ನವದೆಹಲಿ: ವಿಶ್ವ ಕ್ರಿಕೆಟ್ನಲ್ಲಿ ಆಸ್ಟ್ರೇಲಿಯಾಗಿರುವಷ್ಟು ಗರ್ವ ಬೇರೆ ಯಾವ ದೇಶಕ್ಕೂ ಇಲ್ಲ ಎಂಬುದು ಕೆಲ ಕ್ರೀಡಾಭಿಮಾನಿಗಳ ಅಭಿಪ್ರಾಯ. 2023ರ ಏಕದಿನ ವಿಶ್ವಕಪ್ ಗೆದ್ದ ಬಳಿಕ ಮಿಚೆಲ್ ಮಾರ್ಷ್ ವಿಶ್ವಕಪ್ ಟ್ರೋಫಿಯ ಮೇಲೆ ತಮ್ಮ ಪಾದಗಳನ್ನು ಇರಿಸಿದ್ದು ಎಲ್ಲರಿಗೂ ಗೊತ್ತೇ ಇದೆ. ಇದು ವಿವಾದಕ್ಕೀಡಾಗಿ ಮಾರ್ಷ್ ವಿರುದ್ಧ ಭಾರಿ ಟೀಕೆ ವ್ಯಕ್ತವಾಗಿತ್ತು. ಇದೀಗ ಟೀಮ್ ಇಂಡಿಯಾ ಆ ಅಹಂಕಾರವನ್ನು ಹತ್ತಿಕ್ಕಿದೆ. ಟಿ20 ವಿಶ್ವಕಪ್ ಅಂಗವಾಗಿ ರೋಹಿತ್ ಪಡೆ ಸೂಪರ್ 8 ಪಂದ್ಯದಲ್ಲಿ ಕಾಂಗರೂ ತಂಡವನ್ನು 24 ರನ್ಗಳಿಂದ ಸೋಲಿಸುವ ಮೂಲಕ ತನ್ನ ಶಕ್ತಿ ಏನೆಂಬುದನ್ನು ತೋರಿಸಿದೆ. ಈ ಸೋಲಿನ ಬಳಿಕ ಆಸೀಸ್ ನಾಯಕ ಮಿಚೆಲ್ ಮಾರ್ಷ್ ಆಡಿದ ಮಾತುಗಳನ್ನು ಕೇಳಿದರೆ ಅಯ್ಯೋ ಪಾಪ ಎನಿಸುತ್ತದೆ. ಸೋಲಿನಿಂದ ಕಂಗೆಟ್ಟಿರುವ ಮಾರ್ಷ್ ಹೇಳಿದ್ದೇನು ಅನ್ನೋದನ್ನ ನಾವೀಗ ನೋಡೋಣ.
2023ರ ಏಕದಿನ ವಿಶ್ವಕಪ್ ಫೈನಲ್ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸೋಲಿಗೆ ಟೀಮ್ ಇಂಡಿಯಾ ನಿನ್ನೆ ಸೇಡು ತೀರಿಸಿಕೊಂಡಿತು. ಸೂಪರ್ 8 ಪಂದ್ಯದಲ್ಲಿ ಕಾಂಗರೂ ತಂಡವನ್ನು 24 ರನ್ಗಳಿಂದ ಸೋಲಿಸಿತು. ಇದರೊಂದಿಗೆ ಈ ಮೆಗಾಟೂರ್ನಿಯಿಂದ ಆಸೀಸ್ ಹೊರಬೀಳುವ ಹಂತಕ್ಕೆ ಬಂದಿದೆ. ಬಾಂಗ್ಲಾದೇಶ ವಿರುದ್ಧ ಅಫ್ಘಾನಿಸ್ತಾನ ಗೆದ್ದರೆ ಆಸೀಸ್ ತವರಿಗೆ ಹೋಗಬೇಕಾಗುತ್ತದೆ. ಒಂದು ವೇಳೆ ಮಳೆಯಿಂದಾಗಿ ಪಂದ್ಯ ರದ್ದಾದರೆ ಮೂರು ಅಂಕಗಳೊಂದಿಗೆ ಅಫ್ಘಾನಿಸ್ತಾನ ಸೆಮಿಸ್ ತಲುಪಲಿದೆ. ಇಲ್ಲಿ ಇನ್ನೊಂದು ಟ್ವಿಸ್ಟ್ ಇದೆ. ಅದೇನೆಂದರೆ, ಬಾಂಗ್ಲಾದೇಶ, ಅಫ್ಘಾನಿಸ್ತಾನವನ್ನು 61 ರನ್ಗಳಿಂದ ಸೋಲಿಸಿದರೆ ಅಥವಾ 13 ಓವರ್ಗಳಲ್ಲಿ ಗುರಿಯನ್ನು ಮುಟ್ಟಿದರೆ, ಬಾಂಗ್ಲಾದೇಶ ಸೆಮಿಸ್ ತಲುಪುತ್ತದೆ. ಇದರೊಂದಿಗೆ ಆಸೀಸ್ ಮತ್ತು ಅಫ್ಘಾನ್ ತವರಿಗೆ ಹೋಗಲಿದೆ.
ಈ ಹಿನ್ನೆಲೆಯಲ್ಲಿ ಸೆಮಿಸ್ ಕದನ ರೋಚಕವಾಗಿದೆ. ಭಾರತದ ವಿರುದ್ಧ ಸೋತ ನಂತರ, ಆಸ್ಟ್ರೇಲಿಯಾದ ಅಹಂ ತಗ್ಗಿದೆ. ಹಾಗಾಗಿಯೇ ತಂಡದ ನಾಯಕ ಮಿಚೆಲ್ ಮಾರ್ಷ್ ಯಾರೂ ನಿರೀಕ್ಷಿಸದಂತಹ ಕಾಮೆಂಟ್ಗಳನ್ನು ಮಾಡಿದ್ದಾರೆ. ಅಷ್ಟಕ್ಕೂ ಮಾರ್ಷ್ ಹೇಳಿದ್ದೇನು ಅನ್ನೋದನ್ನ ನೋಡುವುದಾದರೆ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ನಡುವಿನ ಪಂದ್ಯದಲ್ಲಿ ನಮ್ಮ ಬೆಂಬಲ ಏನಿದ್ದರೂ ಬಾಂಗ್ಲಾದೇಶಕ್ಕೆ. ಬಾಂಗ್ಲಾದೇಶ ಯಶಸ್ವಿಯಾಗಬೇಕೆಂದು ನಾವು ಬಯಸುತ್ತೇವೆ. ಕಮಾನ್ ಬಾಂಗ್ಲಾ ಎಂದು ಮಾರ್ಷ್ ಹೇಳಿದರು.
ಮಾರ್ಷ್ ಮಾತುಗಳನ್ನು ಕೇಳಿದ ನೆಟ್ಟಿಗರು ಇಂತಹ ಸ್ಥಿತಿ ಬರಬಾರದಿತ್ತು ಎಂದು ಕಮೆಂಟ್ ಮಾಡುತ್ತಿದ್ದಾರೆ. ಅಲ್ಲದೆ, ನಿಮ್ಮ ಮಾತುಗಳನ್ನು ಕೇಳಿ ಕನಿಕರ ಮೂಡುತ್ತಿದೆ ಎಂದು ವಿಶ್ವಕಪ್ ಟ್ರೋಫಿಯ ಮೇಲೆ ಕಾಲಿಟ್ಟಿರುವ ಫೋಟೋಗಳನ್ನು ಶೇರ್ ಮಾಡಿಕೊಂಡು ಮಾರ್ಷ್ ಅವರನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡುತ್ತಿದ್ದಾರೆ.
ಪಂದ್ಯದ ವಿಚಾರಕ್ಕೆ ಬರುವುದಾದರೆ, ಸೇಂಟ್ ಲೂಸಿಯಾದ ಗ್ರಾಸ್ ಐಲೆಟ್ನಲ್ಲಿರುವ ಡ್ಯಾರೆನ್ ಸಾಮಿ ರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 206 ರನ್ ಕಲೆಹಾಕಿತು. ಈ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ 20 ಓವರ್ಗಳಲ್ಲಿ ಅಂತಿಮವಾಗಿ 7 ವಿಕೆಟ್ ಕಳೆದುಕೊಂಡು 181 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ಇದೀಗ ಸೆಮಿಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ, ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. (ಏಜೆನ್ಸೀಸ್)
ಆಸಿಸ್ ವಿರುದ್ಧ ಶತಕದ ಅಂಚಿನಲ್ಲಿ ಔಟ್: ರೋಹಿತ್ ಆಡಿದ ಮಾತುಗಳನ್ನು ಕೇಳಿದ್ರೆ ಸೆಲ್ಯೂಟ್ ಹೊಡಿರೋ ಅಂತೀರಾ!
ನಿಜ ಹೇಳ್ತೀನಿ 2 ಬಾರಿ ಅನುಷ್ಕಾ ಶರ್ಮಾರನ್ನು… ಮದ್ವೆ ಬಳಿಕ ಸ್ಫೋಟಕ ಸತ್ಯ ಬಿಚ್ಚಿಟ್ಟ ವಿಜಯ್ ಮಲ್ಯ ಪುತ್ರ!