ಉಡುಪಿ: ಕುಣಿತ, ಹಾಡುಗಾರಿಕೆ ಎಲ್ಲವೂ ಮೇಳೈಸಿದ ದೇವಲೋಕದಿಂದ ಧರೆಗಿಳಿದು ಬಂದ ಕಲೆ ಯಕ್ಷಗಾನ. ಮಕ್ಕಳ ಯಕ್ಷಗಾನ ಪರಿಶುದ್ಧವಾಗಿರುತ್ತದೆ. ಭಾಷಾ ಶುದ್ಧಿ ಯಕ್ಷಗಾನದಲ್ಲಿ ಮಾತ್ರ ನೋಡಲು ಸಾಧ್ಯ. ಭಾವ ಶುದ್ಧಿ , ಕ್ರಿಯಾ ಶುದ್ಧಿ ಉಳಿದುಕೊಂಡಿರುವ ಯಕ್ಷಗಾನ ಉತ್ತರ ಮತ್ತು ದಕ್ಷಿಣ ಭಾರತ ಬೆಸೆಯುವ ಸೇತು ಎಂದು ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಹೇಳಿದರು.
ಪೂರ್ಣಪ್ರಜ್ಞ ಯಕ್ಷಗಾನ ಗುರುಕುಲ ಮತ್ತು ಯಕ್ಷಸಂಜೀವ ಯಕ್ಷಗಾಣ ಕೇಂದ್ರ ಆಶ್ರಯದಲ್ಲಿ ಮಂಗಳವಾರ ವಾರಣಾಸಿ ಎನ್ ಎಸ್ ಡಿ ವಿದ್ಯಾರ್ಥಿಗಳ ಏಕಲವ್ಯ ಯಕ್ಷಗಾನ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಅಶೀರ್ವದಿಸಿದರು.
ಅನೇಕ ವೇಣಿಗಳ ಸಂಗಮ ಯಕ್ಷಗಾನ. ಭಗವಂತನ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ದೇವರನ್ನು ತಿಳಿದುಕೊಳ್ಳಲು ಹಿರಿಯರು ಅನೇಕ ಗ್ರಂಥ ರಚನೆ ಮಾಡಿದ್ದಾರೆ. ಆಧುನಿಕ ಜಂಜಾಟದಲ್ಲಿ ಇವುಗಳನ್ನು ಓದುವಷ್ಟು ತಾಳ್ಮೆ ನಮ್ಮಲ್ಲಿಲ್ಲ. ಇದಕ್ಕಾಗಿ ಮಧ್ವರ ಶಿಷ್ಯ ಅದಮಾರು ಮಠದ ಮೂಲ ಪುರುಷ ನರಸಿಂಹ ತೀರ್ಥರು 700 ವರ್ಷದ ಹಿಂದೆ ಯಕ್ಷಗಾನ ಕಲಾಪ್ರಕಾರ ಪ್ರಾರಂಭಿಸಿದ್ದು, ಹೀಗಾಗಿ ಮಠಕ್ಕೂ ಯಕ್ಷಗಾನಕ್ಕೂ ಹತ್ತಿರದ ನಂಟಿದೆ ಎಂದರು.
ಶಾಸಕ ಯಶ್ಪಾಲ್ ಸುವರ್ಣ, ಯಕ್ಷಗಾನ ಅಕಾಡೆಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ, ತಿಂಗಳೆ ಪ್ರತಿಷ್ಠಾನದ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಕಲಾವಿದ ಡಾ. ಭಾಸ್ಕರಾನಂದ ಕುಮಾರ್, ವಾರಣಾಸಿ ಎನ್ ಎಸ್ ಡಿ ನಿರ್ದೇಶಕ ಪ್ರವಿಣ್ ಕುಂಜನ್ ಉಪಸ್ಥಿತರಿದ್ದರು.