ಚಿಕ್ಕೋಡಿ: ಮನುಷ್ಯನ ಜೀವನ ಹೇಗೆ ಇದ್ದರೂ ಸಾವಿನಲ್ಲಾದರೂ ನೆಮ್ಮದಿ ಇರಬೇಕು ಎನ್ನುತ್ತಾರೆ. ಆದರೆ ಈ ಮಕ್ಕಳು ತಮ್ಮ ತಂದೆಗೆ ಕೊನೆಗಾಲದಲ್ಲಿ ನೀಡಿದ್ದು ಮಾತ್ರ ಅಕ್ಷರಶಃ ನರಕ. ಘಟನೆ ನಮ್ಮದೇ ಕರ್ನಾಟಕದ ಚಿಕ್ಕೋಡಿಯಲ್ಲಿ ನಡೆದಿರುವುದು ಖೇದಕರ ವಿಚಾರ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನಾಗರಮುನ್ನೋಳಿ ಗ್ರಾಮದಲ್ಲಿ ಮೂಲಚಂದ ಶರ್ಮಾ (72) ಎನ್ನುವ ವೃದ್ಧ ತನ್ನ ಅಂತ್ಯಕಾಲದಲ್ಲಿ ಮಕ್ಕಳನ್ನು ಕಾಣದೇ ಮೃತಪಟ್ಟ ದುರ್ದೈವಿ.
ಇವರು ಮೂಲತಃ ಮಹಾರಾಷ್ಟ್ರದ ಪುಣೆ ನಗರ ನಿವಾಸಿಯಾಗಿದ್ದು ರಾಷ್ಟ್ರೀಕೃತ ಬ್ಯಾಂಕ್ವೊಂದರ ನಿವೃತ್ತ ಮಾನ್ಯೇಜರ್ ಆಗಿದ್ದರು. ಕಳೆದ ಕೆಲ ಸಮಯದಿಂದ ಪಾರ್ಶ್ವವಾಯು ರೋಗದಿಂದ ಬಳಲುತ್ತಿದ್ದ ಮೂಲಚಂದ್ರ ಅವರು 45 ದಿನಗಳ ಹಿಂದೆ ಚಿಕಿತ್ಸೆಗೆಂದು ನಾಗರಮುನ್ನೋಳಿ ಗ್ರಾಮದ ಕುಂಬಾರ ಆಸ್ಪತ್ರೆಗೆ ದಾಖಲಾಗಿದ್ದರು.
ಇದನ್ನೂ ಓದಿ: ನಾಯಿಯ ಮಾಲೀಕನೆಂದು ಭಾವಿಸಿ ವೃದ್ಧನಿಗೆ ಚಾಕು ಇರಿತ
ಆರೈಕೆಗೆಂದು ಬಂದಿದ್ದ ಮನೆ ಕೆಲಸಗಾರ, ಸಂಬಳ ಪಾವತಿ ಆಗಿಲ್ಲವೆಂದು ಅವರನ್ನು ಲಾಡ್ಜ್ ಒಂದರಲ್ಲಿ ಬಿಟ್ಟು ಹೋಗಿದ್ದ. ನಂತರ ಲಾಡ್ಜ್ ಮಾಲೀಕರು ಈ ಅಸಹಾಯಕ ವೃದ್ಧ ವ್ಯಕ್ತಿಯ ಬಗ್ಗೆ ಚಿಕ್ಕೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಅವರನ್ನು ಚಿಕ್ಕೋಡಿ ತಾಲೂಕು ಆಸ್ಪತ್ರೆಗೆ ದಾಖಲು ಮಾಡಿದ್ದರು. ಈ ಸಂದರ್ಭದಲ್ಲಿ ಮೂಲಚಂದ್ರ ಅವರು, “ನಾನು ಬಡವ ಅಲ್ಲ, ನನ್ನ ಮಕ್ಕಳು ವಿದೇಶದಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ” ಎಂದು ಮಾಹಿತಿ ನೀಡಿದ್ದರು.
ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಪೊಲೀಸರು ಅವರನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದರು. ಈ ಸಂದರ್ಭದಲ್ಲಿ ವೃದ್ಧ ಮೂಲಚಂದ್ರ, ಜಿಲ್ಲಾಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದರು. ಮೃತ ಮೂಲಚಂದ್ರರ ಬಗ್ಗೆ ಮಕ್ಕಳಿಗೆ ವಾಟ್ಸ್ಅಪ್ ಕರೆ ಮಾಡಿ ಚಿಕ್ಕೋಡಿ ಪೊಲೀಸರು ಮಾಹಿತಿ ನೀಡಿದ್ದರು. ಆಗಲೇ ಮಕ್ಕಳ ನಿಜ ಸ್ವರೂಪ ಬಯಲಿಗೆ ಬಂದದ್ದು.
ಇದನ್ನೂ ಓದಿ: ವೆಚ್ಚ ಕಡಿತದಿಂದ ಸಕ್ಕರೆ ಕಾರ್ಖಾನೆ ಅಭಿವೃದ್ಧಿ
ವಾಟ್ಸ್ಅಪ್ ಕರೆಯಲ್ಲಿ ಅವರು “ಅವರು ಅವಾಗ ನಮ್ಮ ತಂದೆಯಾಗಿದ್ದರು. ಈಗ ಅಲ್ಲ. ನಿಮಗೆ ಚಿಕಿತ್ಸೆ ಕೊಡಿಸಿ ಎಂದು ನಾವು ಹೇಳಿಲ್ಲ. ಅಂತ್ಯಕ್ರಿಯೆ ಮಾಡೋಕೆ ಆದರೆ ಮಾಡಿ. ಇಲ್ಲವಾದರೇ ಹೆಣ ಬಿಸಾಕಿ” ಎಂದು ಹೃದಯಹೀನ ಮಗಳು ಹೇಳಿದ್ದರು. ಕಡೆಗೆ ನಾಗರಮುನ್ನೋಳಿ ಗ್ರಾಮದ ಪಿಡಿಒ, ಗ್ರಾ.ಪಂ. ಅಧ್ಯಕ್ಷರ ಸಹಾಯದೊಂದಿಗೆ ಮೂಲಚಂದ್ರ ಅವರ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಅಂತೂ ಈ ಮಗಳು, ಸಾಕಿದ ಅಪ್ಪನನ್ನೆ ಅನಾಥ ಮಾಡಿದ್ದಾಳೆ ಎನ್ನುವುದು ಸತ್ಯ.