More

    ರಸ್ತೆಯಲ್ಲಿ ರಾಸುಗಳಿಂದ ಹಾಲು ಕರೆದು ಪ್ರತಿಭಟಿಸಿದ ಬಿಜೆಪಿ – ಜೆಡಿಎಸ್ ಕಾರ್ಯಕರ್ತರು

    ರಾಮನಗರ : ಹಾಲಿನ ದರ ಹೆಚ್ಚಿಸಿರುವ  ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಬಿಜೆಪಿ ರೈತಮೋರ್ಚಾ ಹಾಗೂ ಜೆಡಿಎಸ್ ಕಾರ್ಯಕರ್ತರು ನಗರದಲ್ಲಿ ಶನಿವಾರ ಜಾನುವಾರುಗಳ ಸಮೇತ ಪ್ರತಿಭಟನೆ ನಡೆಸುವ ಮೂಲಕ ಕಿಡಿಕಾರಿದರು.

    ಹಸುಗಳ ಸಮೇತ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲು ಮುಂದಾದ ಬಿಜೆಪಿ – ಜೆಡಿಎಸ್ ಕಾರ್ಯಕರ್ತರನ್ನು ಬೆಂಗಳೂರು ಮೈಸೂರು ರಸ್ತೆ ಜಿಲ್ಲಾಧಿಕಾರಿ ಕಛೇರಿ ಪ್ರವೇಶ ದ್ವಾರದಲ್ಲಿಯೇ ಪೋಲೀಸರು ತಡೆದರು. ಈ ವೇಳೆ ಕಾರ್ಯಕರ್ತರು ರಸ್ತೆಯಲ್ಲಿಯೇ ಕುಳಿತು ಪ್ರತಿಭಟಿಸಿದರು.

    ಈ ವೇಳೆ ಮಾತನಾಡಿದ ರಾಜ್ಯ ಬಿಜೆಪಿ ರೈತಮೋರ್ಚಾ ರಾಜ್ಯ ಉಪಾಧ್ಯಕ್ಷ ಎಂ. ರುದ್ರೇಶ್  ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪೆಟ್ರೋಲ್, ಹಾಲು ಸೇರಿದಂತೆ ಅಗತ್ಯ ವಸ್ತುಗಳ ಬೆಲೆಗಳನ್ನು ಹೆಚ್ಚಳ ಮಾಡಿದೆ. ಅದರಲ್ಲಿಯೂ 50 ಮಿ.ಲೀ ಹಾಲನ್ನು ಕೊಟ್ಟಂತೆ ಮಾಡಿ ಪ್ರತಿಹಾಲಿನ ಪ್ಯಾಕೆಟ್ ಮೇಲೆ 2.10 ರೂ. ಹೆಚ್ಚಳ ಮಾಡಿರುವುದು ಮೂಗಿಗೆ ತುಪ್ಪ ಸವರಿದಂತೆ ಮಾಡಿದ್ದಾರೆ.

    ರೈತರಿಗೆ ಹಾಲಿನ ಖರೀದಿ ದರದಲ್ಲಿ ಯಾವುದೇ ಹೆಚ್ಚಳ ಮಾಡಿಲ್ಲ ವ್ಯಾಪಾರಕ್ಕೆ ಮಾತ್ರ ಹೆಚ್ಚಳ ಮಾಡಿದ್ದಾರೆ. ಸರ್ಕಾರಕ್ಕೆ 50 ಮೀ.ಲೀಟರ್ ಹೆಚ್ಚು ಹಾಲು ಬೇಕೆಂದು ಯಾರು ಕೇಳಿದ್ದರು. ಜನರು ಕೇಳಿದ್ದನ್ನು ಮೊದಲು ಕೊಡಬೇಕು ಎಂದರು.

    ರಾಜ್ಯ ಕಾಂಗ್ರೇಸ್ ಸರ್ಕಾರ ರಾಜ್ಯದ ರೈತರ, ಜನರ ಮೇಲೆ ಬೆಲೆ ಏರಿಕೆ ಮಾಡಿ ಬರೆ ಎಳೆಯುತ್ತಿದೆ. ಜನ ವಿರೋಧಿ ಕಾಂಗ್ರೇಸ್ ಸರ್ಕಾರ ಹಾಲಿನ ಬೆಲೆ ಹೆಚ್ಚಳ ಮಾಡಿರುವ ಕಾರಣ ಶ್ರೀ ಸಾಮಾನ್ಯ ಸೇವಿಸುವ ಕಾಫಿ, ಟೀ, ಬೆಲೆಗಳು ಕೂಡ ಹೆಚ್ಚಳ ಆಗುತ್ತಿದೆ. ಇದು ಪ್ರತೀ ಜನರ ಮೇಲೂ ಪರಿಣಾಮ ಬೀರುತ್ತದೆ ಎಂದು ಕಿಡಿಕಾರಿದರು.

    ಜಿಲ್ಲಾ ರೈತಮೋರ್ಚಾ ಅಧ್ಯಕ್ಷ ಪ್ರಕಾಶ್ ಮಾತನಾಡಿ ಪೆಟ್ರೋಲ್, ಡೀಸೆಲ್ ದರವನ್ನೂ ಹೆಚ್ಚಳ ಮಾಡಿದ್ದು, ಇದರಿಂದ ಸರಕು ಸಾಗಣೆ ಬೆಲೆ ಹೆಚ್ಚಳವಾಗಿದೆ. ಅಗತ್ಯ ವಸ್ತುಗಳ ದರವೂ ದುಬಾರಿಯಾಗಿದ್ದು, ಸರ್ಕಾರ ಜನರಜೀವನದ ಜೊತೆ ಚೆಲ್ಲಾಟ ಆಗುತ್ತಿದೆ. ಬೆಲೆ ನಿಯಂತ್ರಣ ಮಾಡುವುದಾಗಿ ಭರವಸೆ ಕೊಟ್ಟು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಅಗತ್ಯ ವಸ್ತುಗಳ ಬೆಲೆಗಳನ್ನು ಏರಿಕೆ ಮಾಡುತ್ತಿದೆ. ರೈತರಿಗೆ ಹಾಲಿನ ದರ ಹೆಚ್ಚಿಗೆ ಮಾಡದೆ ಗ್ರಾಹಕರ ಜೇಬಿಗೆ ಕತ್ತರಿಹಾಕಿ ಆದಾಯ ಗಳಿಸಲು ವಾಮಮಾರ್ಗದಲ್ಲಿ ಸರ್ಕಾರ ನಡೆಸುತ್ತಿದೆ ಎಂದು ಟೀಕಿಸಿದರು.

    ಪ್ರತಿಭಟನೆಗೆ ಕರೆತಂದಿದ್ದ ಹಸುಗಳಲ್ಲಿ ರಾಜ್ಯ ರೈತಮೋರ್ಚಾ ಉಪಧ್ಯಕ್ಷ ಎಂ. ರುದ್ರೇಶ್ ಸೇರಿದಂತೆ ಹಲವರು ಹಸುಗಳಲ್ಲಿ ಹಾಲು ಕರೆಯುವ ಮೂಲಕ ವಿನೂತನವಾಗಿ ಪ್ರತಿಭಟಿಸಿದರು.

    ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ, ಮಾಜಿ ಅಧ್ಯಕ್ಷ ಹುಲುವಾಡಿ ದೇವರಾಜು, ಗ್ರೇಟರ್ ಬಿಡದಿ ಸ್ಮಾರ್ಟ್ ಸಿಟಿ ಯೋಜನಾ ಪ್ರಾಧಿಕಾರ ಮಾಜಿ ಅಧ್ಯಕ್ಷ ವರದರಾಜುಗೌಡ, ಜಿಲ್ಲಾ ಬಿಜೆಪಿ ರೈತಮೋರ್ಚಾ ಅಧ್ಯಕ್ಷ ಪ್ರಕಾಶ್, ತಾಲೂಕು ಅಧ್ಯಕ್ಷ ಜಗದೀಶ್, ಪ್ರಾಧಿಕಾರ ಮಾಜಿ ಅಧ್ಯಕ್ಷರುಗಳಾದ ಎಸ್.ಆರ್.ನಾಗರಾಜು, ಮುರಳೀಧರ್, ಮಹಿಳಾ ಘಟಕ ಜಿಲ್ಲಾಧ್ಯಕ್ಷೆ ಪುಷ್ಪಲತಾ, ಜೆಡಿಎಸ್ ರಾಜ್ಯ ವಕ್ತಾರ ನರಸಿಂಹಮೂರ್ತಿ, ಮುಖಂಡರಾದ ಪಿ.ಅಶ್ವತ್ಥ್, ನರಸಿಂಹಮೂರ್ತಿ, ಕೆ.ವಿ.ನಾಗಾನಂದ, ಸಬ್ಬಕೆರೆ ಶಿವಲಿಂಗಯ್ಯ, ಕಾಳಯ್ಯ, ಅಂಜನಾಪುರ ವಾಸು, ದರ್ಶನ್ ರೆಡ್ಡಿ, ಜಯಕುಮಾರ್, ನಾಗರಾಜು, ರಮೇಶ್, ಸಂಜಯ್, ಚಂದ್ರಶೇಖರರೆಡ್ಡಿ, ಮಹೇಶ್, ಕೆಂಪರಾಜು ಮಂಜು, ದೇವಿಕಾ, ಗೂಳಿಗೌಡ, ಶಶಿಕಲಾ, ಗೋವಿಂದರಾಜು ಮುಂತಾದವರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts