ಉಪ್ಪಿನಂಗಡಿ: ಚಾಲಕನ ನಿಯಂತ್ರಣ ಕಳೆದುಕೊಂಡು ಕಂಟೈನರ್ ಲಾರಿ ಹೆದ್ದಾರಿ ಬದಿಯ ಚರಂಡಿಗೆ ಬಿದ್ದು, ಅದರ ಕಂಟೈನರ್ ಹೆದ್ದಾರಿಯಲ್ಲಿ ಅಡ್ಡವಾಗಿ ತಿರುಗಿ ನಿಂತಿದ್ದರಿಂದ ಕೆಲವು ಗಂಟೆ ಸಂಚಾರ ಅಸ್ತವ್ಯಸ್ತಗೊಂಡ ಘಟನೆ ಉಪ್ಪಿನಂಗಡಿ ಬಳಿಯ ಕೂಟೇಲು ಎಂಬಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ.
ಎರಡು ಗಂಟೆಗಳ ಕಾಲ ಸುಗಮ ಸಂಚಾರಕ್ಕೆ ತೊಡಕು
ಮಂಗಳೂರು ಕಡೆಯಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ಕಂಟೈನರ್ ಲಾರಿ ಬೆಳಗ್ಗೆ 6.30ರ ಸುಮಾರಿಗೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ವಿರುದ್ಧ ದಿಕ್ಕಿನಲ್ಲಿ ಸಾಗಿ ರಸ್ತೆ ಬದಿಯ ಚರಂಡಿಗೆ ಇಳಿಯಿತು. ಆಗ ಅದರ ಹಿಂದಿನ ಕಂಟೈನರ್ ರಸ್ತೆಗೆ ಅಡ್ಡಲಾಗಿ ತಿರುಗಿ ನಿಂತಿದ್ದು, ವಾಹನಗಳ ಸಂಚಾರಕ್ಕೆ ರಾಷ್ಟ್ರೀಯ ಹೆದ್ದಾರಿಯ ಒಂದು ಬದಿ ಸ್ವಲ್ಪ ಜಾಗವಷ್ಟೇ ಉಳಿದಿದ್ದರಿಂದ ಸುಮಾರು ಎರಡು ಗಂಟೆಗಳ ಕಾಲ ವಾಹನಗಳ ಸುಗಮ ಸಂಚಾರಕ್ಕೆ ತೊಡಕುಂಟಾಯಿತು.
ಹೆದ್ದಾರಿ ಬದಿಗೆ ಸರಿಸುವ ಕಾರ್ಯಾಚರಣೆ ಯಶಸ್ವಿ
![ಕಂಟೈನರ್ ಲಾರಿ ಅಪಘಾತ: ಉಪ್ಪಿನಂಗಡಿ ಬಳಿ ಹೆದ್ದಾರಿ ಸಂಚಾರ ಅಸ್ತವ್ಯಸ್ತ](https://cdn.vvimgs.com/wp-content/uploads/2024/06/web-upp-accident-2.webp)
ಉಪ್ಪಿನಂಗಡಿ ಪೊಲೀಸರು ಹಾಗೂ ಪುತ್ತೂರು ಸಂಚಾರಿ ಪೊಲೀಸರು ಸ್ಥಳಕ್ಕಾಗಮಿಸಿ, ಕ್ರೇನ್ ಮೂಲಕ ಕಂಟೈನರ್ನ್ನು ಲಾರಿಯ ಮುಂಭಾಗದಿಂದ ಬೇರ್ಪಡಿಸಿ ಹೆದ್ದಾರಿ ಬದಿಗೆ ಸರಿಸುವ ಮೂಲಕ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಕುಡಿಯುವ ನೀರಿನ ಪೈಪ್ಗೆ ಹಾನಿ
ಘಟನೆಯಿಂದ ಚರಂಡಿಯ ಬದಿಯಲ್ಲಿದ್ದ ಉಪ್ಪಿನಂಗಡಿ ಗ್ರಾ.ಪಂ.ನ ಕುಡಿಯುವ ನೀರಿನ ಪೈಪ್ ಒಡೆದು ಹೋಗಿವೆ. ಕಂಟೈನರ್ ಚಾಲಕ ಆಸೀಫ್ ಅಪಾಯವಿಲ್ಲದೆ ಪಾರಾಗಿದ್ದು, ಪುತ್ತೂರು ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.