ಮಂಡ್ಯ: ತಾಲೂಕಿನ ರಾಗಿಮುದ್ದನಹಳ್ಳಿ ಗ್ರಾಮದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸ್ಟೇರಿಂಗ್ ರಾಡ್ ತುಂಡಾದ ಪರಿಣಾಮ ಕೆಎಸ್ಆರ್ಟಿಸಿ ಬಸ್ ಸರ್ವೀಸ್ ರಸ್ತೆಗೆ ನುಗ್ಗಿ ಹಳ್ಳಕ್ಕೆ ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ.
ಚಾಲಕ ಶೇಖರ್ ಎಂಬಾತನ ಕಾಲು ಮುರಿದಿದೆ. ನಿರ್ವಾಹಕ ರವಿಚಂದ್ರ, ದೀಪಕ್, ಭಾಸ್ಕರ್, ಅಭಿ, ಕುಶಾಲ್, ನಾಗರಾಜು ಗಾಯಗೊಂಡಿದ್ದು, ಎಲ್ಲರಿಗೂ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು.
ಮಂಡ್ಯದಿಂದ ಮೈಸೂರಿನ ಕಡೆಗೆ ರಾಗಿಮುದ್ದನಹಳ್ಳಿ ಗ್ರಾಮದ ಟೋಲ್ ರಸ್ತೆಯಲ್ಲಿ ತೆರಳುತ್ತಿದ್ದ ಬಸ್ನಲ್ಲಿ 30ಕ್ಕೂ ಹೆಚ್ಚು ಪ್ರಯಾಣಿಕರು ಇದ್ದರು. ಈ ವೇಳೆ ಇದ್ದಕ್ಕಿದ್ದಂತೆ ಸ್ಟೇರಿಂಗ್ ರಾಡ್ ತುಂಡಾಗಿದೆ. ತಕ್ಷಣವೇ ಚಾಲಕ ಹರಸಾಹಸಪಟ್ಟು ಬಸ್ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಬಸ್ ವೇಗದಲ್ಲಿದ್ದ ಕಾರಣ ಸರ್ವೀಸ್ ರಸ್ತೆಗೆ ಇಳಿದು ಹಳ್ಳಕ್ಕೆ ನುಗ್ಗಿದೆ.
ಬಸ್ ನುಗ್ಗಿದ ರಭಸಕ್ಕೆ ಕಾರು, ಮೂರು ಬೈಕ್ಗಳು ಜಖಂ ಆಗಿವೆ. ಅಲ್ಲೇ ಪಕ್ಕದಲ್ಲಿಯೇ ಹೋಟೆಲ್ ಬಳಿ ನಿಂತಿದ್ದ ರಾಗಿಮುದ್ದನಹಳ್ಳಿ ಗ್ರಾಮದ ಕೆಂಪೇಗೌಡ, ಕೋಡಿಶೆಟ್ಟಿಪುರದ ಕುಮಾರ ಅವರ ಬೈಕ್ಗಳಿಗೂ ಬಸ್ ಡಿಕ್ಕಿ ಹೊಡೆದುಕೊಂಡು ಹೋಗಿ ಹಳ್ಳಕ್ಕೆ ಹೋಗಿ ಬಿದ್ದಿದೆ. ಈ ಎಲ್ಲ ಘಟನೆ ಪಕ್ಕದಲ್ಲಿದ್ದ ಕಾರದ ಪುಡಿ ಕಾರ್ಖಾನೆಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಗ್ರಾಮಸ್ಥರ ಸಹಕಾರದಿಂದ ಆಂಬುಲೆನ್ಸ್ನಲ್ಲಿ ಗಾಯಾಳುಗಳನ್ನು ಮಿಮ್ಸ್ಗೆ ಕಳುಹಿಸಲಾಗಿದೆ. ವಿಷಯ ತಿಳಿದ ತಕ್ಷಣ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಅವರು ಅಪಘಾತ ನಡೆದ ಸ್ಥಳಕ್ಕೆ ಭೇಟಿ ನೀಡಿದರು. ಈ ಸಂಬಂಧ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.