ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಕೆಂಪೇಗೌಡ ಒಕ್ಕಲಿಗರ ನಾಯಕ ಮಾತ್ರವಲ್ಲ, ಅವರು ಎಲ್ಲ ಸಮಾಜದ ನಾಯಕರೂ ಹೌದು. ಅವರು ವ್ಯಕ್ತಿಯಲ್ಲ ವಿಶೇಷ ಶಕ್ತಿ, ಪ್ರತಿ ಸಮುದಾಯವನ್ನು ಗುರುತಿಸಿ ಕೋಟೆ, ಪೇಟೆ, ಕೆರೆಗಳನ್ನು ನಿರ್ಮಿಸಿ ಬೆಂಗಳೂರನ್ನು ಉದ್ಯಾನ ನಗರಿಯಾಗಿ ರೂಪಿಸಿದ ಸಾಧನೆಗಳಿಂದ ಅವರ ಹೆಸರು ಅಜರಾಮರವಾಗಿದೆ ಎಂದು ತಾಲೂಕು ಒಕ್ಕಲಿಗ ಗೌಡರ ಸಂಘದ ಅಧ್ಯಕ್ಷ ಕೆ.ಬಾಲಕೃಷ್ಣ ಗೌಡ ಹೇಳಿದರು.
ಗುರುವಾರ ರಾಷ್ಟ್ರೀಯ ಹಬ್ಬಗಳ ಹಾಗೂ ಮಹಾಪುರುಷರ ಜಯಂತಿ ಆಚರಣೆ ಸಮಿತಿ ವತಿಯಿಂದ ಲಾಯಿಲದಲ್ಲಿ ನಡೆದ ಕೆಂಪೇಗೌಡ ಜಯಂತಿ ಉದ್ಘಾಟಿಸಿ ಮಾತನಾಡಿದರು.
ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ತಾಲೂಕು ಅಧ್ಯಕ್ಷ ಕುಶಾಲಪ್ಪ ಗೌಡ ಪಿ.ಮಾತನಾಡಿ, ಕೆಂಪೇಗೌಡರ ಪ್ರೇರಣೆ ಎಲ್ಲರಿಗೂ ಮಾದರಿ ಎಂದರು.
ಪ್ರಧಾನ ಭಾಷಣಕಾರ ವಾಣಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಯದುಪತಿ ಗೌಡ ಮಾತನಾಡಿ, ಕೆಂಪೇಗೌಡರ ಆಧುನಿಕ ಕಲ್ಪನೆಯ ಬೆಂಗಳೂರು ಲಕ್ಷಾಂತರ ಜನರಿಗೆ ಆಶ್ರಯ ನೀಡುತ್ತಿದೆ. ಐದು ಶತಮಾನಗಳ ಹಿಂದೆ ಊಹೆಗೂ ನಿಲುಕದಂತ ಯೋಜನೆ ರೂಪಿಸಿದ ಅವರು ಇತಿಹಾಸವನ್ನು ನಿರ್ಮಾಣ ಮಾಡಿದ್ದಾರೆ ಅಂದಿನ ತಂತ್ರಜ್ಞಾನ ಇಲ್ಲದ ಕಾಲಕ್ಕೆ ಅವರ ಸಾಧನೆ ಅದ್ಭುತವಾದದ್ದು ಎಂದರು.
ತಹಸೀಲ್ದಾರ್ ಪೃಥ್ವಿ ಸಾನಿಕಂ ಅಧ್ಯಕ್ಷತೆ ವಹಿಸಿದ್ದರು. ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ರಾಜೇಶ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಕೃಷಿ ಕ್ಷೇತ್ರದಲ್ಲಿ ಸಾಧನೆಗೈದ ಯಶೋಧರ, ಎಸ್ಸೆಸ್ಸೆಲ್ಸಿಯಲ್ಲಿ ಒಕ್ಕಲಿಗ ಸಮುದಾಯದಲ್ಲಿ ಅಧಿಕ ಅಂಕಗಳಿಸಿ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕೆಂಪೇಗೌಡರ ಜನ್ಮದಿನಾಚರಣೆ ಪ್ರಯುಕ್ತ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪ್ರಬಂಧ, ಚಿತ್ರಕಲಾ ಹಾಗೂ ಪೈಂಟಿಂಗ್ ಸ್ಪರ್ಧೆಗಳ ಬಹುಮಾನ ವಿತರಿಸಲಾಯಿತು.
ತಾಪಂ ಇಒ ಭವಾನಿ ಶಂಕರ್ ಸ್ವಾಗತಿಸಿದರು. ಸಮಾಜ ಕಲ್ಯಾಣ ಇಲಾಖೆಯ ಹೇಮಲತಾ ನಿರೂಪಿಸಿದರು. ಕಂದಾಯ ಇಲಾಖೆಯ ಹೇಮಾ ವಂದಿಸಿದರು.