ಕೊಪ್ಪಳ: ಮಹಿಳೆ ಕುತ್ತಿಗೆಯಲ್ಲಿನ ಚಿನ್ನದ ಸರ ಸುಲಿಗೆ ಮಾಡಿದ್ದ ಇಬ್ಬರು ಅಪರಾಧಿಗಳಿಗೆ 3.6 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ ನಗರದ ಸಿಜೆಎಂ ನ್ಯಾಯಾಲಯ ಆದೇಶಿಸಿದೆ.
ಮಹಾರಾಷ್ಟ್ರದ ನಭಿ ಅಲಿ ತಂದೆ ಗರೀಬ್ ಹುಸೇನ್, ಬಾಹರ ಶಿಕ್ಷೆಗೆ ಗುರಿಯಾದವರು. 2022ರ ಆಗಸ್ಟ್ 27ರಂದು ಕೊಪ್ಪಳದ ಪದಕಿ ಲೇಔಟ್ನಲ್ಲಿ ನಭಿಅಲಿ ಹಾಗೂ ಜಹಾರ ಅಬ್ಬಾಸ ಎಂಬುವರು ರಮಾ ಗಂಡ ಮೋಹನ್ ರಾವ್ ಎಂಬ ಮಹಿಳೆ ಮೇಲೆ ಹಲ್ಲೆ ಮಾಡಿ ಕೊರಳಲ್ಲಿದ್ದ 40 ಗ್ರಾಂ ತೂಕದ ಮಾಂಗಲ್ಯ ಸರ, 50 ಗ್ರಾಂ ತೂಕದ ಇನ್ನೊಂದು ಸರ ಕಿತ್ತುಕೊಂಡು ಬೈಕ್ನಲ್ಲಿ ಪರಾರಿಯಾಗಿದ್ದರು. ನಂತರ ಬಾಹರ ಎಂಬಾರ ಎಂಬುವರು ಮಧ್ಯಪ್ರದೇಶದ ಭೂಪಾಲನ ಬಂಗಾರ ವ್ಯಾಪಾರಿ ದೀಪಕ ಜೈನ್ ಎಂಬಾತನಿಗೆ ಮಾರಾಟ ಮಾಡಿದ್ದರು.
ಈ ಸಂಬಂಧ ನಗರಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ನಡೆಸಿದ್ದರು. ನಗರಠಾಣೆ ಪಿಐ ಆಗಿದ್ದ ಸಂತೋಷ ಹಳ್ಳೂರು, ಪಿಎಸ್ಐ ಉಮೆರಾಬಾನು 40 ಗ್ರಾಂ ಬಂಗಾರ ಸರ ವಶಕ್ಕೆ ಪಡೆದು ಪ್ರರಕಣದಲ್ಲಿ ನಭಿಅಲಿ ಹಾಗೂ ಬಾಹರ ವಿರುದ್ಧ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಸಿಜೆಎಂ ನ್ಯಾಯಾಧೀಶ ಮಹಾಂತೇಶ ಎಸ್. ದರಗದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗಳನ್ನು ಅಪರಾಧಿಗಳೆಂದು ತೀರ್ಮಾನಿಸಿದರು.
ಇಬ್ಬರು ಅಪರಾಧಿಗಳಿಗೆ 3.6 ವಷ್ ಕಠಿಣ ಜೈಲು ಶಿಕ್ಷೆ ಮತ್ತು 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕ ವಸಂತ ವಾದ ಮಂಡಿಸಿದ್ದಾರೆ.