ಮಂಗಳೂರು : ಅಧಿಕಾರ ಕಳೆದುಕೊಳ್ಳುವ ಸ್ಥಿತಿಯಲ್ಲಿದ್ದ ಆಗಿನ ಕಾಂಗ್ರೆಸ್ ಪ್ರಧಾನಿ ಇಂದಿರಾಗಾಂಧಿ ತುರ್ತು ಪರಿಸ್ಥಿತಿ ಘೋಷಿಸಿ, ವಿರೋಧ ಪಕ್ಷಗಳ ಸಾವಿರಾರು ನಾಯಕರನ್ನು ಜೈಲಿಗಟ್ಟಿದ್ದು ಪ್ರಜಾಪ್ರಭುತ್ವದ ಇತಿಹಾಸದಲ್ಲೇ ಅತ್ಯಂತ ಕರಾಳ ಅಧ್ಯಾಯ ಎಂದು ದ.ಕ.ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಹೇಳಿದ್ದಾರೆ.
ಸರ್ವಾಧಿಕಾರಿಯಾಗಿ ಪ್ರಧಾನಿ ಇಂದಿರಾಗಾಂಧಿ ಅವರು ನಡೆಸಿದ ಉಸಿರು ಗಟ್ಟಿಸುವ ಆಡಳಿತದ ವಾತಾವರಣದಿಂದ ಹೊರಬಂದ
ಬಾಬು ಜಗಜೀವನ್ ರಾಂ ಅವರು ಕಾಂಗ್ರೆಸ್ ಫಾರ್ ಡೆಮಾಕ್ರಸಿ ಪಕ್ಷವನ್ನು ಸ್ಥಾಪಿಸಿದ್ದರು. ಪ್ರಜಾಪ್ರಭುತ್ವದ ಕಗ್ಗೊಲೆಯನ್ನು ಕಾಂಗ್ರೆಸ್ ಅಂದೇ ಮಾಡಿತ್ತು ಎನ್ನುವುದಕ್ಕೆ ಇದೇ ದೊಡ್ಡ ನಿದರ್ಶನವಾಗಿದೆ. ಸದಾ ಬಣ್ಣ ಬದಲಿಸುವ ಕಾಂಗ್ರೆಸ್ ಈಗ ಸಂವಿಧಾನದ ಸಂರಕ್ಷಣೆ ಆಗಬೇಕಿದೆ ಎಂದು ಪ್ರದರ್ಶನ ಮಾಡುವುದು ಹಾಸ್ಯಾಸ್ಪದವಾಗಿದೆ ಎಂದು ಅವರು ತಿಳಿಸಿದ್ದಾರೆ.
ಕಾಂಗ್ರೆಸ್ ದೇಶದ ಮೇಲೆ ಹೇರಿದ ತುರ್ತು ಪರಿಸ್ಥಿತಿಯ ಕರಾಳ ಇತಿಹಾಸಕ್ಕೆ ಆಗಿನ ಸಂಘ ಪರಿವಾರದ ಹಲವು ನಾಯಕರ ಬಲಿದಾನವಾಗಿದೆ. ಅವರ ಬಲಿದಾನ ವ್ಯರ್ಥವಾಗದಂತೆ ಸಂವಿಧಾನದ ರಕ್ಷಣೆಗೆ ಬಿಜೆಪಿ ಕಟಿಬದ್ದವಾಗಿದೆ ಎಂದು ಸತೀಶ್ ಕುಂಪಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.