ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಪೊಲೀಸ್ ಸಬ್ಇನ್ಸ್ಪೆಕ್ಟರ್ ನೇಮಕಾತಿ ಹಗರಣ ದಾಟಿ 545 ಹುದ್ದೆಗಳ ನೇಮಕಾತಿಗೆ ಮರು ಲಿಖಿತ ಪರೀಕ್ಷೆ ನಡೆದು ಆರು ತಿಂಗಳು ಕಳೆದರೂ ಆಯ್ಕೆಪಟ್ಟಿ ಪ್ರಕಟವಾಗಿಲ್ಲ. ಈ ಬಗ್ಗೆ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿರುವ ಅಭ್ಯರ್ಥಿಗಳಲ್ಲಿ ಇದೀಗ ಬಾಕಿ ಇರುವ 402 ಪಿಎಸ್ಐ ಹುದ್ದೆಗಳ ನೇಮಕಾತಿಯಲ್ಲೂ ಆತಂಕ ಎದುರಾಗಿದೆ.
ರಾಜ್ಯ ಪೊಲೀಸ್ ನೇಮಕಾತಿ ವಿಭಾಗ 2020ರ ಏಪ್ರಿಲ್ನಲ್ಲಿ 402 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿತ್ತು. ಎಂದಿನಂತೆ ಇನ್ಸರ್ವೀಸ್ ಮೀಸಲಾತಿ ಬಯಸುವ ಅರ್ಹ ಪೊಲೀಸ್ ಸಿಬ್ಬಂದಿ, ನೇರ ಮತ್ತು ಇನ್ಸರ್ವೀಸ್ ನೇಮಕಾತಿ ವಿಭಾಗದಲ್ಲೂ ಅರ್ಜಿ ಸಲ್ಲಿಸುತ್ತಿದ್ದರು. ಆದರೆ, 545 ಹುದ್ದೆಗಳ ನೇಮಕಾತಿ ಅಕ್ರಮದ ಪರಿಣಾಮ ಲಿಖಿತ ಪರೀಕ್ಷೆ ಜವಾಬ್ದಾರಿ ಪೊಲೀಸ್ ನೇಮಕಾತಿಯಿಂದ ತೆಗೆದು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (ಕೆಇಎ) ವಹಿಸಲಾಗಿತ್ತು. ಒಂದು ಅರ್ಜಿಗೆ ಒಂದೇ ಹಾಲ್ ಟಿಕೆಟ್ ನಿಯಮವೆಂದು ಇನ್ಸರ್ವೀಸ್ ಮೀಸಲಾತಿ ಬಯಸಿದ್ದ ಪೊಲೀಸ್ ಸಿಬ್ಬಂದಿಗೆ ನೇರ ನೇಮಕಾತಿಯಲ್ಲಿ ಪರೀಕ್ಷೆ ಬರೆಯುವಂತೆ ಹಾಲ್ ಟಿಕೆಟ್ ನೀಡಲಾಗಿತ್ತು. ಇದರಿಂದ ಸೇವಾನಿರತ ಕರೆಪತ್ರದಿಂದ ವಂಚಿತರಾಗಿದ್ದರು.
ಇದೀಗ 402 ಹುದ್ದೆ ನೇಮಕಾತಿಗೆ ಸೆ.22ರಂದು ಲಿಖಿತ ಪರೀಕ್ಷೆ ನಡೆಸಲು ಕೆಇಎ ನಿರ್ಧರಿಸಿದೆ. ಇತ್ತ ಪೊಲೀಸ್ ನೇಮಕಾತಿ ವಿಭಾಗದಲ್ಲಿದ್ದ ಅಭ್ಯರ್ಥಿಗಳ ಡೇಟಾವನ್ನು ವಾರದ ಹಿಂದೆಯಷ್ಟೇ ಕೆಇಎಗೆ ವರ್ಗಾವಣೆ ಮಾಡಲಾಗಿತ್ತು. ಅರ್ಹ ಅಭ್ಯರ್ಥಿಗಳ ಮೊಬೈಲ್ಗೆ ಎಸ್ಎಂಎಸ್ ಮೂಲಕ ಅಲರ್ಟ್ ಸಹ ಮಾಡಲಾಗಿದೆ. ಪರೀಕ್ಷಾ ಕೇಂದ್ರ ಗುರುತಿಸುವುದು, ಕರೆಪತ್ರಗಳನ್ನು ಸಿದ್ಧಪಡಿಸುವ ಪ್ರಕ್ರಿಯೆಯನ್ನು ಕೆಇಎ ಶುರು ಮಾಡಿದೆ. ಸೇವಾನಿರತ ಮೀಸಲಾತಿ ಬಯಸಿರುವ ಸಾವಿರಾರು ಪೊಲೀಸ್ ಸಿಬ್ಬಂದಿ, ಹಾಲ್ ಟಿಕೆಟ್ ಕುರಿತು ಗೊಂದಲಕ್ಕೆ ಒಳಗಾಗಿದ್ದಾರೆ. ಅದರಲ್ಲಿಯೂ ನೇರ ಮತ್ತು ಸೇವಾನಿರತ ಎರಡರಲ್ಲೂ ಅರ್ಜಿ ಸಲ್ಲಿಸಿರುವ ಕಾನ್ಸ್ಟೆಬಲ್ಗಳಲ್ಲಿ ಆತಂಕ ಮನೆ ಮಾಡಿದೆ.
545 ಹುದ್ದೆ ನೇಮಕಾತಿಯಲ್ಲಿ ಇವರಿಗೆ ನೇರ ನೇಮಕಾತಿ ಹಾಲ್ ಟಿಕೆಟ್ ಮಾತ್ರ ಲಭ್ಯವಾಗಿದ್ದವು. ಈ ಬಗ್ಗೆ ಗೃಹ ಇಲಾಖೆ ಗಮನಕ್ಕೆ ತಂದಾಗ ಮೊದಲ ಬಾರಿ ಯಾವ ವರ್ಗದಲ್ಲಿ ಪರೀಕ್ಷೆ ಬರೆದಿರುತ್ತಾರೋ ಅದನ್ನೇ ಅನ್ವಯ ಮಾಡಿ ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ, ಇದೀಗ 545 ಹುದ್ದೆ ಆಯ್ಕೆಪಟ್ಟಿ ಪ್ರಕಟ ಮಾಡದ ಕಾರಣ 402 ಹುದ್ದೆ ನೇಮಕಾತಿ ಅಭ್ಯರ್ಥಿಗಳಲ್ಲಿ ಗೊಂದಲ ನಿವಾರಣೆ ಆಗಿಲ್ಲ. ಈ ಎಲ್ಲ ಅಭ್ಯರ್ಥಿಗಳು ಸೇವಾನಿರತ ಕರೆಪತ್ರ ಸಿಗದೆ ಇದ್ದರೇ ಕೋರ್ಟ್ ಮೆಟ್ಟಿಲೇರುವ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆ.
ಯುವಕರ ಭವಿಷ್ಯದಲ್ಲಿ ಚೆಲ್ಲಾಟ : 545 ಎಸ್ಐ ನೇಮಕಾತಿಗೆ 2020ರಲ್ಲಿ ಅರ್ಜಿ ಕರೆದು ಕೊನೆಗೆ ಹಗರಣದಲ್ಲಿ ಸಿಲುಕಿ ಹೈಕೋರ್ಟ್ ತೀರ್ಪಿನಂತೆ ಜನವರಿಯಲ್ಲಿ ಮರು ಪರೀಕ್ಷೆ ನಡೆಸಲಾಗಿದೆ. ಇದೀಗ ಕಲ್ಯಾಣ ಕರ್ನಾಟಕ ಮೀಸಲಾತಿ ಕುರಿತು 2023ರಲ್ಲಿ ಹೊರಡಿಸಿರುವ ಸುತ್ತೋಲೆಯಿಂದ ಗೊಂದಲ ಉಂಟಾಗಿ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಲು ಗೃಹ ಇಲಾಖೆ ತಿಣುಕಾಡುತ್ತಿದೆ. ಪರಿಣಾಮ ಸರ್ಕಾರದ ಎಲ್ಲ ಇಲಾಖೆಯ ನೇಮಕಾತಿ ಮೇಲೂ ಪರಿಣಾಮ ಬೀರಿದೆ. ಕಾನೂನು ರೀತಿ ದಿಟ್ಟ ನಿರ್ಧಾರ ತೆಗೆದುಕೊಳ್ಳದೇ ಇದ್ದರೆ ಮತ್ತೆ ಹೈಕೋರ್ಟ್ ಮೆಟ್ಟಿಲೇರುವುದಾಗಿ ಅಭ್ಯರ್ಥಿಗಳು ಎಚ್ಚರಿಸಿದ್ದಾರೆ.
2 ನೇಮಕಾತಿಗೂ ಇಂಟರ್ಲಿಂಕ್ : 545 ಮತ್ತು 402 ಹುದ್ದೆಗಳ ನೇಮಕಾತಿಗೆ ಪ್ರತ್ಯೇಕ ನೋಟಿಫಿಕೇಷನ್ ಹೊರಡಿಸಿದರೂ ಒಂದಕ್ಕೊಂದು ಇಂಟರ್ಲಿಂಕ್ ಇದೆ. ಎರಡೂ ನೇಮಕಾತಿಗೂ ಒಮ್ಮೆಯೇ ದೇಹದಾರ್ಢ್ಯ ಪರೀಕ್ಷೆ ನಡೆಸಿ ಅರ್ಹತಾ ಪ್ರಮಾಣಪತ್ರ ನೀಡಲಾಗಿದೆ. ಆದರಿಂದ 545 ಹುದ್ದೆ ನೇಮಕಾತಿ ಪೂರ್ಣವಾದ ಮೇಲೆಯೇ 402 ಹುದ್ದೆ ಪ್ರಕಟಿಸಬೇಕಾಗಿದೆ. ಅಲ್ಲದೆ, ಕಲ್ಯಾಣ ಕರ್ನಾಟಕ ಮೀಸಲಾತಿಯನ್ನು ಯಾವ ರೀತಿ ಅಳವಡಿಸುತ್ತಾರೋ ಇದೇ ಮುಂದಿನ ನೇಮಕಾತಿಗೂ ಅಳವಡಿಸಿ ಆಯ್ಕೆಪಟ್ಟಿ ಪ್ರಕಟಿಸಲು ನಿರ್ಧರಿಸಿದೆೆ.
ಹೊಸ ಕ್ರಿಮಿನಲ್ ಅಪರಾಧ ಕಾನೂನಿನಡಿ ದಿನವೇ ರಾಜ್ಯಾದ್ಯಂತ 63 ಎಫ್ಐಆರ್ ದಾಖಲು