ಬೆಂಗಳೂರು: ಕರೊನಾ ಸೋಂಕಿನ ಭೀತಿ ವಿಧಾನಸೌಧಕ್ಕೂ ತಟ್ಟಿದೆ. ಒಂದೆಡೆ ಕರೊನಾ ಕುರಿತು ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರಿಂದ ಬಿಸಿ ಬಿಸಿ ಚರ್ಚೆ ನಿರಂತರವಾಗಿ ನಡೆಯುತ್ತಿದೆ. ಇನ್ನೊಂದೆಡೆ ಮಂಗಳವಾರ ರಾತ್ರಿ ವಿಧಾನಸೌಧಕ್ಕೆ ಸೋಂಕು ನಿರೋಧಕ ಸಿಂಪರಣೆ ಮಾಡಲಾಗಿದೆ. ತರುವಾಯ ಮತ್ತಷ್ಟು ಮುನ್ನೆಚ್ಚರಿಕಾ ಕ್ರಮ ಕೈಗೊಂಡಿರುವ ಸರ್ಕಾರ, ಬುಧವಾರ ವಿಧಾನಸೌಧಕ್ಕೆ ಬಂದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳನ್ನು ಕೂಡ ಪರೀಕ್ಷೆಗೆ ಒಳಪಡಿಸಲಾಯಿತು. ಸಿಎಂ ಯಡಿಯೂರಪ್ಪ ಸದನಕ್ಕೆ ಆಗಮಿಸುತ್ತಿದ್ದಂತೆ ಆರೋಗ್ಯ ಸಿಬ್ಬಂದಿ ಅವರನ್ನೂ ಕೂಡ ಥರ್ಮಲ್ ಸ್ಕ್ರೀನಿಂಗ್ ಉಪಕರಣದಿಂದ ಪರೀಕ್ಷಿಸಿದರು. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಶ್ರೀರಾಮುಲು, ವಿ.ಸೋಮಣ್ಣ ಸೇರಿ ಸದನಕ್ಕೆ ಆಗಮಿಸಿದ ಎಲ್ಲ ಸಚಿವರು, ಶಾಸಕರನ್ನು ಪರೀಕ್ಷೆಗೆ ಒಳಪಡಿಸಲಾಯಿತು. ಎಲ್ಲ ದ್ವಾರಗಳಲ್ಲಿ ಪ್ರತಿಯೊಬ್ಬರಿಗೂ ಸ್ಯಾನಿಟೈಸರ್ ಹನಿ ಹಾಕಲಾಯಿತು.
ಮಾಧ್ಯಮಗಳಿಗೆ ಅಭಿನಂದನೆ
ಕರೊನಾ ತಡೆಯುವ ನಿಟ್ಟಿನಲ್ಲಿ ಮಾಧ್ಯಮ ದವರು ತೋರಿಸುತ್ತಿರುವ ಕಾಳಜಿಗಾಗಿ ಮಾಧ್ಯಮಗಳಿಗೆ ಅಭಿನಂದನೆ ಸಲ್ಲಿಸುವುದಾಗಿ ಸಚಿವ ಡಾ.ಸುಧಾಕರ್ ತಿಳಿಸಿದರು. ಇದೇ ಸಂದರ್ಭ ಸರ್ಕಾರ ತೆಗೆದುಕೊಂಡು ಕ್ರಮಗಳಿಗೆ ಸ್ಪಂದಿಸುತ್ತಿರುವ ಸಾರ್ವಜನಿಕರಿಗೂ ಕೃತಜ್ಞತೆ ಸಲ್ಲಿಸಿದರು.
ಸಾಲ ವಸೂಲಾತಿ ಮುಂದೂಡಿ
ಕರೊನಾದಿಂದ ಎಲ್ಲ ಉದ್ಯಮ, ವ್ಯಾಪಾರ ವಹಿವಾಟುಗಳ ಮೇಲೆ ದುಷ್ಪರಿಣಾಮ ಬೀರಿರುವ ಹಿನ್ನೆಲೆ ಬ್ಯಾಂಕ್ ಸಾಲ ವಸೂಲಾತಿ ಮುಂದೂಡಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಆಗ್ರಹಿಸಿದ್ದಾರೆ. ವೆಂಟಿಲೇಟರ್ ಕೊರತೆ ನಿಭಾಯಿಸುವ ದೃಷ್ಟಿಯಿಂದ ಖಾಸಗಿ ಆಸ್ಪತ್ರೆಗಳಲ್ಲಿಯೂ ಶಂಕಿತರನ್ನು ದಾಖಲು ಮಾಡಿಕೊಳ್ಳುವಂತೆ ಸೂಚಿಸಬೇಕು. ಖಾಸಗಿ ಆಸ್ಪತ್ರೆಗೆ ದಾಖಲಾಗುವವರ ಚಿಕಿತ್ಸಾವೆಚ್ಚವನ್ನು ಸರ್ಕಾರ ವಹಿಸಬೇಕು ಎಂದು ಒತ್ತಾಯಿಸಿದರು.
ಭಾರತೀಯರ ನಿದ್ದೆ ಕಸಿಯುತ್ತಿರೋದು ಕರೊನಾ ವೈರಸ್ Covid19 ಅಲ್ಲ; ಮತ್ತೇನು?