More

    ತಿಂಗಳೊಳಗೆ ಬಂಡೆ ಒಡೆಯುವ ಕೆಲಸ ಮುಗಿಸಿ

    ಸಂಸದ ಕೋಟ ಶ್ರೀನಿವಾಸ್​ ಸೂಚನೆ | ಸಂತಕಟ್ಟೆ ಬೈಪಾಸ್​ ತುರ್ತುಸಭೆ

    ವಿಜಯವಾಣಿ ಸುದ್ದಿಜಾಲ ಉಡುಪಿ
    ವರ್ಷವಾಗುತ್ತ ಬಂದರೂ ಸಂತೆಕಟ್ಟೆ ಬೈಪಾಸ್​ ಕಾಮಗಾರಿ ಮುಗಿಸದ್ದರಿಂದ ಪ್ರತಿದಿನವೂ ಟ್ರಾಫಿಕ್​ ಜಾಮ್​ ಆಗುತ್ತಿದ್ದು, ಜನರು ಹಿಡಿಶಾಪ ಹಾಕುತ್ತಿದ್ದಾರೆ. ಹೀಗಾಗಿ ತಿಂಗಳೊಳಗೆ ಬಂಡೆ ಒಡೆಯುವ ಕೆಲಸ ಮುಗಿಸಿ, ಕಾಮಗಾರಿಯ ವೇಗ ಹೆಚ್ಚಿಸಬೇಕು ಎಂದು ಸಂಸದ ಕೋಟ ಶ್ರೀನಿವಾಸ್​ ಪೂಜಾರಿ ಸೂಚನೆ ನೀಡಿದರು.

    ಉಡುಪಿಯ ಸಂತೆಕಟ್ಟೆಯಲ್ಲಿ ಅಂಡರ್​ಪಾಸ್​ ನಿರ್ಮಿಸುತ್ತಿರುವ ಕಾಮಗಾರಿ ತ್ವರಿತ ಮುಗಿಸುವಂತೆ ಹಾಗೂ ಕೇಂದ್ರ ಸಾರಿಗೆ ಸಚಿವ ನಿತಿನ್​ ಗಡ್ಕರಿ ಕಾರ್ಯಾಲಯದಿಂದ ಬಂದ ಸೂಚನೆ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶಾಸಕ ಯಶ್​ಪಾಲ್​ ಸುವರ್ಣ, ಗಣಿ ಇಲಾಖೆ ಹಾಗೂ ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳೊಂದಿಗೆ ಶುಕ್ರವಾರ ತುರ್ತುಸಭೆ ನಡೆಸಿ ಮಾತನಾಡಿದರು.

    ಯಂತ್ರೋಪಕರಣ ದ್ವಿಗುಣಗೊಳಿಸಿ

    ಬಂಡೆ ತೆರವುಗೊಳಿಸುವ ಸಂದರ್ಭದಲ್ಲಿ ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ಯಾವುದೇ ತೋದರೆ ಆಗದಂತೆ ಸುರಕ್ಷತೆ ಒದಗಿಸಲು ಗಣಿ ಮತ್ತು ಪೊಲೀಸ್​ ಇಲಾಖೆ ಮುತುವರ್ಜಿ ವಹಿಸುವಂತೆ ಜಿಲ್ಲಾಡಳಿತ ಸೂಚನೆ ನೀಡಬೇಕು. ಸೋಮವಾರದಿಂದಲೇ ಯಂತ್ರೋಪಕರಣ ಹಾಗೂ ಕಾರ್ಮಿಕರ ಸಂಖ್ಯೆ ದ್ವಿಗುಣಗೊಳಿಸಿ, ಈಗಿರುವ ಉಡುಪಿ-ಕುಂದಾಪುರ ಮಾರ್ಗದ ಬಲಭಾಗದ ಬೈಪಾಸ್​ ರಸ್ತೆ ಸಮರ್ಪಕಗೊಳಿಸಬೇಕು. ಅಲ್ಲದೆ, ತಿಂಗಳೊಳಗೆ ಎಡಗಡೆ ಇರುವ ಬೈಪಾಸ್​ಅನ್ನೂ ಸಮರ್ಪಕವಾಗಿಸಿ ಟ್ರಾಫಿಕ್​ ಸಮಸ್ಯೆ ನೀಗಿಸಲು ಮುಂದಾಗಬೇಕು ಎಂದು ತಾಕೀತು ಮಾಡಿದರು.

    ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಗಣಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

    ಸರ್ವೀಸ್​ ರೋಡ್​ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಿ

    ಶಾಸಕ ಯಶ್​ಪಾಲ್​ ಸುವರ್ಣ ಮಾತನಾಡಿ, ಸಂತೆಕಟ್ಟೆ ಅಂಡರ್​ಪಾಸ್​ ಕಾಮಗಾರಿ ಅತ್ಯಂತ ನಿಧಾನ ಗತಿಯಲ್ಲಿ ನಡೆಯುತ್ತಿದ್ದು, ಜನರಿಗೆ ಉತ್ತರಿಸಲೂ ಆಗದ ಸ್ಥಿತಿ ಎದುರಾಗುತ್ತಿದೆ. ಶೀಘ್ರವಾಗಿ ಕಾಮಗಾರಿ ಮುಗಿಸಿ. ಕಾಮಗಾರಿಯಲ್ಲಿ ಅಡ್ಡ ಬಂದಿರುವ ಬಂಡೆ ಸ್ಫೋಟಗೊಳಿಸುವ ಕಾಲಮಿತಿಯಲ್ಲೇ ಒಡೆಯುವ ಪ್ರಮಾಣ ಹೆಚ್ಚಿಸಿ, ತ್ವರಿತವಾಗಿ ಕೆಲಸ ಮುಗಿಸಿ. ಸಂತೆಕಟ್ಟೆ ಸಹಿತ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಗಮ ಸಂಚಾರಕ್ಕೆ ತೊಡಕಾಗಿರುವ ಹೊಂಡ-ಗುಂಡಿಗಳನ್ನು ಮುಚ್ಚಿಸಿ. ಪ್ರಯಾಣಿಕರ ಸುರಕ್ಷತೆಯ ನಿಟ್ಟಿನಲ್ಲಿ ಸಮರ್ಪಕವಾಗಿ ಬೀದಿ ದೀಪ, ಸೂಚನಾ ಫಲಕ ಅಳವಡಿಸಿ. ಸಾರ್ವಜನಿಕರ ಮನವಿಯ ಮೇರೆಗೆ ಅಗತ್ಯ ಸ್ಥಳಗಳಲ್ಲಿ ಸರ್ವೀಸ್​ ರೋಡ್​ ನಿರ್ಮಿಸುವ ಬಗ್ಗೆಯೂ ತಕ್ಷಣ ಪ್ರಸ್ತಾವನೆ ಸಲ್ಲಿಸಿ ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts