ಕೊಳ್ಳೇಗಾಲ: ಮದ್ಯ ವ್ಯಸನದಿಂದ ದೂರ ಉಳಿಯುವ ಮೂಲಕ ಓದಿ ವಿದ್ಯಾವಂತರಾಗಿ ದೇಶದ ಉತ್ತಮ ಪ್ರಜೆಗಳಾಗಬೇಕು ಎಂದು ಯಳಂದೂರು ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಶ್ರೀಕಾಂತ್ ಮಕ್ಕಳಿಗೆ ಸಲಹೆ ನೀಡಿದರು.
ತಾಲೂಕಿನ ಸೂರಾಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ಮಾದಕ ದ್ರವ್ಯ ವ್ಯಸನ ವಿರೋಧಿ ದಿನ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಾದಕ ವ್ಯಸನದಿಂದ ವಿದ್ಯಾರ್ಥಿಗಳು ದೂರವಿದ್ದರೆ ಮಾದರಿ ಪ್ರಜೆಗಳಾಗಬಹುದು. ಬೀಡಿ, ಸಿಗರೇಟು ಸೇವನೆ ಪ್ರತಿಷ್ಠೆ ವಿಚಾರವಲ್ಲ ಎಂದರು.
ಮಾದಕ ದ್ರವ್ಯಕ್ಕೆ ದಾಸರಾಗುವುದರಿಂದ ಅನಾರೋಗ್ಯದೊಂದಿಗೆ ಬಡತನವೂ ಬರಲಿದೆ. ಜತೆಗೆ ಕಳ್ಳತನಕ್ಕೂ ದಾರಿಮಾಡಿಕೊಡಲಿದೆ. ಹೀಗಾಗಿ ವಿದ್ಯಾರ್ಥಿಗಳು ಮಾದಕ ವಸ್ತುಗಳ ಸೇವನೆಯಿಂದ ದೂರವಿದ್ದು, ಇತರರನ್ನು ಜಾಗೃತರನ್ನಾಗಿಸಬೇಕು ಎಂದರು.
ಅಗರ-ಮಾಂಬಳ್ಳಿ ಠಾಣೆಯ ಸಬ್ ಇನ್ಸ್ಪೆಕ್ಟರ್ ಕರಿಬಸಪ್ಪ ಮಾತನಾಡಿ, ಮಾದಕ ವಸ್ತುಗಳ ಸೇವನೆ ಮನುಷ್ಯನ ಅಂಗಾಂಗಗಳನ್ನು ಒಂದೊಂದಾಗಿ ಕಳೆದುಕೊಳ್ಳುವಂತೆ ಮಾಡುತ್ತದೆ. ಕಣ್ಣಿನ ದೃಷ್ಟಿ, ಶ್ವಾಸಕೋಶದ ಕ್ಯಾನ್ಸರ್, ಹೃದಯಾಘಾತ, ರಕ್ತದೊತ್ತಡದಂತಹ ಕಾಯಿಲೆಗೆ ದಾರಿ ಮಾಡಲಿದೆ. ಹಾಗಾಗಿ ಮುನ್ನೆಚ್ಚರಿಕೆಯಿಂದ ಆರೋಗ್ಯಕರ ಜೀವನ ಶೈಲಿಯನ್ನು ರೂಢಿಸಿಕೊಳ್ಳುವ ನಿಟ್ಟಿನಲ್ಲಿ ಎಲ್ಲರೂ ಮುಂದಾಗಬೇಕು ಎಂದು ಸಲಹೆ ನೀಡಿದರು.
ಪ್ರಭಾರ ಮುಖ್ಯ ಶಿಕ್ಷಕ ಗೋವಿಂದರಾಜು, ದೈಹಿಕ ಶಿಕ್ಷಣ ಶಿಕ್ಷಕ ಪಳನಿಸ್ವಾಮಿ ಜಾಗೇರಿ, ಶಿಕ್ಷಕರಾದ ಪಿ.ಲಿಂಗರಾಜ್, ದೇವಿಕಾ ಇ ತರರಿದ್ದರು.