ವಿಶಾಖಪಟ್ಟಣಂ: ಬಡವ – ಶ್ರೀಮಂತ, ಹಳ್ಳಿ-ಪಟ್ಟಣ ಎಂಬ ಭೇದವಿಲ್ಲದೆ ಅನೇಕ ಜನರು ನಾಯಿಗಳನ್ನು ಸಾಕುತ್ತಾರೆ. ನಾಯಿ ಬಹು ನಿಯತ್ತಿನ ಪ್ರಾಣಿ, ತನ್ನ ಪ್ರಾಣ ಕೊಟ್ಟಾದರೂ ಮಾಲೀಕನನ್ನು ರಕ್ಷಿಸುತ್ತದೆ ಎಂಬ ಮನೋಭಾವ ಎಲ್ಲಕಡೆಯಿದೆ.
ಆದರೆ ಇಲ್ಲೊಂದು ನಾಯಿ ವಿಚಿತ್ರವಾಗಿ ವರ್ತಿಸಿ ಮಾಲೀಕ ಮತ್ತು ಅವರ ಮಗನನ್ನು ಕಚ್ಚಿದ್ದು, ಇಬ್ಬರೂ ಮೃತಪಟ್ಟಿದ್ದಾರೆ. ಇದು ನಾಯಿ ಸಾಕುವ ಪ್ರತಿಯೊಬ್ಬರೂ ಗಮನಿಸಬೇಕಾದ ಅಂಶವಾಗಿದೆ.
ಇದನ್ನೂ ಓದಿ: ರಾಜಮೌಳಿ ದಂಪತಿಗೆ ಆಸ್ಕರ್ ಅಕಾಡೆಮಿ ಆಹ್ವಾನ!
ವಿಶಾಖಪಟ್ಟಣಂ ಜಿಲ್ಲೆಯ ಭೀಮಿಲಿಯಲ್ಲಿ ಘಟನೆ ನಡೆದಿದೆ. ಮೃತರನ್ನು ನರಸಿಂಗರಾವ್ (59) ಮತ್ತು ಅವರ ಮಗ ಭಾರ್ಗವ್ (27) ಎಂದು ಗುರುತಿಸಲಾಗಿದೆ.
ನರಸಿಂಗರಾವ್ ಹಲವು ವರ್ಷಗಳಿಂದ ತಮ್ಮ ಮನೆಯಲ್ಲಿ ನಾಯಿ ಸಾಕುತ್ತಿದ್ದರು. ಆದರೆ ವಾರದ ಹಿಂದೆ ಅವರ ಸಾಕು ನಾಯಿ ಭಾರ್ಗವ್ ಮೂಗಿಗೆ ಮತ್ತು ನರಸಿಂಗರಾವ್ ಕಾಲಿಗೆ ಕಚ್ಚಿದೆ. ಘಟನೆ ನಡೆದ 2 ದಿನಗಳ ನಂತರ ನಾಯಿ ತೀವ್ರ ಅಸ್ವಸ್ಥಗೊಂಡಿತ್ತು. ಕೂಡಲೇ ಅವರು ಎಚ್ಚೆತ್ತುಕೊಂಡು ಆ್ಯಂಟಿ ರೇಬಿಸ್ ಇಂಜೆಕ್ಷನ್ ತೆಗೆದುಕೊಂಡಿದ್ದರು.
ಆದರೆ ಚಿಕಿತ್ಸೆ ಪಡೆಯುತ್ತಿರುವಾಗಲೇ ತಂದೆ-ಮಗ ಸಾವನ್ನಪ್ಪಿದ್ದು, ಈ ಘಟನೆಯಲ್ಲಿ ಸ್ಥಳೀಯರು ದಿಗ್ಭ್ರಮ ಗೊಂಡಿದ್ದಾರೆ. ನಾಯಿ ಕಚ್ಚಿದಾಗ ಗ್ಯಾಪ್ ಕೊಡದೆ ಆ್ಯಂಟಿ ರೇಬಿಸ್ ತೆಗೆದುಕೊಂಡಿದ್ದರೆ ಈ ಸ್ಥಿತಿ ಬರುತ್ತಿರಲಿಲ್ಲ ಎಂದು ವೈದ್ಯರು ಹೇಳಿದ್ದಾರೆ.
ಸಾಕುನಾಯಿಗಳಿಗೆ ನಿಯಮಿತವಾಗಿ ಜಂತುಹುಳು ನಿವಾರಕ, ರೇಬೀಸ್ ವಿರುದ್ಧ ಮತ್ತು ಇತರೆ ಲಸಿಕೆಗಳನ್ನು ಕೊಡಿಸಬೇಕೆಂದು ವೈದ್ಯರು ಸೂಚಿಸುತ್ತಾರೆ.