ಕಡಬ: ನೆಲ್ಯಾಡಿ ಗ್ರಾಮದ ವ್ಯಕ್ತಿಯೋರ್ವರ ಪಹಣಿಯಲ್ಲಿ ಇಲಾಖೆಯ ಅಧಿಕಾರಿಗಳು ಮಾಡಿದ ಎಡವಟ್ಟಿನಿಂದ ಹೆಚ್ಚುವರಿಯಾಗಿ ಸ್ಟಾರ್ ಸಿಂಬಲ್ ಬಂದಿದ್ದು, ಇದರಿಂದ ಜಾಗದ ಮಾಲೀಕ ಜಾನ್ ಅವರಿಗೆ ಜಾಗ ಮಾರಾಟ ಮಾಡಲು, ಇನ್ನಿತರ ಯಾವುದೇ ಕೆಲಸಗಳಿಗೆ ತೊಂದರೆ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಅವರು ತಿದ್ದುಪಡಿಗಾಗಿ ಕಡಬ ಸರ್ವೆ ಇಲಾಖೆಗೆ ಅರ್ಜಿ ನೀಡಿದ್ದು, ತಿದ್ದುಪಡಿಗೆ ಕೊಟ್ಟು 3 ತಿಂಗಳಾದರೂ ಸತಾಯಿಸುತ್ತಿರುವ ಸರ್ವೆ ಇಲಾಖೆಯ ಅಧಿಕಾರಿಗಳನ್ನು ಕಾಂಗ್ರೆಸ್ ಮುಖಂಡರೋರ್ವರು ತರಾಟೆಗೆ ತೆಗೆದುಕೊಂಡ ಘಟನೆ ಬುಧವಾರ ನಡೆದಿದೆ.
ಮೂರು ತಿಂಗಳಿನಿಂದ ಸತಾಯಿಸುತ್ತಿದ್ದರು!
ಕಡಬ ಸರ್ವೆ ಇಲಾಖೆಯಲ್ಲಿ ಸೂಪರ್ ವೈಸರ್ ಆಗಿರುವ ಅಧಿಕಾರಿ ಹಾಗೂ ಇತರರು ಹಣ ನೀಡುವಂತೆ ಪೀಡಿಸುತ್ತಿದ್ದು, ಮೂರು ತಿಂಗಳಿನಿಂದ ಸತಾಯಿಸುತ್ತಿದ್ದು ಎನ್ನಲಾಗಿದ್ದು, ಈ ಬಗ್ಗೆ ಜಾನ್ ಕಾಂಗ್ರೆಸ್ ಮುಖಂಡ ರಾಯ್ ಅಬ್ರಹಾಂ ಪದವು ಅವರಲ್ಲಿ ವಿಷಯ ತಿಳಿಸಿದ್ದಾರೆ. ಬುಧವಾರ ಸರ್ವೆ ಇಲಾಖೆಗೆ ಆಗಮಿಸಿದ ರಾಯ್ ಅಬ್ರಹಾಂ ಹಾಗೂ ಸೈಯದ್ ಮೀರಾ ಸಾಹೇಬ್ ಅವರು ಎಡಿಎಲ್ಆರ್ ಶ್ರೀನಿವಾಸ ಮೂರ್ತಿ ಅವರನ್ನು ತರಾಟೆಗೆ ತೆಗೆದುಕೊಂಡರು.
ಇಲಾಖೆಯನ್ನು ಕೇಳುವವರು ಯಾರು?
ಇದೇ ಸಂದರ್ಭದಲ್ಲಿ ಅಲ್ಲಿದ್ದ ಹಲವಾರು ಅರ್ಜಿದಾರರು ಪ್ರತಿಕ್ರಿಯೆ ನೀಡಿ, ಇಲ್ಲಿ ಕಂದಾಯ ಇಲಾಖೆ ಮತ್ತು ಸರ್ವೆ ಇಲಾಖೆಯಲ್ಲಿ ಹಣ ಕೊಡದೆ ಒಂದು ಪೈಲು ಮುಂದಕ್ಕೆ ಹೋಗುವುದಿಲ್ಲ, ಇವರನ್ನು ಕೇಳುವವರು ಯಾರು?, ಇಲ್ಲಿ ಜನಪ್ರತಿನಿಧಿಗಳೇ ಬ್ರೋಕರ್ಗಳ ಹಾಗೆ ಕೆಲಸ ಮಾಡುತ್ತಿದ್ದಾರೆ. ಅದೇ ಈ ಭ್ರಷ್ಟ ಅಧಿಕಾರಿಗಳಿಗೆ ರಕ್ಷಣೆಯಾಗಿದೆ. ಈ ಮಧ್ಯೆ ಬಡವರು ತಮ್ಮ ಕೆಲಸಕ್ಕೆ ಪ್ರತಿದಿನ ಬರುವುದಕ್ಕಿಂತ ದುಡ್ಡು ಕೊಟ್ಟು ಹೇಗಾದರೂ ಮಾಡಿಸುತ್ತಿದ್ದಾರೆ. ಇದು ಕಡಬದ ಪರಿಸ್ಥಿತಿ, ದೊಡ್ಡ ಅಧಿಕಾರಿಗಳು ದುಡ್ಡು ಕೇಳಿಯೇ ಪಡೆಯುತ್ತಿದ್ದಾರೆ. ಮತ್ತೆ ಅವರ ಕೆಳಗಿನ ಅಧಿಕಾರಿಗಳಿಗೆ ಯಾವ ಭಯವೂ ಇಲ್ಲದೆ ರಾಜರೋಷವಾಗಿ ಲಂಚ ಪಡೆಯುತ್ತಿದ್ದಾರೆ ಎಂದು ಅಲ್ಲಿದ್ದವರು ಗಂಭೀರವಾಗಿ ಆರೋಪಿಸುತ್ತಿದ್ದರು.