ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟಿ ಪವಿತ್ರಾ ಗೌಡ ಜೈಲು ಪಾಲಾಗಿದ್ದಾರೆ. ಅವರ ಜೊತೆ ಇನ್ನೂ ಕೆಲವು ಸಹಚರರು ಕೂಡ ನ್ಯಾಯಾಂಗ ಬಂಧನದಲ್ಲಿದ್ದಾರೆ. ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಸೇರಿದಂತೆ 17ಕ್ಕೂ ಹೆಚ್ಚು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಪೊಲೀಸರು ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸುತ್ತಿದ್ದಾರೆ. ಈ ಕುರಿತಾಗಿ ಬಿಗ್ ಬಾಸ್ ಸೀಸನ್ 10ರ ರ್ಯಾಪರ್ ಇಶಾನಿ ಮತ್ತು ನಟ ದರ್ಶನ್ ಒಳ್ಳೆ ಬಾಂಧವ್ಯ ಹೊಂದಿದ್ದಾರೆ, ಅಣ್ಣ ತಂಗಿ ರೀತಿಯಲ್ಲಿದ್ದಾರೆ. ಈ ಪ್ರಕರಣ್ ಆರೋಪಿಯಾಗಿರುವ ದರ್ಶನ್ ಅವರ ಕುರಿತಾಗಿ ಇಶಾನಿ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಇತ್ತೀಚಿಗೆ ದರ್ಶನ್ ನಿವಾಸಕ್ಕೆ ಭೇಟಿ ನೀಡಿ ಹುಟ್ಟುಹಬ್ಬದ ಜೊತೆ ಅಣ್ಣ ತಂಗಿ ಬಾಂಧವ್ಯ ಆಚರಿಸಿದ್ದರು. ಈಗ ಅದೇ ಫೋಟೋ ಅಪ್ಲೋಡ್ ಮಾಡಿ ರೇಣುಕಾಸ್ವಾಮಿ ಪ್ರಕರಣದ ಬಗ್ಗೆ ಬರೆದುಕೊಂಡಿದ್ದಾರೆ.
ನಿಜಕ್ಕೂ ಇದು ಅಘಾತಕಾರಿ ಸುದ್ದಿ.! ಒಬ್ಬ ಅಣ್ಣನ ರೂಪದಲ್ಲಿ ನಾನು ಕಂಡ ದರ್ಶನ್ ಸರ್ ನಿಜಕ್ಕೂ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ಕೇಳಿದಾಗ ನಂಬಲು ಸಾಧ್ಯವಾಗಲಿಲ್ಲ. ತನ್ನನ್ನು ನಂಬಿದ ಒಂದು ಹೆಣ್ಣುಜೀವದ ಶ್ರೇಯೋಭಿಲಾಷಿಯಾಗಿ ಅವರು ಮಾಡಿದ ಕೆಲಸ ಸೂಕ್ತವೆ ಎಂದು ಅನಿಸಿದರೂ ಸಹ, ಕಾನೂನನ್ನು ಕೈಗೆತ್ತಿಕೊಳ್ಳುವುದಕ್ಕೆ ಸಂವಿಧಾನದ ಅಡಿಯಲ್ಲಿ ಬದುಕುತ್ತಿರುವ ನಮಗಾರಿಗೂ ಸಹ ಅಧಿಕಾರವಿಲ್ಲ. ದರ್ಶನ್ ಸರ್ ತಪ್ಪು ಮಾಡಿದ್ದರೆ ಅವರಿಗೆ ಶಿಕ್ಷೆಯಾಗಲಿ, ಆದರೆ ಅದುವರೆಗೂ ಇಲ್ಲ ಸಲ್ಲದ ಸುದ್ದಿಗಳನ್ನು ಹರಡಿ ಅವರ ತೇಜೋವಧೆ ಮಾಡುವುದು ಸರಿಯಲ್ಲ ಎಂದು ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದಾರೆ.
ಈಗಷ್ಟೆ ಇಂಡಸ್ಟ್ರಿಗೆ ಕಾಲಿಡುತ್ತಿರುವ ಪ್ರತಿಭೆ ನೀವು ಯಾಕೆ ಸುಮ್ಮನೆ ಈ ಘಟನೆ ಬಗ್ಗೆ ಮಾತನಾಡಿ ಟ್ರೋಲ್ಗೆ ಗುರಿಯಾಗುತ್ತೀರಾ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಇದುವರೆಗೆ 17 ಆರೋಪಿಗಳನ್ನು ಬಂಧಿಸಲಾಗಿದೆ. ಅವರ ಪೈಕಿ 13 ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಉಳಿದವರು ಪೊಲೀಸ್ ಕಸ್ಟಡಿಯಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ. ಆರೋಪಿಗಳಾದ ದರ್ಶನ್, ವಿನಯ್, ಧನರಾಜ್, ಪ್ರದೋಶ್ ಕಸ್ಟಡಿ ಅವಧಿ ಅಂತ್ಯವಾಗಲಿದ್ದು, ಕೋರ್ಟ್ ಮುಂದೆ ಹಾಜರುಪಡಿಸಿ ಪರಪ್ಪನ ಅಗ್ರಹಾರಕ್ಕೆ ಕಳಿಸಲು ಪೊಲೀಸರು ತಯಾರಿ ನಡೆಸಿದ್ದಾರೆ.