ಕೊಪ್ಪಳ: ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳು ಚುನಾವಣಾ ಖರ್ಚು&ವೆಚ್ಚಗಳನ್ನು ನಿಗದಿತ ನಮೂನೆಯಲ್ಲಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ನಲಿನ್ ಅತುಲ್ ತಿಳಿಸಿದರು.
ನಗರದ ಜಿಪಂ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಗುರುವಾರ ಅಭ್ಯರ್ಥಿಗಳು, ಚುನಾವಣಾ ಏಜೆಂಟ್ಗಳ ಜತೆ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದರು.
ಚುನಾವಣಾ ವೆಚ್ಚದ ಸಂಪೂರ್ಣ ವಿವರ ಆಯೋಗಕ್ಕೆ ಸಲ್ಲಿಸಬೇಕು. ನೀವು ಸಲ್ಲಿಸಿದ ಲೆಕ್ಕಪತ್ರಗಳನ್ನು ಚುನಾವಣಾ ವೆಚ್ಚ ವೀಕ್ಷಕರು ಪರಿಶೀಲಿಸಲಿದ್ದಾರೆ. ಚುನಾವಣಾ ವೆಚ್ಚ ನಿರ್ವಹಣೆಗಾಗಿ ಕೈಗೊಂಡ ಹೊಸ ಬ್ಯಾಂಕ್ ಖಾತೆ ಹಾಗೂ ರಿಜಿಸ್ಟರ್ ನಿರ್ವಹಣೆ ವಿವರ ಪರಿಶೀಲಿಸಿಕೊಳ್ಳಬೇಕು. ವರದಿಯಲ್ಲಿನ ಮಾಹಿತಿ ಸರಿಯಾಗಿ ನಮೂದಿಸಿ. ಅಭ್ಯರ್ಥಿಗಳು ನಿರ್ವಹಿಸುವ ರಿಜಿಸ್ಟರ್ ಹಾಗೂ ಚುನಾವಣಾ ಅಧಿಕಾರಿಗಳ ಬಳಿ ಇರುವ ರಿಜಿಸ್ಟರ್ನಲ್ಲಿ ವ್ಯತ್ಯಾಸವಿರಬಾರದು. ಲೆಕ್ಕ ಪತ್ರಗಳ ಪರಿಶೀಲನಾ ಸಭೆಗೆ ಅಭ್ಯರ್ಥಿಗಳು ಮತ್ತು ಚುನಾವಣಾ ವೆಚ್ಚಗಳಿಗಾಗಿ ನೇಮಿಸಿರುವ ಏಜೆಂಟರು ಖುದ್ದಾಗಿ ಹಾಜರಾಗಬೇಕು. ಯಾವುದೇ ಆಕ್ಷೇಪಣೆಗಳಿದ್ದಲ್ಲಿ ವೆಚ್ಚ ವೀಕ್ಷಕರ ಮುಂದೆ ಸಲ್ಲಿಸಲು ಅವಕಾಶವಿರಲಿದೆ ಎಂದರು.
ಚುನಾವಣಾ ಖರ್ಚು-ವೆಚ್ಚಗಳ ನೋಡಲ್ ಅಧಿಕಾರಿ ಪ್ರಶಾಂತ ಮಾತನಾಡಿ, ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳು ವೆಚ್ಚ ನಿರ್ವಹಣೆ ಮಾಡಬೇಕು. ಚುನಾವಣಾ ಫಲಿತಾಂಶದ ಬಳಿಕ 30 ದಿನಗಳೊಳಗಾಗಿ ವೆಚ್ಚದ ವಿವರ ಸಲ್ಲಿಸಬೇಕು. ಡೇ ಟು ಡೇ ರಿಜಿಸ್ಟರ್, ಕ್ಯಾಶ್ ರಿಜಿಸ್ಟರ್, ಬ್ಯಾಂಕ್ ರಿಜಿಸ್ಟರ್ ವಿವರ ಮತ್ತು ಇದರೊಂದಿಗೆ ಪಾರ್ಟ್ 1 ರಿಂದ 4 ಹಾಗೂ ಶೆಡ್ಯುಲ್ಡ್ 1 ರಿಂದ 12ರಲ್ಲಿ ಸಲ್ಲಿಸಬೇಕು. ಜೂ.30ರಂದು ಬೆಳಗ್ಗೆ 11 ಗಂಟೆಗೆ ಪರಿಶೀಲನಾ ಸಭೆ ನಡೆರಯಲಿದೆ. ಅಭ್ಯರ್ಥಿಗಳು ಚುನಾವಣಾ ವೆಚ್ಚ ವಿವರಗಳನ್ನು ಸಲ್ಲಿಸದಿದ್ದಲ್ಲಿ ಆಯೋಗ ಮೂರು ವರ್ಷ ಕಾಲ ಅನರ್ಹಗೊಳಿಸಲಿದೆ. ಕೊಪ್ಪಳದಲ್ಲಿ ಸ್ಪರ್ಧಿಸಿದ 19 ಅಭ್ಯರ್ಥಿಗಳು ವಿವರ ಸಲ್ಲಿಸಿ ಎಂದರು.
ತರಬೇತಿ ಕಾರ್ಯಕ್ರಮದ ನೋಡಲ್ ಅಧಿಕಾರಿ ಕೃಷ್ಣಮೂರ್ತಿ ದೇಸಾಯಿ, ಚುಣಾವಣಾ ಶಾಖೆಯ ತಹಸೀಲ್ದಾರ್ ರವಿ ವಸ್ತ್ರದ್ ಇತರರಿದ್ದರು.