ ಕಡ್ಡಾಯವಾಗಿ ವೈದ್ಯರಿಂದ ಆರೋಗ್ಯ ಸಂಬಂಧಿಸಿದ ಪ್ರಮಾಣಪತ್ರ ತರಬೇಕು. ಈ ಬಗ್ಗೆ ಆಹಾರ ನಿರೀಕ್ಷಕರನ್ನು ಭೇಟಿ ಮಾಡಿ ಗಮನಕ್ಕೆ ತರಬೇಕು. ಆಹಾರ ನಿರೀಕ್ಷಕ ಎಲ್ಲ ದಾಖಲೆ ಪರಿಶೀಲಿಸಿ ಆಹಾರ ಇಲಾಖೆಯ ವೆಬ್ಸೈಟ್ನಲ್ಲಿ ಅರ್ಜಿ ಸಲ್ಲಿಸುತ್ತಾರೆ. ನಂತರ, ಆರೋಗ್ಯ ಉದ್ದೇಶಕ್ಕೋ ಅಥವಾ ಇನ್ಯಾವುದಕ್ಕೂ ಎಂಬುದರ ಬಗ್ಗೆ ಪರಿಶೀಲಿಸಲು ರೋಗಿ ಮನೆಗೆ ಭೇಟಿ ನೀಡುತ್ತಾರೆ. ಇಂತಹ ಅರ್ಜಿ ಸಲ್ಲಿಸಿರುವ ಬಗ್ಗೆ ಖಾತ್ರಿ ಬಳಿಕ ಆಹಾರ ನಿರೀಕ್ಷಕ, ಅರ್ಜಿ ಅನುಮೋದನೆಗೆ ಉಪನಿರ್ದೇಶಕರಿಗೆ ರವಾನಿಸುತ್ತಾರೆ. ಅಂತಿಮವಾಗಿ ಉಪನಿರ್ದೇಶಕರು ಆಯುಕ್ತಾಲಯಕ್ಕೆ ಕಳುಹಿಸಿ ಅನುಮತಿ ಪಡೆಯುತ್ತಾರೆ. ಬಳಿಕ, 24 ಗಂಟೆಯೊಳಗೆ ಹೊಸ ಕಾರ್ಡ್ ವಿತರಿಸಲಾಗುತ್ತದೆ.