ಬೇಲೂರು: ಬ್ರಿಟಿಷರ ವಿರುದ್ಧ ತೊಡೆತಟ್ಟಿ ದೇಶದಲ್ಲಿ ಸ್ವಾತಂತ್ರ್ಯದ ಕಿಚ್ಚು ಹಚ್ಚಿ ಸ್ವಾಭಿಮಾನದ ಪ್ರತೀಕವಾದವರು ನಾಡಿನ ಹಲಗಲಿ ಬೇಡರು ಎಂದು ಬೇಲೂರಿನ ರೋಟರಿ ಸಂಸ್ಥೆ ಮಾಜಿ ಅಧ್ಯಕ್ಷ ವೈ.ಡಿ.ಲೋಕೇಶ್ ಹೇಳಿದರು.
ಪಟ್ಟಣದ ಪೂರ್ಣಪ್ರಜ್ಞ ಶಾಲೆ ಸಭಾಂಗಣದಲ್ಲಿ ತಾಲೂಕು ಜಾನಪದ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಿದ್ದ ಹಲಗಲಿ ಜಾನಪದ ಸಾಹಿತ್ಯ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಇತಿಹಾಸ ಪುಟಗಳಲ್ಲಿ ದಾಖಲಾದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಸಿಪಾಯಿ ದಂಗೆ ಸಂದರ್ಭ ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಹಲಗಲಿ ಗ್ರಾಮದ ಬೇಡರು ಬ್ರಿಟಿಷರ ನಿದ್ದೆಗೆಡಿಸಿದ ವೀರ ಕನ್ನಡಿಗರು. ಬ್ರಿಟಿಷರು ಜಾರಿಗೆ ತಂದಿದ್ದ ಕಾನೂನಿನ ವಿರುದ್ಧ ಸೆಡ್ಡು ಹೊಡೆದು ನಿಂತ ಕನ್ನಡ ನೆಲೆದ ಹಲಗಲಿ ಬೇಡರು ಸ್ಮರಣೀಯರು. ಇಂತಹ ಅಪರೂಪದ ಮಹಾನ್ ವ್ಯಕ್ತಿಗಳನ್ನು ವಿದ್ಯಾರ್ಥಿಗಳಿಗೆ ತಿಳಿಸುವ ನಿಟ್ಟಿನಲ್ಲಿ ತಾಲೂಕು ಜಾನಪದ ಸಾಹಿತ್ಯ ಪರಿಷತ್ ಉತ್ತಮ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ತಾಲೂಕು ಜಾನಪದ ಸಾಹಿತ್ಯ ಪರಿಷತ್ ಅಧ್ಯಕ್ಷ ವೈ.ಸಿ.ಸಿದ್ದೇಗೌಡ ಮಾತನಾಡಿ, ಜನರಿಂದ ಜನರಿಗೆ, ಹೃದಯದಿಂದ ಹೃದಯಕ್ಕೆ ಜಾನಪದ ವಾಕ್ಯಗಳು ತಟ್ಟಿದ್ದರಿಂದ ಜಾನಪದ ಗೀತೆಗಳು ನಿಮಗೆ ಉಳಿದಿವೆ. ಪೂರ್ವಜರಿಗೆ ಬದುಕು ಮತ್ತು ಮಾನವೀಯ ಮೌಲ್ಯಗಳ ಬಗ್ಗೆ ಹೆಚ್ಚಿನ ಕಾಳಜಿ ಇತ್ತು. ಬದುಕು ಕೇವಲ ನಿಂತ ನೀರಲ್ಲ. ನಿತ್ಯ ಸುಖ ದುಃಖಗಳಲ್ಲೂ ಸಮಭಾವ ಇರಬೇಕು. ಬರುವ ಕಷ್ಟಗಳನ್ನು ಎದುರಿಸುವ ಧೈರ್ಯವಿರಬೇಕು. ಬದುಕು ಗಂಭೀರವಾಗಿ ಕಂಡರೂ ಸರ್ವಕಾಲಕ್ಕೂ ಖುಷಿಯಿಂದ ಜೀವಿಸಬೇಕು. ನಮ್ಮ ನಡುವೆ ಗಾದೆಗಳು, ಒಗಟುಗಳು, ಕುಟ್ಟುವ, ಬೀಸುವ, ನೀತಿಯ, ಸೋಬಾನ, ಕಥೆ ನಡೆಸಿ ಕೊಟ್ಟ ಅಮೂಲ್ಯ ಸಾಹಿತ್ಯವನ್ನು ಶಾಲಾ- ಕಾಲೇಜುಗಳ ವಿದ್ಯಾರ್ಥಿಗಳಿಗೆ ತಿಳಿಸುವ ಕೆಲಸ ಮಾಡಬೇಕಿದೆ ಎಂದರು.
ಪೂರ್ಣಪ್ರಜ್ಞ ವಿದ್ಯಾ ಸಂಸ್ಥೆ ಪ್ರಾಂಶುಪಾಲ ಎನ್.ಪ್ರಶಾಂತ್ ಕುಮಾರ್, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಹೆಬ್ಬಾಳು ಹಾಲಪ್ಪ, ಹಾಸನ ಸರ್ಕಾರಿ ಗೃಹ ವಿಜ್ಞಾನ ಕಾಲೇಜು ನಿವೃತ್ತ ಪ್ರಾಧ್ಯಾಪಕಿ ಡಾ.ವಿದ್ಯಾ, ಸಾಹಿತಿ ಇಂದಿರಮ್ಮ, ನಿವೃತ್ತ ಪ್ರಾಂಶುಪಾಲ ಪುಟ್ಟರಾಜು, ಸಾಹಿತಿ ಸೋಂಪುರ ಪ್ರಕಾಶ್, ಪ್ರಾಂಶುಪಾಲೆ ಸುನೀತಾ ಕುಮಾರ್ ಇತರರು ಇದ್ದರು.