ಭೋಪಾಲ್: ಕಠಿಣ ಪರಿಶ್ರಮ ಹಾಗೂ ಸಾಧಿಸುವ ಛಲ ಒಂದಿದ್ದರೆ ಏನನ್ನು ಬೇಕಾದರೂ ಜಯಿಸಬಹುದು ಎಂಬುದಕ್ಕೆ ನಮ್ಮ ಕಣ್ಣ ಮುಂದೆ ಹಲವು ನಿದರ್ಶನಗಳಿವೆ. ಈ ಮಾತನ್ನು ರೈತನ ಮಗಳು ನಿಜ ಮಾಡಿದ್ದು, ಅಂದು ಕಾಲೇಜಿನಲ್ಲಿ 11ನೇ ತರಗತಿ ಫೇಲ್ ಆಗಿ, ಅಪಮಾನಗಳನ್ನು ಅನುಭವಿಸಿದ್ದ ಯುವತಿ ಇಂದು ಡೆಪ್ಯೂಟಿ ಕಮಿಷನರ್ ಆಗುವ ಮೂಲಕ ಅದೆಷ್ಟೋ ಯುವ ಆಕಾಂಕ್ಷಿಗಳಿಗೆ ಸ್ಪೂರ್ತಿಯಾಗಿ ನಿಂತಿದ್ದಾರೆ. ಹಾಗಾದ್ರೆ, ಯಾರಿವರು? ಇವರು ಯಶಸ್ಸಿನ ಹಿಂದಿರುವ ಕಥೆಯೇನು? ಎಂಬುದರ ಮಾಹಿತಿ ಹೀಗಿದೆ ನೋಡಿ.
11ನೇ ತರಗತಿಯಲ್ಲಿ ಅನುತ್ತೀರ್ಣಳಾಗಿದ್ದ ರೈತನ ಮಗಳೊಬ್ಬಳು ಮಧ್ಯಪ್ರದೇಶ ಲೋಕಸೇವಾ ಆಯೋಗದ (MPSC) ಪರೀಕ್ಷೆಯಲ್ಲಿ ರಾಜ್ಯಕ್ಕೆ 6ನೇ ರ್ಯಾಂಕ್ ಪಡೆದು ಇದೀಗ ಉಪ ವಿಭಾಗಾಧಿಕಾರಿಯಾಗಿ ನೇಮಕಗೊಂಡಿದ್ದಾರೆ. ಇಂದೋರ್ ಮೂಲದ ಪ್ರಿಯಾಲ್ ಯಾದವ್ ಎಂಬ 27 ವರ್ಷದ ಯುವತಿಯ ಸ್ಫೂರ್ತಿದಾಯಕ ಕಥೆ ಇದಾಗಿದ್ದು, ಇವರು ಹಲವರಿಗೆ ಮಾದರಿಯಾಗಿದ್ದಾರೆ.
ತಮ್ಮ ಸಾಧನೆಯ ಕುರಿತು ಮಾತನಾಡಿರುವ ಪ್ರಿಯಾಲ್ 10ನೇ ತರಗತಿವರೆಗೆ ನಾನು ಶಾಲೆಯ ಟಾಪರ್ ಆಗಿದ್ದೆ. ಸಂಬಂಧಿಗಳ ಒತ್ತಡದಿಂದಾಗಿ 11ನೇ ತರಗತಿಗೆ ನಾನು PCMB ಆಯ್ಕೆ ಮಾಡಿಕೊಂಡೆ. ಈ ವಿಷಯದಲ್ಲಿ ನನಗೆ ಆಸಕ್ತಿ ಇರಲಿಲ್ಲ. ಆ ನಂತರ ನಾನು ಪರೀಕ್ಷೆಯಲ್ಲಿ ಅನುತ್ತೀರ್ಣಳಾದೆ. ನನ್ನ ಶೈಕ್ಷಣಿಕ ಜೀವನದಲ್ಲಿ ಇದೇ ನನ್ನ ಮೊದಲ ಮತ್ತು ಕೊನೆಯ ವೈಫಲ್ಯವಾಗಿತ್ತು.
![Priyal Yadav](https://cdn.vvimgs.com/wp-content/uploads/2024/06/Priyal-Yadav-1-1.webp)
ಇದನ್ನೂ ಓದಿ: ಯುಎಸ್ಎ ವಿರುದ್ಧದ ಪಂದ್ಯದಲ್ಲಿ ಪಾಕ್ ನರಿಬುದ್ದಿ ಬಯಲು; ತನಿಖೆಗೆ ಆಗ್ರಹ
ನಾನು ಚಿಕ್ಕವಯಸ್ಸಿನಲ್ಲೇ ಹೆಣ್ಣುಮಕ್ಕಳ ಮದುವೆ ಮಾಡುವ ಗ್ರಾಮೀಣ ಪ್ರದೇಶದಲ್ಲಿ ಬೆಳೆದಿದ್ದೇನೆ. ನನ್ನ ಪೋಷಕರು ನನಗೆ ಎಂದಿಗೂ ಮದುವೆಯ ಒತ್ತಡ ಹೇರದೆ ನನ್ನ ವಿದ್ಯಾಭ್ಯಾಸ ಮುಂದುವರಿಸಲು ಎಲ್ಲಾ ಅನುಕೂಲ ಮಾಡಿಕೊಟ್ಟರು. ಆ ನಂತರ ಛಲ ಬಿಡದೆ ಪರೀಕ್ಷೆಯನ್ನು ಪಾಸ್ ಮಾಡಿದೆ. 2019ರಲ್ಲಿ ಮೊದಲ ಬಾರಿಗೆ MPSC ಪರೀಕ್ಷೆ ಬರೆದಾಗ 19ನೇ ರ್ಯಾಂಕ್ ಪಡೆದು ಜಿಲ್ಲಾ ರಿಜಿಸ್ಟಾರ್ ಹುದ್ದೆಗೆ ಆಯ್ಕೆಯಾದೆ. ಆ ನಂತರ 2020ರಲ್ಲಿ ಮತ್ತೊಮ್ಮೆ ಲೋಕಸೇವಾ ಆಯೋಗ ನಡೆಸಿದ ಪರೀಕ್ಷೆಯಲ್ಲಿ 34ನೇ ರ್ಯಾಂಕ್ ಪಡೆದು ಸಹಕಾರ ಇಲಾಖೆಗೆ ನೇಮಕಗೊಂಡೆ. 2021ನೇ ಸಾಲಿನಲ್ಲಿ ನಡೆದ ಪರೀಕ್ಷೆಯಲ್ಲಿ 6ನೇ ರ್ಯಾಂಕ್ ಗಳಿಸಿದ್ದೇನೆ. ಈ ವಿಚಾರ ನನಗೆ ತುಂಬಾ ಖುಷಿ ನೀಡಿದೆ ಎಂದು ಪ್ರಿಯಾಲ್ ಸಂತಸ ಹಂಚಿಕೊಂಡಿದ್ದಾರೆ.
ಪ್ರಿಯಾಲ್ ಅವರ ತಂದೆ ರೈತರು. ರಾಜ್ಯದಲ್ಲಿ ಉಪವಿಭಾಗಾಧಿಕಾರಿಯಾಗಿ ಕೆಲಸ ಮುಂದುವರೆಸುತ್ತಲೇ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆ ಬರೆಯಲು ಸಿದ್ಧತೆ ನಡೆಸಲು ಮುಂದಾಗಿರುವ ಪ್ರಿಯಾಲ್ ಐಎಎಸ್ (ಭಾರತೀಯ ಆಡಳಿತ ಸೇವೆ) ಆಗಿ ಸೇವೆ ಸಲ್ಲಿಸುವ ಕನಸು ಹೊತ್ತಿರುವುದಾಗಿ ಹೇಳಿದ್ದಾರೆ.