ಕೊಪ್ಪಳ: ನಗರದ ಗವಿಮಠ ಮುಂಭಾಗದ ನೀರಿನ ಮೇಲ್ತೊಟ್ಟಿ ಮೇಲೆ ಏರಿದ ವ್ಯಕ್ತಿಯೋರ್ವ ಶನಿವಾರ ಆತತ್ಮಹತ್ಯೆಗೆ ಯತ್ನಿಸಿ ಹೈಡ್ರಾಮಾ ಸೃಷ್ಟಿಸಿದ.
ಕುಕನೂರು ತಾಲೂಕಿನ ಆಡೂರು ಗ್ರಾಮದ ಪ್ರಕಾಶ ಎಂಬಾತ ಆತ್ಮಹತ್ಯೆಗೆ ಯತ್ನಿಸಿದಾತ. ಬೆಳಗ್ಗೆ ಟ್ಯಾಂಕರ್ ಏರಿದ ಈತ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಾನೆ. ನೋಡ ನೋಡುತ್ತಿದ್ದಂತೆ ಜನರು ಜಮಾಯಿಸಿದರು. ನಗರಠಾಣೆ ಪೊಲೀಸರು ಸ್ಥಳಕ್ಕಾಗಮಿಸಿದರು. ಬೇಡಿಕೆ ಅಥವಾ ಸಮಸ್ಯೆ ಇದ್ದಲ್ಲಿ ಪರಿಹರಿಸಲಾಗುವುದು ಆತ್ಮಹತ್ಯೆ ಮಾಡಿಕೊಳ್ಳಬೇಡ ಎಂದು ಮನವಿ ಮಾಡಿದರು. ಆದರೂ, ಪ್ರಕಾಶ ಒಪ್ಪಿಕೊಳ್ಳಲಿಲ್ಲ. ಕೆಲ ಹೊತ್ತು ಮನವೊಲಿಕೆ ಯತ್ನ ಮುಂದುವರೆದರೂ ಲ ನೀಡಲಿಲ್ಲ.
ನಂತರ ಖಾಸಗಿ ವಾಹಿನಿ ಪತ್ರಕರ್ತರಾದ ರಾಜು ಬಿ.ಆರ್., ಮಾರುತಿ ಕಟ್ಟಿಮನಿ ಸಾಯಲು ಕಾರಣವೇನೆಂದು ಅಭಿಪ್ರಾಯ ಕೇಳಲು ಟ್ಯಾಂಕ್ ಏರಿದರು. ಕಾರಣ ತಿಳಿಸು, ಅಧಿಕಾರಿಗಳು ನಿನ್ನ ಸಮಸ್ಯೆ ಪರಿಹರಿಸುತ್ತಾರೆ. ಆತ್ಮಹತ್ಯೆ ಮಾಡಿಕೊಳ್ಳಬೇಡವೆಂದು ಮನವಿ ಮಾಡಿದರು. ಈ ವೇಳೆ ತನ್ನನ್ನು ಹಿಡಿಯಲು ಬಂದಿದ್ದಾರೆಂದು ತಿಳಿದ ಪ್ರಕಾಶ ತಕ್ಷಣ ಅವರನ್ನು ತಳ್ಳಿ ಕೆಳಗೆ ಹಾರಿದ್ದಾನೆ. ಬಹಳ ಎತ್ತರದಿಂದ ಹಾರದ ಕಾರಣ ಪ್ರಾಣಕ್ಕೆ ಅಪಾಯವಾಗಿಲ್ಲ. ತಕ್ಷಣ ಆತನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ ಪೊಲೀಸರು ಚಿಕಿತ್ಸೆ ಕೊಡಿಸುತ್ತಿದ್ದಾರೆ. ಆತ್ಮಹತ್ಯೆಗೆ ಯಾಕೆ ಯತ್ನಿಸಿದನೆಂಬ ಬಗ್ಗೆ ಪ್ರಕಾಶ ಇನ್ನು ವಿವರ ನೀಡಿಲ್ಲ. ಚೇತರಿಸಿಕೊಂಡ ಬಳಿಕ ಮಾಹಿತಿ ಪಡೆಯುವುದಾಗಿ ಪೊಲೀಸರು ತಿಳಿಸಿದ್ದಾರೆ.