ದಾವಣಗೆರೆ : ಲಕ್ವ, ರಕ್ತದೊತ್ತಡ, ಮಧುಮೇಹ, ದೀರ್ಘಕಾಲದ ತಲೆನೋವು ಹಾಗೂ ಕ್ಯಾನ್ಸರ್ ರೋಗಗಳ ಬಗ್ಗೆ ಸಾರ್ವಜನಿಕರು ನಿರ್ಲಕ್ಷೃ ಮಾಡಬಾರದು ಎಂದು ಎಸ್.ಎಸ್. ವೈದ್ಯಕೀಯ ವಿಜ್ಞಾನ ಸಂಸ್ಥೆಯ ನ್ಯೂರೋ ಸರ್ಜನ್ ಡಾ. ಅವಿನಾಶ್ ಹೇಳಿದರು. ಇನ್ನರ್ ವ್ಹೀಲ್ ಸಹಯೋಗದೊಂದಿಗೆ ರೋಟರಿ ಸಂಸ್ಥೆ ದಾವಣಗೆರೆ ವಿದ್ಯಾನಗರ ವತಿಯಿಂದ ಸೋಮವಾರ, ರಾಷ್ಟ್ರೀಯ ವೈದ್ಯರ ದಿನಾಚರಣೆ ಪ್ರಯುಕ್ತ ಕ್ಲಬ್ನ ಸದಸ್ಯರು ಹಾಗೂ ಕುಟುಂಬದ ಸದಸ್ಯರಿಗೆ ಆಯೋಜಿಸಿದ್ದ ಉಚಿತ ವೈದ್ಯಕೀಯ ತಪಾಸಣೆ ಹಾಗೂ ವೈದ್ಯರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ರೋಗಗಳ ಬಗ್ಗೆ ಇರುವ ಮೂಢ ನಂಬಿಕೆಗಳನ್ನು ತೊರೆದು, ಸಮಯ ವ್ಯರ್ಥ ಮಾಡದೆ ಶೀಘ್ರವಾಗಿ ಚಿಕಿತ್ಸೆ ಪಡೆಯಬೇಕು. ಅದರಿಂದ ಮುಂದೆ ಎದುರಾಗಬಹುದಾದ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎಂದು ತಿಳಿಸಿದರು. ನರಗಳ ಸಂಬಂಧಿ ರೋಗಗಳಾದ, ವಿಶೇಷವಾಗಿ ಹಿರಿಯ ನಾಗರಿಕರಲ್ಲಿ ಕಂಡುಬರುವ ತಲೆನೋವು, ಕುತ್ತಿಗೆ ನೋವು, ಬೆನ್ನುನೋವು, ಮೂರ್ಛೆ ರೋಗ, ಬ್ರೈನ್ ಟ್ಯೂಮರ್, ಜೋಮು ಹಿಡಿಯುವ ಸಮಸ್ಯೆಯ ಪರಿಹಾರಕ್ಕೆ ಸಲಹೆ ನೀಡಿದರು. ತುಳಸಿ ರಾಮರಾಜು ಯೋಗ ಹಾಗೂ ನ್ಯಾಚುರೋಪತಿ ಸಂಸ್ಥೆಯ ವೈದ್ಯರಾದ ಡಾ. ವಿಂಧ್ಯಾ ಗಂಗಾಧರ ವರ್ಮಾ ಹಾಗೂ ಡಾ. ಗಂಗಾಧರ ವರ್ಮಾ ದಂಪತಿ, ಆರೋಗ್ಯ ಕಾಪಾಡಿಕೊಳ್ಳಲು ಯೋಗ ಹಾಗೂ ನ್ಯಾಚುರೋಪತಿ ಹೇಗೆ ನೆರವಾಗುತ್ತದೆ ಎನ್ನುವ ಕುರಿತು ಮಾತನಾಡಿದರು. ರೋಟರಿ ಅಧ್ಯಕ್ಷ ಎಸ್.ಎನ್. ಮಳವಳ್ಳಿ ಅಧ್ಯಕ್ಷತೆ ವಹಿಸಿದ್ದರು. ಇನ್ನರ್ವ್ಹೀಲ್ ಅಧ್ಯಕ್ಷೆ ಪ್ರೇಮಾ ಮಹೇಶ್ವರಪ್ಪ ಇದ್ದರು. ಯು.ಜಿ. ಶರಣಪ್ಪ ಪ್ರಾಸ್ತಾವಿಕ ನುಡಿಯೊಂದಿಗೆ ಅತಿಥಿಗಳನ್ನು ಪರಿಚಯಿಸಿದರು. ರೋಟರಿ ಕಾರ್ಯದರ್ಶಿ ಎಚ್. ಆಂಜನೇಯ ಮೂರ್ತಿ ಸ್ವಾಗತಿಸಿದರು. ಇನ್ನರ್ವ್ಹೀಲ್ ಕಾರ್ಯದರ್ಶಿ ಭಾಗ್ಯಾ ವೀರಣ್ಣ ವಂದಿಸಿದರು. ಎಂ.ಬಿ. ಚಂದ್ರಪ್ಪ ಕಾರ್ಯಕ್ರಮ ನಿರೂಪಿಸಿದರು.