ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಅಂಗವಿಕಲರಿಗೆ ತಮ್ಮ ದೈನಂದಿನ ಕೆಲಸ ಕಾರ್ಯಗಳಿಗೆ ಅನುಕೂಲವಾಗುವಂತೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ವಿವಿಧ ಸಲಕರಣೆ ನೀಡಲಾಗುತ್ತಿದ್ದು, ಅದರಂತೆ 2023-24ರ ಸಾಲಿನಲ್ಲಿ 8,768 ಉಚಿತ ಸಲಕರಣೆಗಳನ್ನು ವಿತರಿಸಲಾಗಿದೆ ಎಂದು ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್ ಎಸ್.ಎಸ್. ತಿಳಿಸಿದ್ದಾರೆ.
ಜನಮಂಗಲ ಕಾರ್ಯಕ್ರಮದಲಿ ಹಾಸಿಗೆಯಲ್ಲಿಯೇ ದೀರ್ಘಕಾಲ ಮಲಗಿದವರಿಗೆ ಹುಣ್ಣು(ಬೆಡ್ ಸೋರ್) ಆಗದಂತೆ ನೀರಹಾಸಿಗೆ(ವಾಟರ್ ಬೆಡ್), ನಡೆದಾಡಲು ಸಾಧ್ಯವಿಲ್ಲದವರಿಗೆ ಹೊರಗಡೆ ಓಡಾಡಲು ಗಾಲಿಕುರ್ಚಿ(ವೀಲ್ಚೇರ್) ಮತ್ತು ಹಾಸಿಗೆ ಹಿಡಿದ ರೋಗಿಗಳಿಗೆ ಸ್ನಾನಕ್ಕೆ, ಶೌಚಕ್ಕೆ ಹೋಗಲು ಗಾಲಿಕುರ್ಚಿ(ಕಮೋಡ್ ವೀಲ್ಚಯರ್), ಅಪಘಾತಗಳಾಗಿ ವಿಕಲಾಂಗರಾಗಿ ಓಡಾಡುತ್ತಿರುವವರಿಗೆ ಕಂಕುಳಲ್ಲಿ ಇಟ್ಟುಕೊಳ್ಳಲು ಅನುಕೂಲವಾಗುವಂತೆ ಊರುಗೋಲು(ಆಕ್ಸಿಲರಿ ಕ್ರಚಸ್), ವಯಸ್ಕರಾಗಿದ್ದು ಸ್ಟ್ರೋಕ್, ಪ್ಯಾರಾಲಿಸಿಸ್ ಮುಂತಾದ ರೋಗಗಳಿಗೆ ತುತ್ತಾಗಿರುವವರಿಗೆ ನಡೆದಾಡಲು ಅನುಕೂಲವಾಗುವಂತೆ ನಡುಗೋಲು (ಯು ಶೇಪ್ ವಾಕರ್), ನಡೆದಾಡಲು ಕಷ್ಟವಾದವರಿಗೆ ಅನುಕೂಲವಾಗುವಂತೆ ಏಕಕಾಲಿನ ಕೈಗೋಲು(ಸಿಂಗಲ್ ಲೆಗ್ ವಾಕಿಂಗ್ಸ್ಟಿಕ್) ಹಾಗೂ ಮೂರುಕಾಲಿನ ಕೈಗೋಲು(ತ್ರಿ ಲೆಗ್ ವಾಕಿಂಗ್ ಸ್ಟಿಕ್)ಮೊದಲಾದ ಸಲಕರಣೆಗಳನ್ನು ವಿತರಿಸಲಾಗುತ್ತಿದೆ.
ಈ ಎಲ್ಲ ಸಲಕರಣೆಗಳನ್ನು ಉಚಿತವಾಗಿ ನೀಡುತ್ತಿದ್ದು, ಅಂಗವಿಕಲರ ಮನೆಬಾಗಿಲಿಗೇ ತಲುಪಿಸಲಾಗುತ್ತಿದೆ. ಸಲಕರಣೆಗಳ ಬಳಕೆಯ ಕುರಿತಂತೆ ಸಂಸ್ಥೆಯ ಕಾರ್ಯಕರ್ತರು ಮಾಹಿತಿ ನೀಡುತ್ತಾರೆ. 2023-24ನೇ ಸಾಲಿನಲ್ಲಿ ಸುಮಾರು 8,768 ಸಲಕರಣೆಗಳನ್ನು ವಿತರಿಸಿದ್ದು, ಇದುವರೆಗೆ ಯೋಜನೆಯಿಂದ ಒಟ್ಟು 28,008 ಸಲಕರಣೆಗಳನ್ನು ಉಚಿತ ವಿತರಿಸಲಾಗಿದೆ. ಈ ಸಲಕರಣೆಗಳಿಂದಾಗಿ ಅಂಗವಿಕಲರಿಗೆ ಉಪಯುಕ್ತವಾಗಿ ಅವರಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದೆ ಎಂದು ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್ಎಸ್.ಎಸ್. ತಿಳಿಸಿದ್ದಾರೆ.