ನವದೆಹಲಿ: ದೆಹಲಿಯ ಟರ್ಮಿನಲ್ ಒನ್ ವಿಮಾನ ನಿಲ್ದಾಣದ ಮೇಲ್ಛಾವಣಿ ಕುಸಿದ ಘಟನೆಗೆ ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮಮೋಹನ್ ನಾಯ್ಡು ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ಅಂದು ರೋಹಿತ್ ಮಾಡಿದ ಪ್ಲಾನ್ ಯಾರಿಗೂ ಅರ್ಥವಾಗಲಿಲ್ಲ ಇಂದು ಅದೇ ಪ್ಲಾನ್ ಫೈನಲ್ ಎಂಟ್ರಿಗೆ ಕಾರಣವಾಯ್ತು!
ಟರ್ಮಿನಲ್ ಒಂದರಲ್ಲಿ ಮೇಲ್ಛಾವಣಿ ಕುಸಿತದ ಸ್ಥಳಕ್ಕೆ ತೆರಳಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಗಾಯಗೊಂಡ ಎಲ್ಲ ಪ್ರಯಾಣಿಕರಿಗೆ ತಕ್ಷಣವೇ ನೆರವು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ರಾಮಮೋಹನ್ ನಾಯ್ಡು ತಿಳಿಸಿದರು.
ಇನ್ನು ಕುಸಿದ ಮೇಲ್ಛಾವಣಿ ಪ್ರಧಾನಿ ಮೋದಿಯವರ ಕಾಲದಲ್ಲಿ ನಿರ್ಮಾಣವಾಗಿರುವುದಲ್ಲ. ಇದು 2009ರಲ್ಲಿ ನಿರ್ಮಾಣಗೊಂಡಿದ್ದು, ಮೋದಿಯವರ ಆಡಳಿತಾವಧಿಯಲ್ಲಿ ನಿರ್ಮಿಸಿದ ಕಟ್ಟಡ ಇದರ ಒಳಭಾಗದಲ್ಲಿದೆ ಎಂದು ಸ್ಪಷ್ಟಪಡಿಸಿದರು.
ಘಟನೆಯಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ. ಮೃತರ ಕುಟುಂಬಕ್ಕೆ 20 ಲಕ್ಷ ರೂಪಾಯಿ ನೆರವು ನೀಡುವುದಾಗಿ ರಾಮಮೋಹನ್ ನಾಯ್ಡು ಘೋಷಿಸಿದ್ದಾರೆ.
ದೆಹಲಿಯಲ್ಲಿ ಗುರುವಾರ ರಾತ್ರಿಯಿಂದ ಧಾರಾಕಾರ ಮಳೆಯಾಗುತ್ತಿದೆ. ವಿಮಾನ ನಿಲ್ದಾಣದ ಟರ್ಮಿನಲ್-1 ರ ಮೇಲ್ಛಾವಣಿ ಶುಕ್ರವಾರ ಮುಂಜಾನೆ 5 ಗಂಟೆ ಸುಮಾರಿಗೆ ಪ್ರಯಾಣಿಕರ ನಿರ್ಗಮನ ಪ್ರದೇಶದಲ್ಲಿ ಕುಸಿದಿದೆ ಎಂದು ವಿಮಾನ ನಿಲ್ದಾಣದ ಮೂಲಗಳು ಬಹಿರಂಗಪಡಿಸಿವೆ.
ಘಟನೆ ನಡೆದ ತಕ್ಷಣ ತುರ್ತು ತಂಡಗಳು ಕ್ರಮ ಕೈಗೊಂಡು ಹಲವರಿಗೆ ಗಾಯಗಳಾಗಿದ್ದು, ವೈದ್ಯಕೀಯ ನೆರವು ನೀಡಲಾಗಿದೆ ಎಂದರು. ಟರ್ಮಿನಲ್ 1 ರಿಂದ ವಿಮಾನ ಸೇವೆಗಳನ್ನು ತಕ್ಷಣವೇ ರದ್ದುಗೊಳಿಸಲಾಗಿದೆ ಎಂದು ಹೇಳಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲಾ ಚೆಕ್-ಇನ್ ಕೌಂಟರ್ಗಳನ್ನು ಮುಚ್ಚಲಾಗಿದೆ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.
ರಾಷ್ಟ್ರರಾಜಧಾನಿಯಲ್ಲಿ ಇನ್ನು ಶುಕ್ರವಾರ ಬೆಳಗ್ಗೆ ಸಹ ಎಡೆಬಿಡದೆ ಮಳೆ ಸುರಿಯುತ್ತಿದೆ. ತಗ್ಗು ಪ್ರದೇಶಗಳು ಜಲಾವೃತವಾಗಿವೆ. ಹಲವೆಡೆ ಸಂಚಾರ ಅಸ್ತವ್ಯಸ್ತವಾಗಿತ್ತು. 2 ಗಂಟೆ ಕಾಲ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ದೆಹಲಿ, ಗುರುಗ್ರಾಮ, ನೋಯ್ಡಾ, ಗಾಜಿಯಾಬಾದ್ನಲ್ಲಿ ಭಾರಿ ಮಳೆಯಾಗುತ್ತಿದೆ. ಹಲವೆಡೆ ಕಾರು, ಬೈಕ್ಗಳು ನೀರಿನಲ್ಲಿ ಮುಳುಗಿವೆ.