ನವದೆಹಲಿ: ಸಂಪೂರ್ಣವಾಗಿ ಎಥೆನಾಲ್ ಇಂಧನದಿಂದ ಚಲಿಸಬಲ್ಲ ವಿಶ್ವದ ಮೊದಲ ಕಾರನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ಮಂಗಳವಾರ ಬಿಡುಗಡೆ ಮಾಡಿದ್ದಾರೆ. ಟೊಯೊಟಾ ಮೋಟಾರ್ ಸಂಸ್ಥೆ ‘ಇನ್ನೋವಾ ಹೈಕ್ರಾಸ್’ ಮಾಡೆಲ್ನ ಕಾರನ್ನು ನಿರ್ವಿುಸಿದೆ. ಫ್ಲೆಕ್ಸಿ-ಇಂಧನ ಎಂಜಿನ್ನೊಂದಿಗೆ ಕಾರನ್ನು ನಿರ್ಮಾಣ ಮಾಡಲಾಗಿದೆ. ಈ ಕಾರು ಪರ್ಯಾಯ ಇಂಧನಗಳನ್ನು ಬಳಸುವುದರ ಜತೆಗೆ ವಿದ್ಯುತ್ ಶಕ್ತಿಯನ್ನೂ ಉತ್ಪಾದಿಸುತ್ತದೆ. ಇವಿ ಮೋಡ್ನಲ್ಲೂ ಚಲಿಸುತ್ತದೆ. ಇದು ಭಾರತ್ ಸ್ಟೇಜ್-6 ಮಾನದಂಡಕ್ಕೆ ಅನು ಗುಣವಾಗಿದೆ ಎಂದು ಕಂಪನಿ ತಿಳಿಸಿದೆ.
ವಿಶೇಷತೆ ಏನು?: ಕಾರು ಸಂಪೂರ್ಣವಾಗಿ ಎಥೆನಾಲ್ನಿಂದ ಚಲಿಸುತ್ತದೆ. ಲಿಥಿಯಂ-ಅಯಾನ್ ಬ್ಯಾಟರಿ ಪ್ಯಾಕ್ ಹೊಂದಿದ್ದು, ಇವಿ ಮೋಡ್ನಲ್ಲಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. ಸಾಕಷ್ಟು ಶಕ್ತಿಯನ್ನೂ ಉತ್ಪಾದಿಸುತ್ತದೆ. ಸದ್ಯಕ್ಕೆ ಈ ಮಾದರಿಯ ಕಾರು ಯಾವಾಗ ಮಾರುಕಟ್ಟೆಗೆ ಬರಲಿದೆ ಎಂಬ ಬಗ್ಗೆ ಕಂಪನಿ ಯಾವುದೇ ಮಾಹಿತಿ ನೀಡಿಲ್ಲ.
23.24 ಕಿ.ಮೀ. ಮೈಲೇಜ್: ಇನ್ನೋವಾ ಹೈಕ್ರಾಸ್ ಆವೃತ್ತಿಯು ಪ್ರಸ್ತುತ ಭಾರತದಲ್ಲಿ ಮಾರಾಟವಾಗುತ್ತಿರುವ ಇತರ ಹೈಬ್ರಿಡ್ ಆವೃತ್ತಿ ಕಾರುಗಳಿಗಿಂತ ಸ್ವಲ್ಪ ಭಿನ್ನವಾಗಿದೆ. ಎಂಜಿನ್ ಅನ್ನು ಇ-100 ದರ್ಜೆಯ ಎಥೆನಾಲ್ನಲ್ಲಿ ಚಲಾಯಿಸಲು ಅನುಕೂಲವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಇದು ಸ್ವಯಂ ಚಾರ್ಜಿಂಗ್ ಲಿಥಿಯಂ-ಅಯಾನ್ ಬ್ಯಾಟರಿಯನ್ನು ಹೊಂದಿದೆ. 2.0 ಲೀಟರ್ 4-ಸಿಲಿಂಡರ್ ಎಂಜಿನ್ ಹೊಂದಿದೆ. ಈ ಎಂಜಿನ್ 181 ಬಿಎಸ್ಪಿ ಶಕ್ತಿಯನ್ನು ಉತ್ಪಾದಿಸುತ್ತದೆ. ಎಂಜಿನ್ ಅನ್ನು ಇ-ಸಿವಿಟಿ ಟ್ರಾನ್ಸ್ಮಿಷನ್ಗೆ ಜೋಡಿಸಲಾಗಿದೆ. ಇದು ಪ್ರತಿ ಲೀ.ಗೆ 23.24 ಕಿ.ಮೀ ಮೈಲೇಜ್ ನೀಡುತ್ತದೆ.
ಹೈಡ್ರೋಜನ್ ವಾಹನ ಪ್ರಯೋಗ: ಕಳೆದ ವರ್ಷ ಮಾರ್ಚ್ನಲ್ಲಿ ಟೊಯೊಟಾ ಮೋಟಾರ್ಸ್ ಪ್ರಾಯೋಗಿಕ ಯೋಜನೆಯ ಭಾಗವಾಗಿ ಭಾರತದ ಮೊದಲ ಆಲ್-ಹೈಡ್ರೋಜನ್ ಎಲೆಕ್ಟ್ರಿಕ್ ವಾಹನ ಮಿರಾಯ್ ಅನ್ನು ಬಿಡುಗಡೆ ಮಾಡಿತ್ತು. ಟೊಯೊಟಾ ಮಿರಾಯ್ ಪ್ರಪಂಚದ ಮೊದಲ ಹೈಡ್ರೋಜನ್ ಇಂಧನ ಸೆಲ್ ಚಾಲಿತ ಎಲೆಕ್ಟ್ರಿಕ್ ವಾಹನಗಳಲ್ಲಿ ಒಂದಾಗಿದೆ. ಶುದ್ಧ ಹೈಡ್ರೋಜನ್ ಶಕ್ತಿಯಿಂದ ಇದು ಚಲಿಸುತ್ತದೆ.
ಪ್ರಯೋಜನಗಳೇನು?: ಕಳೆದ ವರ್ಷ ಕೇಂದ್ರ ಸರ್ಕಾರವು ಶೇ. 20 ಎಥೆನಾಲ್ ಮಿಶ್ರಿತ ಪೆಟ್ರೋಲ್ ಪರಿಚಯಿಸಿತ್ತು. ಪರ್ಯಾಯ ಇಂಧನಗಳ ಬಳಕೆಯಿಂದ ಕಚ್ಚಾ ತೈಲದ ಮೇಲಿನ ಅವಲಂಬನೆ ಕಡಿಮೆ ಆಗಲಿದೆ. ಇದರಿಂದ ಕಚ್ಚಾತೈಲ ಆಮದು ಪ್ರಮಾಣವನ್ನೂ ಕಡಿಮೆ ಮಾಡಬಹುದಾಗಿದೆ. ಪರ್ಯಾಯ ಇಂಧನದಿಂದ ಪರಿಸರ ಮಾಲಿನ್ಯ ಪ್ರಮಾಣವೂ ಕಡಿಮೆ ಆಗಲಿದೆ. ಇಂಗಾಲಾಮ್ಲ ಹೊರಸೂಸುವಿಕೆ ಪ್ರಮಾಣವೂ ನಿಯಂತ್ರಣಕ್ಕೆ ಬರಲಿದೆ.
ಹೈಬ್ರಿಡ್ ವಾಹನಗಳಿಗೆ ಒತ್ತು: ಜಪಾನ್ ಕಂಪನಿಗಳಾದ ಟೊಯೊಟಾ ಮೋಟಾರ್ಸ್ ಮತ್ತು ಹೋಂಡಾ ಕಾರ್ಸ್ ಭಾರತದಲ್ಲಿ ಹೈಬ್ರಿಡ್ ತಂತ್ರಜ್ಞಾನ ಪರಿಚಯಿಸಲು ಮುಂದಾಗಿವೆ. ಹೋಂಡಾ ಕಾರ್ಸ್ ಕೂಡ ಭಾರತದಲ್ಲಿ ತನ್ನ ಕಾರುಗಳಲ್ಲಿ ಹೈಬ್ರಿಡ್ ತಂತ್ರಜ್ಞಾನವನ್ನು ಬಿಡುಗಡೆ ಮಾಡಿದೆ. ಮೊದಲು ಸಿಟಿ ಸೆಡಾನ್ನಲ್ಲಿ ಇದನ್ನು ಪರಿಚಯಿಸಲಾಯಿತು.
ಉದ್ಯೋಗಾವಕಾಶಗಳು: ಎಥೆನಾಲ್ಗೆ ಹೆಚ್ಚಿನ ಬೇಡಿಕೆ ಬಂದರೆ ಹಳ್ಳಿಗಳು ಮತ್ತು ಪಟ್ಟಣಗಳಲ್ಲಿ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ. ಗ್ರಾಮೀಣ ಪ್ರದೇಶಗಳಿಂದ ಜನರು ವಲಸೆ ಹೋಗುವುದು ತುಸು ಕಡಿಮೆಯಾಗಲಿದೆ. ಎಥನಾಲ್ ಉತ್ಪಾದನೆ ಕೈಗಾರಿಕೆಯಾಗಿ ಮಾರ್ಪಟ್ಟರೆ ಉದ್ಯೋಗ ಮತ್ತು ವ್ಯಾಪಾರ ಅವಕಾಶಗಳು ಹೆಚ್ಚು ಸೃಷ್ಟಿಯಾಗುತ್ತವೆ. ಇಡೀ ಪ್ರದೇಶಕ್ಕೆ ಅದರ ಲಾಭ ಸಿಗುತ್ತದೆ.
ಈಕೆಯ ಕೈ ಸ್ಕ್ಯಾನ್ ಮಾಡಿದ್ರೆ ಸಾಕು ಹಣ ಕಳಿಸಿಕೊಡಬಹುದು; ಇದಕ್ಕಿಂತ ‘ಡೈರೆಕ್ಟ್ ಟ್ರಾನ್ಸ್ಫರ್’ ಅಸಾಧ್ಯ ಅನಿಸುತ್ತೆ!