ಯಲಬುರ್ಗಾ: ಮೋಸ ವಂಚನೆಯಿಂದ ದೂರವಿದ್ದು, ಸತ್ಯ, ನಿಷ್ಠೆ ಹಾಗೂ ಧರ್ಮದ ಹಾದಿಯಲ್ಲಿ ಸಾಗುವುದ ಕಲಿಯಬೇಕು ಎಂದು ಚಿಂತಕ ಹರ್ಷಾನಂದ ಗುರೂಜಿ ಹೇಳಿದರು.
ಇದನ್ನೂ ಓದಿ: ಮಠಗಳಿಂದ ಧರ್ಮ ಜಾಗೃತಿ ಜತೆಗೆ ಪರಿಸರ ರಕ್ಷಣೆ
ತಾಲೂಕಿನ ದಮ್ಮೂರು ಶ್ರೀ ಭೀಮಾಂಬಿಕಾ ದೇವಿ ಮಠದಲ್ಲಿ ಗುರುವಾರ ಹಮ್ಮಿಕೊಂಡಿದ್ದ 362ನೇ ಶಿವಾನುಭವ ಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಗೋಷ್ಠಿಗಳು ಶಿವಶರಣರ ಕುರಿತ ಚಿಂತನೆ ಜತೆಗೆ ಸಮಾಜ ಸುಧಾರಣೆ, ಜನರಲ್ಲಿ ಅಧ್ಯಾತ್ಮದ ರಸದೌತಣ ಉಣಬಡಿಸುವ ಮಾರ್ಗವಾಗಿವೆ. ಧಾರ್ಮಿಕ ಸಮಾರಂಭ, ಮಕ್ಕಳ ಜನ್ಮದಿನ ಅಂಗವಾಗಿ ಗಿಡಮರ ಬೆಳೆಸುವ ಸಂಪ್ರದಾಯ ರೂಢಿಸಿಕೊಂಡಾಗ ಪರಿಸರ ರಕ್ಷಿಸಲು ಸಾಧ್ಯವಾಗುತ್ತದೆ ಎಂದರು.
ಭೀಮಾಂಬಿಕಾ ಶಿವಾನುಭವ ಸೇವಾ ಸಮಿತಿ ಅಧ್ಯಕ್ಷ ಶರಣಬಸಪ್ಪ ದಾನಕೈ, ಆಧ್ಯಾತ್ಮ ಚಿಂತನೆ, ಸತ್ಸಂಗಕ್ಕೆ ಹತ್ತಿರವಿದ್ದಾಗ ನಮ್ಮಲ್ಲಿರುವ ದೂರಾಸೆ ದೂರವಾಗಿ ನೆಮ್ಮದಿ ಸಿಗಲು ಸಾಧ್ಯ ಎಂದರು.
ಶ್ರೀಮಠದ ಒಡೆಯ ಹನುಮಂತಪ್ಪಜ್ಜ ಧರ್ಮರ, ಪ್ರಮುಖರಾದ ಶರಣಯ್ಯ ಹಿರೇಮಠ, ಬಸವರಾಜ ಬೂದಿಹಾಳ, ಕೊಟ್ರೇಶ ಶ್ರೀಗಿರಿ, ಹುಲಗಪ್ಪ ಬಂಡಿವಡ್ಡರ್, ಬಸಪ್ಪ ಡಗ್ಗಿ, ಈರಪ್ಪ ರ್ಯಾವಣಕಿ, ಶರಣಗೌಡ ದಮ್ಮೂರು, ರುದ್ರಪ್ಪ ಹರಿಜನ, ಭೀಮಣ್ಣ ಚಿಕ್ಕಗೌಡ್ರ, ಭೀಮಣ್ಣ ಜರಕುಂಟಿ, ಗಣೇಶ ನಿಡಗುಂದಿ, ನೀಲಕಂಠಪ್ಪ ರೊಡ್ಡರ, ಕಳಕಪ್ಪ ಹಡಪದ, ಯಮನೂರಪ್ಪ ಹಳ್ಳಿಕೇರಿ ಮತ್ತಿತರರಿದ್ದರು.