ಬೆಂಗಳೂರು: ರೈತರು ತಮ್ಮ ಜಮೀನಿನಲ್ಲಿ ಮೂರು ವರ್ಷಕ್ಕೊಮ್ಮೆ ತಪ್ಪದೇ ಮಣ್ಣಿನ ಪರೀಕ್ಷೆ ಮಾಡಿಸಬೇಕು. ಇದರಿಂದ ಮಣ್ಣಿನಲ್ಲಿರುವ ಪೋಷಕಾಂಶ ಮಟ್ಟ ತಿಳಿದು ಬೆಳೆ ಉತ್ತಮ ಮಟ್ಟದ ಇಳುವರಿ ಪಡೆಯಬಹುದು ಎಂದು ಬೆಂಗಳೂರು ಕೃಷಿ ವಿವಿ ಡೀನ್ ಡಾ. ಎನ್.ಬಿ.ಪ್ರಕಾಶ್ ತಿಳಿಸಿದರು.
ಕೃಷಿ ವಿವಿ ಕ್ಯಾಂಪಸ್ ಜಿಕೆವಿಕೆಯಲ್ಲಿ ಸೋಮವಾರ ಆಯೋಜಿಸಿದ್ದ ‘ಮುಂಗಾರು ಹಂಗಾಮಿನಲ್ಲಿ ಪ್ರಮುಖ ಬೆಳೆಗಳ ಬೇಸಾಯ ಕ್ರಮಗಳ ತರಬೇತಿ ಕಾರ್ಯಕ್ರಮ’ ಉದ್ಘಾಟಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ರೈತರು ರಸಾಯನಿಕ ರಸಗೊಬ್ಬರವನ್ನು ಹೆಚ್ಚಾಗಿ ಬಳಸುತ್ತಿದ್ದಾರೆ. ಇದರಿಂದ ಮಣ್ಣಿನಲ್ಲಿರುವ ಸಾವಯವ ಅಂಶವು ಕುಂಠಿತಗೊಂಡು ಮಣ್ಣು ಹಾಗೂ ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವಂತಹ ಸ್ಥಿತಿ ನಿರ್ಮಾಣವಾಗಿದೆ. ರಸಗೊಬ್ಬರದ ಜತೆಗೆ ಸಾವಯವ ಗೊಬ್ಬರ ಕೂಡ ಬಳಸಿ ಸಮಗ್ರ ಪೋಷಕಾಂಶ ನಿರ್ವಹಣೆ ಕೈಗೊಳ್ಳುವುದರಿಂದ ರಸಗೊಬ್ಬರದ ಖರ್ಚನ್ನು ತುಸು ಕಡಿತಗೊಳಿಸಬಹುದು ಎಂದು ಅವರು ಸಲಹೆ ನೀಡಿದರು.
ವಿವಿಯ ವಿಸ್ತರಣಾ ನಿರ್ದೇಶಕ ಡಾ. ವಿ.ಎಲ್.ಮಧುಪ್ರಸಾದ್ ಮಾತನಾಡಿ, ಈ ಬಾರಿ ಮುಂಗಾರು ಮಳೆಯು ಉತ್ತಮವಾಗಿರಲಿದೆ. ಮುಂಗಾರಿಗೆ ಸೂಕ್ತವಾದಂತಹ ಬೆಳೆಗಳ ಕುರಿತು ರೈತರಿಗೆ ಸಕಾಲದಲ್ಲಿ ಮಾಹಿತಿ ನೀಡುವುದು ಕೃಷಿ ವಿವಿ, ಕೃಷಿ-ತೋಟಗಾರಿಕೆ ಇಲಾಖೆಗಳ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಕೋರಮಂಡಲ್ ಲಿಮಿಟೆಡ್ ತನ್ನ ಸಿಬ್ಬಂದಿಗೆ ಪ್ರಮುಖ ಬೆಳೆಗಳ ಅಧುನಿಕ ಬೇಸಾಯ ಕ್ರಮಗಳ ಬಗ್ಗೆ ವಿಜ್ಞಾನಿಗಳಿಂದ ಮಾಹಿತಿ ನೀಡುವ ತರಬೇತಿ ಸ್ವಾಗತಾರ್ಹ. ತರಬೇತಿಯಲ್ಲಿ ಪಡೆದ ಪರಿಣತಿಯನ್ನು ರೈತರಿಗೆ ಮಾರ್ಗದರ್ಶನ ಮಾಡಲು ಬಳಕೆಯಾಗಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಕೃಷಿ ವಿವಿಯ ಸಿಬ್ಬಂದಿ ತರಬೇತಿ ಘಟಕದ ಮುಖ್ಯಸ್ಥ ಡಾ. ಕೆ.ಶಿವರಾಮು, ಕೋರಮಾಂಡಲ್ ಲಿ.ನ ವಿಭಾಗೀಯ ಬೇಸಾಯ ತಜ್ಞ ಎಚ್.ವಿ.ರಮೇಶ್ ಕುಮಾರ್ ಹಾಜರಿದ್ದರು.