ವಿಜಯವಾಣಿ ಸುದ್ದಿಜಾಲ ಕಾಸರಗೋಡು
ಜಲಶಕ್ತಿ ಅಭಿಯಾನ ಕೇಂದ್ರ ತಂಡ ಜಿಲ್ಲೆಯ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಜಿಲ್ಲಾಡಳಿತದ ನೇತೃತ್ವದಲ್ಲಿ ಜಿಲ್ಲೆಯಲ್ಲಿ ನಡೆಯುತ್ತಿರುವ ಜಲಸಂರಕ್ಷಣಾ ಚಟುವಟಿಕೆಗಳ ಮೌಲ್ಯಮಾಪನ ನಡೆಸಿತು.
ಜಲಶಕ್ತಿ ಅಭಿಯಾನದ ಕೇಂದ್ರ ನೋಡೆಲ್ ಅಧಿಕಾರಿ ಎಸ್ಇಜಡ್ ನೋಯ್ಡ ಅಭಿವೃದ್ಧಿ ಆಯುಕ್ತ ಎ.ಬಿಪಿನ್ ಮೆನನ್, ವಿಜ್ಞಾನಿ ಕೆ.ಅನಿಶಾ ತಂಡದಲ್ಲಿದ್ದು, ಜೂನ್ 28ರವರೆಗೆ ಜಿಲ್ಲೆಯ ವಿವಿಧ ಜಲಸಂರಕ್ಷಣಾ ಚಟುವಟಿಕೆಗಳ ಮೌಲ್ಯಮಾಪನ ನಡೆಸಲಿದ್ದಾರೆ.
ಜಿಲ್ಲಾಧಿಕಾರಿಗಳ ಚೇಂಬರ್ನಲ್ಲಿ ಜಲಶಕ್ತಿ ಅಭಿಯಾನಕ್ಕೆ ಸಂಬಂಧಿಸಿದಂತೆ ನಾನಾ ಇಲಾಖೆಗಳಿಂದ ನಡೆಯುತ್ತಿರುವ ಚಟುವಟಿಕೆಗಳ ವಿವರಣೆ ಆಲಿಸಿದ ಕೇಂದ್ರ ತಂಡ ನಂತರ ವಿವಿಧೆಡೆ ಭೇಟಿ ನೀಡಿತು. ಅರಣ್ಯದಲ್ಲಿರುವ ಚಿಲುಮೆಗಳನ್ನು ಪತ್ತೆ ಹಚ್ಚಿ ಸ್ವಚ್ಛಗೊಳಿಸಿ ಕಾಡುಪ್ರಾಣಿಗಳಿಗೆ ಕುಡಿಯುವ ನೀರು ಒದಗಿಸುವ ಯೋಜನೆ ಜಿಲ್ಲೆಯ ವಿಶೇಷ ಯೋಜನೆಯಾಗಿ ನಡೆದಿದೆ. ಕಾಸರಗೋಡು ಜಿಲ್ಲೆಯಲ್ಲಿ ಸ್ಥಳೀಯಾಡಳಿತ ಸಂಸ್ಥೆಗೆ ಒಂದು ಗದ್ದೆ ಸಂರಕ್ಷಣಾ ಸಮಿತಿ ಎಂಬ ಯೋಜನೆಯೊಂದಿಗೆ ಮುನ್ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ಮಾಹಿತಿ ನೀಡಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಭೂಗರ್ಭಜಲ ಇಲಾಖೆ ಅಧಿಕಾರಿ ಒ ರತೀಶ್ ಕಾರ್ಯಚಟುವಟಿಕೆಗಳನ್ನು ಮಂಡಿಸಿದರು. ಎಲ್ಎಸ್ಜಿಡಿ ಜಂಟಿ ನಿರ್ದೇಶಕ ಜೇಸನ್ ಮ್ಯಾಥ್ಯೂ, ವಿಭಾಗೀಯ ಅರಣ್ಯಾಧಿಕಾರಿ ಬಿ.ಅಶ್ರಫ್, ನವಕೇರಳ ಕ್ರಿಯಾ ಯೋಜನೆ ಜಿಲ್ಲಾ ಸಂಯೋಜಕ ಕೆ.ಬಾಲಕೃಷ್ಣನ್, ಪ್ರಧಾನ ಕೃಷಿ ಅಧಿಕಾರಿ ಜ್ಯೋತಿಕುಮಾರಿ, ಎನ್ಐಸಿ ಜಿಲ್ಲಾ ಅಧಿಕಾರಿ ಕೆ.ಲೀನಾ, ಸಣ್ಣ ನೀರಾವರಿ ಇಲಾಖೆ ಕಾರ್ಯಪಾಲಕ ಅಭಿಯಂತ ಪಿ.ಟಿ.ಸಂಜೀವ್, ನೆಹರು ಯುವ ಕೇಂದ್ರದ ಜಿಲ್ಲಾ ಅಧಿಕಾರಿ ಪಿ.ಅಖಿಲ್ ಮೊದಲಾದವರು ಉಪಸ್ಥಿತರಿದ್ದರು.