ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿದ್ದಾರೆ. ಇತ್ತ ನೆಚ್ಚಿನ ನಟನ ಮೇಲೆ ಇರುವ ಅಭಿಮಾನಿದಿಂದ ದಚ್ಚು ಫ್ಯಾನ್ಸ್ ದರ್ಶನ್ಗೆ ನೀಡಲಾದ ವಿಚಾರಣಾಧೀನ ಕೈದಿ ನಂಬರನ್ನು ವಾಹನ ಹಾಗೂ ಟ್ಯಾಟು ಹಾಕಿಸಿಕೊಳ್ಳುವ ಮೂಲಕವಾಗಿ ಅಪಾರ ಅಭಿಮಾನ ಮರೆಯುತ್ತಿದ್ದಾರೆ. ಈ ಬೆನ್ನಲ್ಲೇ ಅಂದ ಅಭಿಮಾನ ಮೆರೆದ ವ್ಯಕ್ತಿಯೊರ್ವನಿಗೆ ಮಕ್ಕಳ ಹಕ್ಕುಗಳ ಆಯೋಗ ನೋಟಿಸ್ ನೀಡಲು ಸಿದ್ಧತೆ ನಡೆಸಿದೆ.
ದರ್ಶನ್ ಅವರಿಗೆ ವಿಚಾರಣಾಧೀನ ಕೈದಿ ನಂಬರ್ 6106 ಕೊಟ್ಟಿದ್ದಾರೆ. ಆದರೆ, ಇದೀಗ ತನ್ನ ಒಂದು ವರ್ಷದ ಮಗುವಿಗೆ ಕೈದಿ ಬಟ್ಟೆ ಹಾಕಿಸಿ ಫೋಟೋ ಶೂಟ್ ಮಾಡಿಸಿದ್ದ ಅಭಿಮಾನಿಗೆ ನೋಟಿಸ್ ನೀಡಲು ಮಕ್ಕಳ ಹಕ್ಕುಗಳ ಆಯೋಗ ಸಿದ್ಧತೆ ನಡೆಸಿದೆ.
ಒಂದು ವರ್ಷದ ಮಗುವಿಗೆ ಬಿಳಿ ಬಟ್ಟೆ ಹಾಕಿಸಿ. ಖೈದಿ ನಂಬರ್ 6106 ನಂಬರ್ ಹಾಕಿ, ಕೈ ಕೋಳ ಮಾದರಿ, ಖೈದಿಗಳ ರೀತಿ ಬಿಳಿ ಬಟ್ಟೆ ಹಾಕಿ ಫೋಟೊಶೂಟ್ ಮಾಡಿಸಿದ್ದಾರೆ. ದರ್ಶನ್ ಮೇಲಿನ ಅಭಿಮಾನದಿಂದಾಗಿ ಅವರು ಮಗುವಿಗೆ ಜೈಲು ಬಟ್ಟೆ ಹಾಕಿಸಿ ಜೈ ಡಿ ಬಾಸ್ ಎಂದು ಬರೆದು ಫೋಟೋಶೂಟ್ ಮಾಡಿಸಿದ್ದಾರೆ. ಸದ್ಯ ಈ ಫೋಟೋಶೂಟ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಒಂದಿಷ್ಟು ಮಂದಿ ದರ್ಶನ ಅವರ ಮೇಲಿರುವ ಅವರ ಅಭಿಮಾನಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದರೆ ಮತ್ತೆ ಕೆಲವರು ಇದು ಹುಚ್ಚು ಅಭಿಮಾನ ಎಂದಿದ್ದಾರೆ.
ಮಗುವಿಗೆ ಕೈದಿ ಬಟ್ಟೆ ಹಾಕಿಸಿ ಪೋಟೋಶೂಟ್ ಮಾಡಿದ್ದ ಪೋಷಕರಿಗೆ ಮಕ್ಕಳ ಹಕ್ಕುಗಳ ಆಯೋಗ ಬಿಗ್ ಶಾಕ್ ನೀಡಿದ್ದು, ಪೋಷಕರಿಗೆ ನೋಟಿಸ್ ನೀಡಲು ಮುಂದಾಗಿದೆ. ಈಗಾಗಲೇ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡಿರುವ ಆಯೋಗವು ಮಗುವಿಗೆ ಕೈದಿ ಬಟ್ಟೆ ಹಾಕಿರುವುದು ತಪ್ಪು ಹೀಗಾಗಿ ನೋಟಿಸ್ ನೀಡಲು ಸಿದ್ಧತೆ ನಡೆಸಿದೆ ಎನ್ನಲಾಗಿದೆ.
ಮಕ್ಕಳಿಗೆ ಕಷ್ಣನ ವೇಷ, ಸ್ವಾಮಿ ವಿವೇಕಾನಂದರು ವೇಷ, ಅಂಬೇಡ್ಕರ್ ರಂತಹ ಗಣ್ಯ ವ್ಯಕ್ತಿಗಳ ರೀತಿಯ ಪೋಟೋ ಶೂಟ್ ಮಾಡಿಸುವುದು ಟ್ರೆಂಡ್ ಆಗಿತ್ತು.ಆದರೆ ಈಗ ಬೆಳೆಯುವ ಮಗುವಿಗೆ ಖೈದಿ ರೀತಿ ಉಡುಪು ತೊಡಿಸಿ ಪೋಟೋ ಶೂಟ್ ಮಾಡಿಸಿರೋದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.