ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ವಾರಾಂತ್ಯದ ದಿನವಾದ ಭಾನುವಾರ ಭಾರಿ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಶನಿವಾರ ರಾತ್ರಿಯೇ ಕ್ಷೇತ್ರಕ್ಕೆ ಅತ್ಯಧಿಕ ಭಕ್ತರು ಇದ್ದರು. ಈ ಕಾರಣದಿಂದ ದೇಗುಲದ ವಸತಿ ಗೃಹ ಹಾಗೂ ಖಾಸಗಿ ವಸತಿ ಗೃಹಗಳು ತುಂಬಿದ್ದವು. ಭಾನುವಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭಾರಿ ಸಂಖ್ಯೆಯ ಭಕ್ತರು ಆಗಮಿಸಿದ್ದರು.
ಹೆಚ್ಚಿನ ಸಂಖ್ಯೆಯಲ್ಲಿ ನಡೆಯಿತು ಪೂಜೆ
ಆಶ್ಲೇಷ ಬಲಿ, ನಾಗಪ್ರತಿಷ್ಠಾಪನೆ, ತುಲಾಭಾರ, ಪಂಚಾಮೃತ ಮಹಾಭಿಷೇಕ, ಅಭಿಷೇಕ, ಮಹಾಪೂಜೆ, ಶೇಷ ಸೇವೆ, ನಾಗಪ್ರತಿಷ್ಠಾಪನೆ, ಕಾರ್ತಿಕ ಪೂಜೆ ಮೊದಲಾದ ಸೇವೆಗಳನ್ನು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ನೆರವೇರಿಸಿದರು.
ಭೋಜನ ಸ್ವೀಕರಿಸಿದ ಭಕ್ತಸ್ತೋಮ
ಷಣ್ಮುಖ ಪ್ರಸಾದ ಭೋಜನ ಶಾಲೆಯಲ್ಲಿ ಅತ್ಯಧಿಕ ಭಕ್ತರು ಭೋಜನ ಸ್ವೀಕರಿಸಿದರು. ಸಾಲಿನಲ್ಲಿ ಮುನ್ನಡೆದು ಸಹಸ್ರಾರು ಭಕ್ತರು ದೇವರ ಪ್ರಸಾದ ಭೋಜನ ಪಡೆದರು. ಭಕ್ತರ ಅನುಕೂಲಕ್ಕಾಗಿ ಆದಿಸುಬ್ರಹ್ಮಣ್ಯ ಭೋಜನ ಶಾಲೆಯಲ್ಲಿ ಬುಫೆ ಮಾದರಿಯಲ್ಲಿ ವಿಶೇಷ ಭೋಜನ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಶೃಂಗೇರಿ ಮಠ, ಗಣಪತಿ ದೇವಸ್ಥಾನದಲ್ಲಿಯೂ ಭಕ್ತರಿಗೆ ಪ್ರಸಾದ ಭೋಜನ ವಿತರಿಸಲಾಯಿತು. ಶ್ರೀಕ್ಷೇತ್ರ ಧರ್ಮಸ್ಥಳ ಹಾಗೂ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಗಳಲ್ಲಿಯೂ ಭಕ್ತರ ಸಂಖ್ಯೆ ಹೆಚ್ಚಿತ್ತು.